ಮೈಸೂರು: 32ನೇ ವಾರ್ಡ್ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆ
ಮೈಸೂರು, ಜೂನ್ 21 : ಮಹಾನಗರ ಪಾಲಿಕೆಯ 32ನೇ ವಾರ್ಡ್ಗೆ ಜುಲೈ 2ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಬುಧವಾರ ಕಡೇ ದಿನವಾಗಿದ್ದರಿಂದ ವಿವಿಧ ಪಕ್ಷಗಳ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೀಗಾಗಿ, ಈ ವಾರ್ಡ್ ನ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ.
ಕಾಂಗ್ರೆಸ್ನಿಂದ ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮಹಾಪೌರ ಬಿ.ಕೆ.ಪ್ರಕಾಶ್ ಅವರನ್ನು ಕಣಕ್ಕಿಳಿಸಲಾಗಿದೆ. ಜಾತ್ಯಾತೀತ ಜನತಾ ದಳದಿಂದ ನಿರೀಕ್ಷಿಸಿದಂತೆಯೇ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಎಸ್ಬಿಎಂ ಮಂಜು, ಬಿಜೆಪಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ. ಮಾದೇಶ್ ಅಭ್ಯರ್ಥಿಗಳಾಗಿದ್ದಾರೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು.
ಜೂ.14ರಂದು ಅಧಿಸೂಚನೆ ಹೊರ ಬಿದ್ದಿದ್ದು, ಜೂ. 22ರಂದು ನಾಮಪತ್ರಗಳಪರಿಶೀಲನೆ, 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ. ಜು. 2ರಂದು ಮತದಾನ. ನಗರಪಾಲಿಕೆ 32ನೇ ವಾರ್ಡ್ ಸದಸ್ಯರಾಗಿದ್ದಸಿ.ಮಾದೇಶ್ ಮತ್ತು ಅವರ ಸೋದರ ಸೇರಿ 8 ಮಂದಿಗೆ ಹುಣಸೂರು ಜೋಡಿಕೊಲೆ ಪ್ರಕರಣದಲ್ಲಿ 2016ರ ಫೆ.26ರಂದು ಜೀವಾವಧಿ ಶಿಕ್ಷೆ ಪ್ರಕಟವಾಗಿತ್ತು. ನಂತರ ಮಾದೇಶ್ ಸದಸ್ಯತ್ವದಿಂದ ವಜಾಗೊಂಡಿದ್ದರು.
ಇನ್ನು ಬಂಡಾಯ ಅಭ್ಯರ್ಥಿಯಾಗಿ ಲಲನಾ ಧನರಾಜ್ ಪಾಲಿಕೆಯ ಕಚೇರಿಗೆ ತೆರಳಿ ಧನರಾಜ್ ಚುನಾವಣಾಧಿಕಾರಿ ವಿ.ಪ್ರಿಯದರ್ಶಿನಿ ಅವರಿಗೆ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದು, ಈ ಚುನಾವಣೆಯಲ್ಲಿ ಯಾರ ಗೆಲುವಿಗೆ ವಿಜಯದ ಮಾಲೆ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.