ಕೋವಿಡ್ 2ನೇ ಅಲೆ ಹಿನ್ನೆಲೆ; ಅಂತರ್ ರಾಜ್ಯ ಸಂಚಾರ ಬಗ್ಗೆ ನಿಗಾವಹಿಸಿ: ಸಚಿವ ಸೋಮಶೇಖರ್
ಮೈಸೂರು, ಫೆಬ್ರವರಿ 22: ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಗಡಿ ಮಧ್ಯೆ ವಾಹನಗಳ ಸಂಚಾರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಹಾಗೆಯೇ ಸಾರ್ವಜನಿಕರು ಸೇರಿದಂತೆ ವ್ಯಾಪಾರ ವಹಿವಾಟಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರಂಭವಾಗುವ ಲಕ್ಷಣ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗದಿಂದ ವಾಹನಗಳ ಸಂಚಾರ ಹಾಗೂ ತಪಾಸಣೆ ಕ್ರಮ ಹೇಗಿರಬೇಕು ಎಂಬ ಬಗ್ಗೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಎಪಿಎಂಸಿ ಸೇರಿದಂತೆ ರಾಜ್ಯದೊಳಗೆ ಹಾಗೂ ಹೊರಗೆ ಮೈಸೂರಿನ ಮುಖಾಂತರ ತರಕಾರಿ ಹಾಗೂ ಆಹಾರ ಧಾನ್ಯಗಳ ವಾಹನಗಳ ಸಂಚಾರ ಆಗಬೇಕು ಎಂದರು.
ಸಂಚಾರವನ್ನು ನಿರ್ಬಂಧ ಮಾಡಿದರೆ ವಹಿವಾಟು ಸೇರಿದಂತೆ ಎಲ್ಲವಕ್ಕೂ ತೊಂದರೆಯಾಗಲಿದೆ. ಹೀಗಾಗಿ ಆ್ಯಂಟಿಜನ್ ಟೆಸ್ಟ್, ಟೆಂಪ್ರೇಚರ್ ಟೆಸ್ಟ್ ಗಳು ನಡೆಯಲಿ. ಅದಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಅಲ್ಲದೇ, ಗಡಿ ಭಾಗದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಬರುವ ಎಲ್ಲ ಬಸ್ ಗಳ ಪ್ರಯಾಣಿಕರ ತಪಾಸಣೆ ಕೂಡಾ ಆಗಬೇಕು ಎಂದು ಡಿಎಚ್ಒ ಆರೋಗ್ಯಾಧಿಕಾರಿ ಡಾ. ಅಮರ್ ನಾಥ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ದಕ್ಷಿಣ ವಲಯ ಐಜಿ ಪವಾರ್ ಪ್ರವೀಣ್ ಮಧುಕರ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಉಪಸ್ಥಿತರಿದ್ದರು.