ಅಂಬಾರಿ ಹೊತ್ತು ಸಾಗಿದ ಅಭಿಮನ್ಯು: ಐತಿಹಾಸಿಕ ಜಂಬೂಸವಾರಿಗೆ ತೆರೆ
ಮೈಸೂರು, ಅಕ್ಟೋಬರ್ 26: ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ನಂದಿಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪೂಜೆ ಸಲ್ಲಿಸಿದರು.
ಅನಂತರ ಕ್ಯಾಪ್ಟನ್ ಅಭಿಮನ್ಯು ಹೊತ್ತಿದ್ದ ಅಂಬಾರಿಯಲ್ಲಿನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆ ಆವರಣದಲ್ಲಿ ಕೇವಲ 400 ಮೀಟರ್ ಸಾಗಿದ ಜಂಬೂಸವಾರಿ ನಂತರ ಮುಕ್ತಾಯಗೊಂಡಿತು.
ವಿಜಯದಶಮಿ; ಅರಮನೆಯಲ್ಲಿ ಸಂಪನ್ನವಾದ ಶರನ್ನವರಾತ್ರಿ ಪೂಜೆ
ಕೊರೊನ ವೈರಸ್ ಸಂಕಷ್ಟದ ನಡುವೆಯೂ ಮೈಸೂರು ದಸರಾ-2020ನ್ನು ಸರಳವಾಗಿ ಆಚರಿಸಲಾಯಿತು. ಇಂದು ಸೋಮವಾರ ಮಧ್ಯಾಹ್ನ 2.59 ರಿಂದ 3.20ರ ಅವಧಿಯಲ್ಲಿ ನಂದಿಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿದರು.
ಅಂಬಾರಿ ಕಟ್ಟುವ ಕಾರ್ಯ ಪೂರ್ಣಗೊಂಡ ನಂತರ, ಅಭಿಮನ್ಯುವಿನ ಮೇಲೆ ಚಾಮುಂಡೇಶ್ವರಿ ವಿರಾಜಮಾನವಾಗಿ ಕಂಗೊಳಿಸುತ್ತಿತ್ತು. ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಿತು.
ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಲ್ಲಿ ವೇದಿಕೆಯತ್ತ ದಸರಾ ಗಜಪಡೆ ತೆರಳಿತು. ಸಿಎಂ ಯಡಿಯೂರಪ್ಪ ಅವರು, ಅರಮನೆ ಆವರಣಕ್ಕೆ ವಿಶೇಷ ಬಸ್ ಮೂಲಕವೇ ಆಗಮಿಸಿದರು. ಇವರೊಂದಿಗೆ ಸಚಿವರು, ಶಾಸಕರು ಹಾಗೂ ವಿಶೇಷ ಆಹ್ವಾನಿತರಿದ್ದರು.
ಮಕರ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, 5ನೇ ಬಾರಿಗೆ ದಸರಾ ಜಂಬೂಸವಾರಿಗೆ ಚಾಲನೆ ನೀಡಿದರು. ಈ ಮೂಲಕ ಜಾಲನೆಗೊಂಡ ಜಂಬೂಸವಾರಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಹೊತ್ತ ಅಭಿಮನ್ಯು ಅರಮನೆಯ ಆವರಣದಲ್ಲಿ ಸಾಗಿತು. ಇದಕ್ಕೆ ಸರಳ ಹಾಗೂ ಕಾವೇರಿ ಸಾಥ್ ನೀಡಿದವು.
ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಾಗಿದ ಜಂಬೂಸವಾರಿಯ ಸರಳ ಮೆರವಣಿಗೆ, ಕೇವಲ 400 ಮೀಟರ್ ಅನ್ನು 30 ರಿಂದ 40 ನಿಮಿಷಗಳಲ್ಲಿ ಸಾಗಿ, ಜಂಬೂಸವಾರಿ ಅಂತ್ಯಗೊಳಿಸಲಾಯಿತು.
ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದನು. ಕೋವಿಡ್ ಕಾರಣ ಜಂಬೂಸವಾರಿ ಮೆರವಣಿಗೆ ಅರಮನೆಯ ಒಳಗಷ್ಟೇ ಸೀಮಿತವಾಗಿತ್ತು.
ಮೊದಲಿಗೆ ವಿಕ್ರಮ ಮತ್ತು ಗೋಪಿ ನಿಶಾನೆ ಆನೆಗಳಾಗಿ ಹೆಜ್ಜೆ ಹಾಕುವ ಮೂಲಕ ಮೆರವಣಿಗೆ ಆರಂಭಗೊಂಡಿತು. ಇದರ ಬೆನ್ನಲ್ಲೇ ನಾದಸ್ವರ, ವೀರಗಾಸೆ ಸೇರಿದಂತೆ ಇನ್ನಿತರ ಕಲಾತಂಡಗಳ ಕಲಾವಿದರು ಹೆಜ್ಜೆಹಾಕಿದರು.
ಕಲಾ ತಂಡಗಳ ನಡುವೆ ಸಾಗಿದ ಎರಡು ಸ್ತಬ್ಧಚಿತ್ರಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತ್ತು. ಈ ಸಂಭ್ರಮದ ನಡುವೆ ವಿಜಯ, ಕಾವೇರಿ ಆನೆಯೊಂದಿಗೆ ಗಜ ಗಾಂಭೀರ್ಯದಿಂದ ಸಾಗಿ ಬಂದ ಅಭಿಮನ್ಯು, ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗುವ ಮೂಲಕ, 410ನೇ ದಸರಾ ಸಂಭ್ರಮ ಅಂತ್ಯಗೊಂಡಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿ ಜಂಬೂಸವಾರಿ ಹಾಗೂ ಮೆರವಣಿಗೆಯನ್ನು ವೀಕ್ಷಿಸಿದರು. ಯದುವೀರ್ ಕೃಷ್ಣದತ್ತ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮಹಾಪೌರರಾದ ತಸ್ನಿಂ, ಶಾಸಕ ರಾಮದಾಸ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರು ಉಪಸ್ಥಿತರಿದ್ದರು.