ಮೈಸೂರು ದಸರಾ: ದುರ್ಗಾಮಾತೆ ಶಾಂತಿಗೆ ನಡೆಯುವ ವಜ್ರಮುಷ್ಠಿ ಕಾಳಗ
ಮೈಸೂರು, ಅಕ್ಟೋಬರ್ 13: ಮೈಸೂರು ದಸರಾವನ್ನು ಸರಳವಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಈ ಬಾರಿ ರದ್ದುಗೊಳಿಸಲಾಗಿದ್ದು, ಅದರಲ್ಲಿ ವಜ್ರಮುಷ್ಠಿ ಕಾಳಗವೂ ಒಂದಾಗಿದೆ.
ಬೇರೆ ದಿನಗಳಲ್ಲಿ ಮೈಸೂರು ಮಾತ್ರವಲ್ಲದೆ ಎಲ್ಲೆಡೆಯೂ ಕುಸ್ತಿ ಪಂದ್ಯಾವಳಿ ನಡೆಯುತ್ತದೆ. ಆದರೆ ಕುಸ್ತಿ ಪಂದ್ಯಾವಳಿಯಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟವಾದ ವಜ್ರಮುಷ್ಠಿ ಕಾಳಗವನ್ನು ಮೈಸೂರು ದಸರಾ ಹೊರತು ಪಡಿಸಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ಕಾಳಗ ಮೈಸೂರು ಮಹರಾಜರ ಕಾಲದ್ದಾಗಿದ್ದು, ಈ ಕಾಳಗದಲ್ಲಿ ಸೆಣಸಾಡುವ ಜಟ್ಟಿಗಳಿಗೆ ಮಹರಾಜರ ಆಸ್ಥಾನದಲ್ಲಿ ವಿಶೇಷ ಸ್ಥಾನಮಾನ ನೀಡಲಾಗುತ್ತಿತ್ತು.
ಮೈಸೂರು ದಸರಾ; ಈ ಬಾರಿ ಜಟ್ಟಿಗಳ ವಜ್ರಮುಷ್ಟಿ ಕಾಳಗವೂ ರದ್ದು
ಅಷ್ಟೇ ಅಲ್ಲದೆ ನವರಾತ್ರಿ ಸಂದರ್ಭ ವಜ್ರಮುಷ್ಠಿ ಕಾಳಗದ ಮೂಲಕ ದುರ್ಗಾ ಮಾತೆಗೆ ಶಾಂತಿ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಹಿಂದಿನ ಕಾಲದಲ್ಲಿ ವಜ್ರಮುಷ್ಠಿ ಕಾಳಗ ಮಾಡುತ್ತಿದ್ದ ಜಟ್ಟಿಗಳನ್ನು ಆಸ್ಥಾನದಲ್ಲಿರಿಸಿ ಅವರನ್ನು ಗೌರವದಿಂದಲೇ ನೋಡಿಕೊಳ್ಳಲಾಗುತ್ತಿತ್ತು. ಆದರೆ ಸ್ವಾತಂತ್ರ್ಯ ನಂತರ ಸರ್ಕಾರ ದಸರಾವನ್ನು ಆಚರಿಸಲು ಆರಂಭಿಸಿದ ಬಳಿಕ ವಜ್ರಮುಷ್ಠಿಯನ್ನು ಸಂಪ್ರದಾಯವಾಗಿ ದಸರಾ ಸಂದರ್ಭ ಅದರಲ್ಲೂ ಜಂಬೂಸವಾರಿ ದಿನದಂದು ನಡೆಸುತ್ತಾ ಬರಲಾಯಿತು.
ನಿರಾಸೆ ಮೂಡಿಸಿರುವುದಂತು ಸತ್ಯ
ಈ ಕಾಳಗದಲ್ಲಿ ಭಾಗವಹಿಸಲು ಸೀಮಿತ ಜಟ್ಟಿಗಳನ್ನು ಸರ್ಕಾರದಿಂದ ಆಹ್ವಾನಿಸಲಾಗುತ್ತಿತ್ತು. ಆದರೆ ಕೊರೊನಾ ಮಹಾಮಾರಿ ಈ ವರ್ಷದ ಜಟ್ಟಿ ಕಾಳಗದ ಸಂಭ್ರಮಕ್ಕೆ ತಣ್ಣೀರು ಎರಚಿದೆ. ಏಕೆಂದರೆ ಈ ವಜ್ರಮುಷ್ಠಿ ಕಾಳಗಕ್ಕಾಗಿಯೇ ಜಟ್ಟಿ ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಗಳು ಆರು ತಿಂಗಳಿನಿಂದ ತಾಲೀಮು ನಡೆಸುವುದರೊಂದಿಗೆ ಸಿದ್ಧರಾಗಿದ್ದರು. ಆದರೆ ಇದೀಗ ರದ್ದುಗೊಂಡಿರುವುದು ಅವರಲ್ಲಿ ನಿರಾಸೆ ಮೂಡಿಸಿರುವುದಂತು ಸತ್ಯ.
ಸಾಂಪ್ರದಾಯಿಕವಾಗಿ ನಡೆದು ಬಂದ ಆಚರಣೆ
ಇನ್ನು ಜಟ್ಟಿ ಕಾಳಗದ ಬಗ್ಗೆ ನೋಡುವುದಾದರೆ, ಇದಕ್ಕೆ ತನ್ನದೇ ಆದ ಇತಿಹಾಸವಿರುವುದನ್ನು ನಾವು ಕಾಣಬಹುದಾಗಿದೆ. ಮೈಸೂರು ದಸರಾದ ಜಂಬೂಸವಾರಿ ದಿನ ಬೆಳಿಗ್ಗೆ ವಜ್ರಮುಷ್ಠಿ ಕಾಳಗ ನಡೆಯುತ್ತದೆ. ಅರಮನೆ ಆವರಣದಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ಸಾಂಪ್ರದಾಯಿಕವಾಗಿ ನಡೆದು ಬಂದ ಆಚರಣೆಯಾಗಿದೆ. ಇದು ಎಲ್ಲ ಫೈಲ್ವಾನ್ ಗಳಿಂದ ಸಾಧ್ಯವಾಗುವುದಿಲ್ಲ. ಇದಕ್ಕೆಂದೇ ನುರಿತ ಪೈಲ್ವಾನ್ ಗಳಿದ್ದು, ಅವರಷ್ಟೆ ಪಾಲ್ಗೊಂಡು ವಜ್ರಮುಷ್ಠಿ ಕಾಳಗಕ್ಕೆ ಶೋಭೆ ತರುತ್ತಾರೆ.
ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು
ಈ ವಜ್ರಮುಷ್ಠಿ ಕಾಳಗದ ಇತಿಹಾಸವನ್ನು ನೋಡುವುದಾದರೆ ಮತ್ತು ಅದು ಮೈಸೂರು ದಸರಾದಲ್ಲಿ ಹೇಗೆ ಸ್ಥಾನ ಪಡೆಯಿತು ಎಂಬುವುದನ್ನು ನೋಡುವುದಾದರೆ ಮೈಸೂರು ಮಹಾರಾಜರು ದುರ್ಗಾ ಮಾತೆಯ ಶಾಂತಿಗಾಗಿ ನವರಾತ್ರಿಯಲ್ಲಿ ಇದನ್ನು ಆಚರಣೆಗೆ ತಂದರು ಎಂದು ಹೇಳಲಾಗುತ್ತಿದೆ. ವಜ್ರಮುಷ್ಠಿಯಲ್ಲಿ ಪಾಲ್ಗೊಳ್ಳುವ ಪೈಲ್ವಾನ್ ಗಳು ತಲೆಬೋಳಿಸಿ ದೃಢಕಾಯವಾಗಿರುವ ಅನುಭವಿ ವಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು. ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ.
ದಸರಾ ದಿನ ಸಾಮರ್ಥ್ಯ ಪ್ರದರ್ಶಿಸಿ ವಜ್ರಮುಷ್ಠಿ ಕಾಳಗಕ್ಕೆ ಮೆರಗು
ಆದರೆ ಇಬ್ಬರೂ ದೃಢಕಾಯರಾಗಿರುವುದರಿಂದ ಪ್ರತಿ ಪ್ರಹಾರವನ್ನು ತಪ್ಪಿಸಿಕೊಂಡು ಕಾಳಗ ನಡೆಸುತ್ತಾರೆ. ಇದು ನೋಡಲು ರೋಚಕವಾಗಿರುತ್ತದೆ. ಜಟ್ಟಿಗಳ ತಲೆ ಮೇಲೆ ರಕ್ತ ಹೊರ ಬರುವವರೆಗೂ ಕಾಳಗ ನಡೆಯುತ್ತದೆ. ಈಗ ಕೆಲವೇ ಕೆಲವು ಪೈಲ್ವಾನರು ಮಾತ್ರ ವಜ್ರಮುಷ್ಠಿ ಕಾಳಗವನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ದಸರಾ ಸಂದರ್ಭ ನಡೆಯುವ ಕಾಳಗದಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಭಾಗವಹಿಸುವ ಪೈಲ್ವಾನರು ಕಟ್ಟುನಿಟ್ಟಿನ ವ್ರತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದಲ್ಲದೆ, ಒಂದು ತಿಂಗಳ ಹಿಂದಿನಿಂದಲೇ ತಾಲೀಮು ನಡೆಸಿ ಸಿದ್ಧರಾಗುತ್ತಾರೆ. ದಸರಾ ದಿನ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ವಜ್ರಮುಷ್ಠಿ ಕಾಳಗಕ್ಕೆ ಮೆರಗು ತರುತ್ತಾರೆ.
ಆದರೆ ತಲತಲಾಂತರದಿಂದ ನಡೆದುಕೊಂಡು ಬರುತ್ತಿದ್ದ, ವಜ್ರಮುಷ್ಠಿ ಕಾಳಗ ಈ ಬಾರಿ ನಡೆಯಲ್ಲ ಎಂಬುದು ಮಾತ್ರ ನಿಜಕ್ಕೂ ಬೇಸರದ ಸಂಗತಿಯೇ...
Recommended Video