ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಗೆ ಸಂಭ್ರಮದ ಸ್ವಾಗತ!
ಮೈಸೂರು, ಸೆ. 02: ಕೊರೊನಾ ಸಂಕಷ್ಟದ ಮಧ್ಯೆ ದಸರಾ ಆಚರಣೆಗಳು ಶುರುವಾಗಿವೆ. ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಮೈಸೂರು ದಸರಾ ಆಚರಣೆಯಲ್ಲಿ ಜಾರಿಗೆ ತರಲಾಗಿದೆ. ಅರಮನೆಯ ಪೂರ್ವದಿಕ್ಕಿನ ಜಯಮಾರ್ತಾಂಡ ಮಹಾದ್ವಾರದಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆಗೆ ಸಂಪ್ರದಾಯಿಕ ಚಾಲನೆ ನೀಡಲಾಯಿತು.
ಬಳಿಕ ಪೊಲೀಸ್ ಇಲಾಖೆ ವತಿಯಿಂದ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಗಾರ್ಡ್ ಆಫ್ ಆನರ್ ಸಲ್ಲಿಸಲಾಯಿತು. ಅಲ್ಲಿಂದ ಮಧ್ಯಾಹ್ನ 12.45 ರ ಸುಮಾರಿಗೆ ನಾದಸ್ವರ ಹಾಗೂ ಪೂರ್ಣಕುಂಭದ ಮೂಲಕ ಅರಮನೆಯ ಬಾಗಿಲಿಗೆ ಗಜಪಡೆಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿ ಗಜಪಡೆಗಳಿಗೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ನಾಳೆ ಅರಮನೆ ಪ್ರವೇಶ ಪಡೆಯುವ ಆನೆಗಳು; ಜಂಬೂಪಡೆಯ ಸಂಪೂರ್ಣ ವಿವರ ಇಲ್ಲಿದೆ...
ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕನಿಷ್ಟ ಸಂಖ್ಯೆಯ ಜನರು ಭಾಗವಹಿಸುವ ಮೂಲಕ ಈ ಬಾರಿಯ ದಸರಾ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಸಲ ಲಕ್ಷಾಂತರ ಜನರು ಭಾಗವಹಿಸುವ ಮೈಸೂರು ದಸರಾದಲ್ಲಿ ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಂಪ್ರದಾಯ ಮುಂದುವರೆಸಿಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ.
ತಾಂಬೂಲ ಹಸ್ತಾಂತರ
ನಾಡಹಬ್ಬ ದಸರಾವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಪ್ರಮುಖ ಅಧಿಕಾರಿಗಳಿಗೆ ಫಲ ತಾಂಬೂಲಗಳನ್ನು ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾವುತರು, ಕಾವಾಡಿಗರಿಗೆ ಮೂಲಭೂತ ಸಾಮಗ್ರಿಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಣೆ ಮಾಡಲಾಯಿತು. ಗಜಪಡೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಾವುತರು ಹಾಗೂ ಕಾವಾಡಿಗರಿಗೆ ಆಹ್ವಾನಿತರಿಂದ ಮೂಲಭೂತ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಅಂಬಾರಿ ಆನೆ ಅಭಿಮನ್ಯು
ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು, ಬಳಿಕ ಅರಮನೆಯ ಗೊಂಬೆ ತೊಟ್ಟಿಲಿಗೆ ಪೂಜೆ ನೆರವೇರಿಸಿದರು
ಮೈಸೂರಿಗೆ ಬಂದರೆ ಈ ಸ್ಥಳಗಳಿಗೂ ಹೋಗುವುದನ್ನು ಮರೆಯಬೇಡಿ
ಅಂಬಾರಿ ಆನೆ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳು ಯಾವುದೇ ಅಂಜಿಕೆ ಇಲ್ಲದೆ, ಶಿಸ್ತುಬದ್ಧವಾಗಿ ಪೂಜೆ ಹಾಗೂ ಮೆರವಣಿಗೆಗೆ ಸಹಕರಿಸಿದವು.
ಜಂಬೂ ಸವಾರಿಗೆ 2 ಸಾವಿರ ಜನ
ನಾಡಿಗೆ ಬಂದ ದಸರಾ ಆನೆಗಳಿಗೆ ಸಂಪ್ರದಾಯಿಕ ಸ್ವಾಗತ ಕೋರಿದ ಬಳಿಕ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್ ಅವರು, ಜಂಬೂ ಸವಾರಿಗೆ 2 ಸಾವಿರ ಜನರನ್ನು ಸೇರಿಸುವ ಕುರಿತ ಅನುಮತಿ ಕೋರಿ ಮನವಿ ಮಾಡಿದ್ದೇವೆ ಎಂದರು.
ಚಾಮುಂಡಿ ಬೆಟ್ಟದ ಉದ್ಘಾಟನಾ ಕಾರ್ಯಕ್ರಮಕ್ಕೆ 250 ಜನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1 ಸಾವಿರ ಜನ ಹಾಗೂ ವಿಜಯ ದಶಮಿ ಕಾರ್ಯಕ್ರಮಕ್ಕೆ 2000 ಜನರಿಗೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದೇವೆ. ಜಿಲ್ಲಾಡಳಿತ ಎಲ್ಲ ರೀತಿಯ ನಿಯಮ ಪಾಲನೆ ಮಾಡಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಎರಡು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದರು.
ವರ್ಗಾವಣೆ ಗೊಂದಲವಿಲ್ಲ
ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ ವರ್ಗಾವಣೆ ಜಟಾಪಟಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರದ ಬಗ್ಗೆ ಬಗ್ಗೆ ಯಾವುದೇ ಗೊಂದಲವಿಲ್ಲ. ವರ್ಗಾವಣೆ ನನ್ನ ಗಮನಕ್ಕೂ ಬಂದಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ವರ್ಗಾವಣೆ ಆಡಳಿತದ ದೃಷ್ಟಿಯಿಂದ ತಗೆದುಕೊಂಡ ತೀರ್ಮಾನ. ಈ ಬಗ್ಗೆ ಕೆಎಟಿ ಮೊರೆ ಹೋಗಿರುವ ಶರತ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಜಿಲ್ಲಾಧಿಕಾರಿಗಳ ವರ್ಗಾವಣೆಯನ್ನು ಸರ್ಕಾರದ ಭಾಗವಾಗಿ ಸ್ವಾಗತಿಸುತ್ತೇನೆ ಎಂದರು.