ದಸರಾ : ಕಾವಡಿ, ಮಾವುತರ ಮಕ್ಕಳ ಟೆಂಟ್ ಶಾಲೆ ನೋಡಿ
ಮೈಸೂರು, ಆಗಸ್ಟ್ 30 : ದಸರಾ ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳ ಕುಟುಂಬದ ಮಕ್ಕಳಿಗೆ ಅರಮನೆ ಆವರಣದಲ್ಲಿ ಟೆಂಟ್ ಶಾಲೆ ಆರಂಭಿಸಲಾಗಿದ್ದು, ಇದು ದಶಕದ ಸಂಭ್ರಮದಲ್ಲಿದೆ.
ಕಳೆದ ಹತ್ತು ವರ್ಷಗಳಿಂದ ದಸರಾ ಸಂದರ್ಭ ಟೆಂಟ್ ಶಾಲೆಯನ್ನು ನಡೆಸುತ್ತಾ ಬರಲಾಗುತ್ತಿದೆ. ವಿವಿಧ ಆನೆ ಶಿಬಿರಗಳಲ್ಲಿ ಆನೆಗಳ ಪೋಷಣೆ ಮಾಡುತ್ತಾ ನೆಲೆಸಿರುವ ಮಾವುತ ಮತ್ತು ಕಾವಡಿಗಳ ಮಕ್ಕಳು ಸ್ಥಳೀಯ ಶಾಲೆಗಳಲ್ಲಿ ಓದುತ್ತಿರುತ್ತಾರೆ.[ದಸರಾ ಆನೆಗಳ ಪೈಕಿ ಅರ್ಜುನನೇ ಬಲಶಾಲಿ!]
ದಸರಾ ಸಂದರ್ಭ ಆನೆಗಳೊಂದಿಗೆ ತಮ್ಮ ಪೋಷಕರು ಮೈಸೂರಿಗೆ ಆಗಮಿಸುವಾಗ ಮಕ್ಕಳು ಬರುವುದು ಅನಿವಾರ್ಯ. ಹೀಗೆ ಬರುವ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕಾಗಿ ಟೆಂಟ್ ಶಾಲೆ ಆರಂಭಿಸಿ ನುರಿತ ಶಿಕ್ಷಕರಿಂದ ಪಾಠ ಹೇಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.[ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ದಸರಾ ಗಜಪಡೆ]
ಸೋಮವಾರ ಸಂಜೆ ಮಕ್ಕಳಿಗೆ ಆಕರ್ಷಕ ಪೋಷಾಕು ಮತ್ತು ಟೋಪಿ ತೊಡಿಸಿ ಟೆಂಟ್ ಶಾಲೆಗೆ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭ ನಡೆದ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಘಾಟಿಸಿ, ಮಕ್ಕಳಿಗೆ ಪಠ್ಯಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದರು....[ನಾಡಹಬ್ಬ ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ]
ಮಕ್ಕಳಿಗೆ ತೊಂದರೆ ಮಾಡುವುದಿಲ್ಲ
ಹೆತ್ತವರು ಆನೆಗಳ ಆರೈಕೆಯಲ್ಲಿ ತೊಡಗಿಸಿಕೊಂಡರೆ, ಮಕ್ಕಳು ಆಟಪಾಠದೊಂದಿಗೆ ಖುಷಿಯಾಗಿ ಕಾಲಕಳೆಯುತ್ತಾರೆ. ಅಲ್ಲದೆ, ಆನೆಗಳ ಒಡನಾಟ ಹೊಂದಿರುವ ಅವರು ಅವುಗಳ ಕಾಲುಬುಡದಲ್ಲಿ ಆಟವಾಡುತ್ತಿರುತ್ತಾರೆ. ಆನೆಗಳು ಕೂಡ ಮಕ್ಕಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ.
ಡಿಜಿಟಲ್ ತಂತ್ರಜ್ಞಾನ
ಕಾಡಿನಿಂದ ಬಂದ ಮಕ್ಕಳಿಗೆ ಟೆಂಟ್ ಶಾಲೆ ಹೊಸ ಅನುಭವ ನೀಡುತ್ತಿದೆ. ಡಿಜಿಟಲ್ ತಂತ್ರಜ್ಞಾನದೊಂದಿಗೆ ಚಿತ್ರ ಸಹಿತ ಕಲಿಕೆಗೆ ಒತ್ತು ನೀಡಲಾಗಿದೆ. ಇಲ್ಲಿ ಎಲ್ಲಾ ರೀತಿಯ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೊದಲೆಲ್ಲ ಮಾವುತರು ಮತ್ತು ಕಾವಡಿಗಳು ತಮ್ಮ ಕುಟುಂಬ ಸಹಿತ ಆನೆಗಳೊಂದಿಗೆ ಬಂದು ಅರಮನೆ ಆವರಣದಲ್ಲಿ ಬೀಡು ಬಿಡುತ್ತಿದ್ದಾಗ ಅವರೊಂದಿಗೆ ಬರುತ್ತಿದ್ದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
ಶಾಲೆಯನ್ನು ಮರೆಯುತ್ತಿದ್ದರು
ಸುಮಾರು 45 ದಿನಗಳಿಗೂ ಹೆಚ್ಚು ಸಮಯ ಮೈಸೂರಿನಲ್ಲಿ ಮಾವುತರು, ಕಾವಾಡಿಗಳು ವಾಸ ಮಾಡುತ್ತಾರೆ. ಇವರ ಜೊತೆ ಬಂದ ಮಕ್ಕಳು ಶಾಲೆಯನ್ನೇ ಮರೆತು ಬಿಡುತ್ತಿದ್ದರು. ಇದನ್ನು ಮನಗಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಕಾರಣದಿಂದ ಟೆಂಟ್ಶಾಲೆಯನ್ನು ಆರಂಭಿಸಲಾಗಿದೆ. ಈ ತಾತ್ಕಾಲಿಕ ಟೆಂಟ್ಶಾಲೆ ದಸರಾ ಕಳೆಯುವ ತನಕ ನಡೆಯಲಿದೆ.
9 ಮಕ್ಕಳು ಬಂದಿದ್ದಾರೆ
ಗಜಪಡೆಯ ಮೊದಲ ತಂಡದಲ್ಲಿ ಬಂದಿರುವ 6 ಆನೆಗಳ ಕಾವಡಿ ಮತ್ತು ಮಾವುತರ 9 ಮಕ್ಕಳಿದ್ದು, ಎರಡನೇ ತಂಡದ ಗಜಪಡೆಯೊಂದಿಗೆ ಬರುವ ಮಕ್ಕಳು ಶಾಲೆಗೆ ಸೇರ್ಪಡೆಗೊಳ್ಳಲಿದ್ದಾರೆ. ಕಳೆದ ಬಾರಿ ಸುಮಾರು 53 ಮಕ್ಕಳು ಟೆಂಟ್ಶಾಲೆಯಲ್ಲಿದ್ದರು.
ಒಬ್ಬರು ಶಿಕ್ಷಕರ ನಿಯೋಜನೆ
ಮಕ್ಕಳಿಗೆ ಪಾಠ ಹೇಳಿಕೊಡಲು ಒಬ್ಬ ಶಿಕ್ಷಕ, ಅಲ್ಲದೆ ದಿನಕ್ಕೊಬ್ಬರಂತೆ ಗ್ರಂಥಪಾಲಕರನ್ನು ನೇಮಿಸಲಾಗಿದೆ. ಕಥೆ ಹೇಳುವುದು, ಪುಸ್ತಕಗಳ ಪರಿಚಯ, ಚಿತ್ರಪುಸ್ತಕಗಳು, ದಿನಪತ್ರಿಕೆಗಳನ್ನು ಓದುವುದು, ಪುಸ್ತಕ ಓದುವ ಕೌಶಲ್ಯ, ಕವಿತೆ ಓದುವುದು, ನಾಟಕಗಳ ಪರಿಚಯ, ಪ್ರಸಿದ್ಧ ಜನರ ಪರಿಚಯ, ವನ್ಯಜೀವ ಕುರಿತ ಪುಸ್ತಕಗಳ ಅರಿವು, ಪ್ರಬಂಧ ವಿಜ್ಞಾನಿ, ಪ್ರಾಥಮಿಕ ಗಣಿತ ಮೊದಲಾದ ವಿಷಯಗಳ ಬಗ್ಗೆ ಟೆಂಟ್ ಶಾಲೆಯಲ್ಲಿ ಹೇಳಿಕೊಡಲಾಗುತ್ತದೆ.
ಓದುವ ಹವ್ಯಾಸ ಬೆಳೆಸುವ ಪ್ರಯತ್ನ
ಟೆಂಟ್ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಓದುವ ಅಭಿರುಚಿ ಹೆಚ್ಚಿಸುವ ಸಲುವಾಗಿ ಗ್ರಂಥಾಲಯದಲ್ಲಿ ನೀತಿ, ಹಿತೋಪದೇಷ, ರಾಜರ, ಇತಿಹಾಸ, ಗಾಂಧಿ, ಅಂಬೇಡ್ಕರ್ ಸೇರಿದಂತೆ ಮಕ್ಕಳಿಗೆ ಅರ್ಥವಾಗುವ ಪುಸ್ತಕಗಳನ್ನು ಇಡಲಾಗಿದೆ. ಆ ಮೂಲಕ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯತ್ತವೂ ಅವರನ್ನು ತಯಾರು ಮಾಡುವ ಕಾರ್ಯ ನಡೆಯಲಿದೆ.