ಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್ ತುಂಬಿಕೊಂಡ ಜನ ಸಾಗರ
Recommended Video
ಮೈಸೂರು, ಅಕ್ಟೋಬರ್ 19 : ಮನಸ್ಸುಗಳ ಮಧುರ ಕನಸುಗಳ ನಡುವೆ ಗಜಪಡೆಯ ಕ್ಯಾಪ್ಟನ್ ಅರ್ಜುನ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿದ್ದಂತೆ ಅಂಬಾವಿಲಾಸ ಅರಮನೆಯ ಅವರಣದಲ್ಲಿ ನೆರದಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಸರಳ ಆಚರಣೆಯ ದಸರಾ ಅಂತಿಮ ಘಟ್ಟದತ್ತ ಹೆಜ್ಜೆ ಇಟ್ಟಿತು. ಜಗತ್ತಿನ ದೊಡ್ಡ ಪರಂಪರೆಯ ಉತ್ಸವವಾಗಿ, ವರ್ಣ ವರ್ಗ ಮುಕ್ತವಾಗಿ ಆಚರಿಸುವ ನಾಡಹಬ್ಬವಾದ 408ನೇ ದಸರಾ ಮಹೋತ್ಸವ ಆಗಸದಗಲಕ್ಕೆ ಆನಂದ ಚಿಮ್ಮಿಸಿತು.
ಬಲರಾಮದ್ವಾರದಿಂದಲೇ ಸಾಗುತ್ತದೆ ಜಂಬೂಸವಾರಿ..!
ದೇವಿಗೆ ಪುಷ್ಪನಮನ: ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ನಿರ್ಮಿಸಿದ್ದ ವಿಶೇಷ ವೇದಿಕೆಯಿಂದ ಮುಖ್ಯಮಂತ್ರಿ ಸಕುಮಾರಸ್ವಾಮಿಯವರು ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಶನಿವಾರ ಸಂಜೆ 4.17 ಕ್ಕೆ ಸರಿಯಾಗಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಚಾಲನೆ ನೀಡಿದರು.
ಜಂಬೂ ಸವಾರಿಗೆ ಚಾಲನೆ, ತಾಯಿ ಚಾಮುಂಡೇಶ್ವರಿ ಹೊತ್ತು ಹೊರಟ ರಾಜಗಜ
ಮುಖ್ಯಮಂತ್ರಿಗಳೊಂದಿಗೆ ವಿಶೇಷ ವೇದಿಕೆಯಲ್ಲಿ ದಸರಾ ಉದ್ಘಾಟಿಕ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಸಚಿವರಾದ ಸಾ ರಾ ಮಹೇಶ್, ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಉಪಸ್ಥಿತರಿದ್ದು ಪುಷ್ಟಾಪರ್ಚನೆ ಮಾಡಿದರು.
21 ಕುಶಾಲು ತೋಪು ಹಾರಿಸಲಾಯಿತು
ಅಂಬಾರಿ ಹೊತ್ತ ಆನೆ ಬಂದು ನಿಲ್ಲುತ್ತಿದ್ದಂತೆ ಅಶ್ವಾರೋಹಿ ದಳದ ಕಮಾಂಡೆಂಟ್ ಪಥ ಸಂಚಲನಕ್ಕೆ ಅನುಮತಿ ಕೋರಿದರು. ವಿಜಯದ ಸಂಕೇತವಾಗಿ 21 ಕುಶಾಲು ತೋಪುಗಳು ಸಿಡಿದು ಜೋರು ಸದ್ದು ಮೊಳಗಿಸಿದವು. ನಂತರ ಪೊಲೀಸ್ ವಾದ್ಯವೃಂದದವರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು. ಅನಂತರ ಗಣ್ಯರು ದೇವಿಗೆ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಬಳಿಕ ಮಂಗಳ ವಾದ್ಯ, ಪೊಲೀಸ್ ವಾದ್ಯವೃಂದ, ರಕ್ಷಣಾ ಪಡೆಗಳ ಗೌರವ, ಅಶ್ವಾರೋಹಿ ದಳದೊಂದಿಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನ ಮಂದಗತಿಯಲ್ಲಿ ಶಾಂತಚಿತ್ತನಾಗಿ ಹೆಜ್ಜೆ ಹಾಕಿದ.
ಜನಸ್ತೋಮದ ಹರ್ಷೋದ್ಘಾರ
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಕುಮ್ಕಿ ಆನೆಗಳೊಂದಿಗೆ ಅರ್ಜುನ ಸಾಗುತ್ತಿದ್ದಂತೆ ಮೆರವಣಿಗೆಯ ರಾಜಮಾರ್ಗದ ಇಕ್ಕೇಲಗಳಲ್ಲಿ ನಿಂತಿದ್ದ ಜನಸ್ತೋಮ ಹರ್ಷೋದ್ಘಾರ ಮಾಡಿ ನಮನ ಸಲ್ಲಿಸಿ ತಮ್ಮ ಗೌರವವನ್ನು ಸಲ್ಲಿಸಿದರು. ಅರಸೊತ್ತಿಗೆಯ ಅವಸಾನದ ನಂತರ ಜಾತಿ, ಧರ್ಮ, ವರ್ಗ, ವರ್ಣ ಎಲ್ಲವನ್ನೂ ಮೀರಿ ಭಾವೈಕ್ಯತೆಯನ್ನು ಬೆಸೆಯುವ ಜಾತ್ಯತೀತ ಪರಿಕಲ್ಪನೆಯಲ್ಲಿ ಜನಮಾನಸದ ನಾಡಹಬ್ಬವಾಗಿ ಆಚರಿಸಲಾಗುತ್ತಿರುವ, ಭಾರತೀಯ ಪರಂಪರೆಯ ಸಂಕೇತ ಹಾಗೂ ಜಗತ್ತಿನ ಅತಿದೊಡ್ಡ ಉತ್ಸವಗಳಲ್ಲಿ ಒಂದಾದ ಇತಿಹಾಸ, ಪರಂಪರೆ ಮತ್ತು ಸಂಸ್ಕøತಿಯನ್ನು ಬಿಂಬಿಸುವ 9 ದಿನಗಳ ಉತ್ಸವ ದಸರಾದ ವೈಭವಕ್ಕೆ ಜಂಬೂಸವಾರಿ ಮೂಲಕ ವರ್ಣರಂಜಿತ ತೆರೆ ಎಳೆಯಲಾಯಿತು.
750 ಕೆಜಿ ಹೊತ್ತ ಬಲರಾಮ
ಜಂಬೂ ಸವಾರಿಯಲ್ಲಿ ಸತತ 7 ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ನಡೆದಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಿದ್ದು, ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ಆಣೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿವೆ. ನಾಡಿನ ಸಂಸ್ಕೃತಿ, ಇತಿಹಾಸ, ಸರ್ಕಾರದ ವಿವಿಧ ಯೋಜನೆಗಳನ್ನು ಬಿಂಬಿಸುವ ಹಾಗೂ ಸಾಮಾಜಿಕ ಕಳಕಳಿಯ 42 ಸ್ತಬ್ಧಚಿತ್ರಗಳು, ಕಲೆ, ಸಂಸ್ಕೃತಿಯನ್ನು ಸಾರುವ ವಿವಿಧ ಜನಪದ ಕಲಾ ತಂಡಗಳು, ಅಶ್ವಾರೋಹಿ ಪಡೆ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅರಮನೆಯ ಗೌರವ ನಿಶಾನೆ ಹಾಗೂ ಪತಾಕೆಗಳು ಮೆರವಣಿಗೆಯಲ್ಲಿ ಸಾಗಿ ಉತ್ಸವಕ್ಕೆ ಹೆಚ್ಚಿನ ಮೆರಗು ನೀಡಿದವು.
5.50 ಕಿ.ಮೀ ಕ್ರಮಿಸಿದ ಅರ್ಜುನ
ಅಂಬಾವಿಲಾಸ ಅರಮನೆಯ ಆವರಣದಿಂದ ಸಂಜೆ 4.45ಕ್ಕೆ ಸರಿಯಾಗಿ ಹೊರಟ ಜಂಬೂಸವಾರಿ ಅರಮನೆ ಉತ್ತರದಲ್ಲಿರುವ ಬಲರಾಮ ದ್ವಾರದ ಮೂಲಕ ಚಾಮರಾಜೇಂದ್ರ ವೃತ್ತವನ್ನು ಪ್ರವೇಶಿಸಿತು. ನಂತರ ಕೃಷ್ಣರಾಜೇಂದ್ರ ವೃತ್ತ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ಬಂಬೂಬಜಾರ್, ಹೈವ ವೃತ್ತ, ನೆಲ್ಸನ್ ಮಂಡೇಲಾ ರಸ್ತೆ ಮಾರ್ಗವಾಗಿ ಬನ್ನಿಮಂಟಪ ತಲುಪಿತು. ಇದಕ್ಕೂ ಮುನ್ನ ಮಧ್ಯಾಹ್ನ ಸರಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ನಾಂದಿ ಹಾಡಿದರು. ನಾಡಿನ ಸಾಂಸ್ಕøತಿಕ, ಸಾಹಿತ್ಯಕ ಸೊಬಗನ್ನು ಮೇಳೈಸಿಕೊಂಡು ಜಾಗತಿಕ ಮಟ್ಟದ ಸ್ಪರ್ಶವನ್ನು ನೀಡಿರುವ ನಾಡಹಬ್ಬ ವಿಜಯದಶಮ ಮೆರವಣಿಗೆ ನಂದಿಧ್ವಜ ಕುಣಿತದೊಂದಿಗೆ ಆರಂಭವಾಗಿ ಸಾಲು ಸಾಲಾಗಿ ಅರಮನೆ ಆವರಣವನ್ನು ಬಿಡುವ ಹೊತ್ತಿಗೆ ಸಂಜೆ 4.40 ಆಯಿತು.
ಜನಪದ ಕಲಾ ತಂಡಗಳ ಮೆರುಗು
ಕರ್ನಾಟಕದ ಜನಪದ ಪ್ರಕಾರಗಳನ್ನು ಪರಿಚಯ ಮಾಡುವ ವೀರಭದ್ರ ಕುಣಿತ, ನಾದಸ್ವರ, ಕೊಂಬು ಕಹಳೆ, ಡೊಳ್ಳು ಕುಣಿತ, ಜಗ್ಗಲಗಿ ಮೇಳ, ಬೀಸು ಕಂಸಾಳೆ, ಗೊಂಬೆ ಕುಣಿತ, ವೀರಗಾಸೆ, ವೀರಭದ್ರನ ಕುಣಿತ, ಗೊರವರ ಕುಣಿತ, ತಮಟೆ ನಗಾರಿ, ನಂದಿ ಕೋಲು ಕುಣಿತ, ಹುಲಿವೇಷ, ಪೂಜಾ ಕುಣಿತ, ಗಾರುಡಿ ಗೊಂಬೆ, ಹಗಲು ವೇಷ, ಕರಡಿ ಮಜಲು, ಚಂಡೆ ಮೇಳ ಮೊದಲಾದವು ಗಮನ ಸೆಳೆದವು.
ಬೆಳಿಗ್ಗೆಯೇ ಚಾಮುಂಡಿ ಆಗಮನ!
ಚಿನ್ನದ ಅಂಬಾರಿಯಲ್ಲಿ ಸರ್ವಾಲಂಕಾರ ಭೂಷಿತಳಾಗಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡಿಬೆಟ್ಟದಿಂದ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಅರಮನೆಗೆ ವಾಹನವೊಂದರಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಚಾಮುಂಡೇಶ್ವರಿ ದೇವಿಯನ್ನು ಕಾಣುತ್ತಿದ್ದಂತೆ ಆ ವೇಳೆಗಾಗಲೇ ಅರಮನೆಯಲ್ಲಿ ನೆರೆದಿದ್ದ ಜನತೆ ಜಯಘೋಷ ಮಾಡಿದರು.