ಮೈಸೂರು ನಗರದಲ್ಲಿ ರಾಸಾಯನಿಕ ಸಿಂಪಡಣೆ ಏಕೆ?
ಮೈಸೂರು, ಮಾರ್ಚ್ 26: ಒಂದೆಡೆ ಕೊರೊನಾ ಭೀತಿಯಾದರೆ, ಮತ್ತೊಂದೆಡೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿರುವ ಕಾರಣ ಮಹಾನಗರಪಾಲಿಕೆ ವತಿಯಿಂದ ಎಲ್ಲ 65 ವಾರ್ಡ್ ಗಳಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಬೇಸಿಗೆಯ ದಿನಗಳಲ್ಲಿ ಸೊಳ್ಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೋರಿ, ಕಸದ ರಾಶಿ, ಕೊಳಚೆ ಪ್ರದೇಶಗಳಲ್ಲಿ ಉತ್ಪತ್ತಿಯಾಗುವುದರಿಂದ ಅವುಗಳನ್ನು ನಿಯಂತ್ರಿಸಲು ರಾಸಾಯನಿಕ ಸಿಂಪಡಣೆ ಅನಿವಾರ್ಯವಾಗಿದೆ. ಇದೀಗ ಜನತಾ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಬೆಳಿಗ್ಗೆ 7 ರಿಂದ 11ಗಂಟೆವರೆಗೆ ಮಹಾನಗರ ಪಾಲಿಕೆ ಅಭಯ ತಂಡ ಸಿಂಪಡಣಾ ಕಾರ್ಯವನ್ನು ಕೈಗೊಂಡಿದೆ.
ಹಕ್ಕಿಜ್ವರ ತಡೆಗೆ ಮೈಸೂರು ಮೃಗಾಲಯದಲ್ಲಿ ರಾಸಾಯನಿಕ ಸಿಂಪಡಣೆ
ಅಭಯ ತಂಡದಿಂದ ಸಿಂಪಡಣಾ ಕಾರ್ಯ
ಆಯಾಯ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಕುವೆಂಪು ನಗರದ ಜೋಡಿ ರಸ್ತೆಯ ವಿಜಯಾ ಬ್ಯಾಂಕ್ ಸರ್ಕಲ್, ನ್ಯೂ ಕಾಂತರಾಜ ಅರಸ್ ರಸ್ತೆ, ಸರಸ್ವತಿಪುರಂ, ಟಿ.ಕೆ. ಲೇಔಟ್, ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶದ ಪಾರ್ಕ್, ರಸ್ತೆ, ಮೋರಿಗಳು, ಆಕಾಶವಾಣಿ ಸರ್ಕಲ್, ಯಾದವಗಿರಿ, ವಿವಿ ಮೊಹಲ್ಲಾ, ಜಯಲಕ್ಷ್ಮಿಪುರಂ, ಗೋಕುಲಂ, ಪಡುವಾರಹಳ್ಳಿ, ಮೇಟಗಳ್ಳಿ, ಹೆಬ್ಬಾಳು, ವಿಜಯನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸಿಂಪಡಣಾ ಕಾರ್ಯವನ್ನು ಮಾಡಲಾಗಿದೆ.
ಎಟಿಎಂ ಕೇಂದ್ರಗಳಲ್ಲೂ ಸಿಂಪಡಣೆ
ಇದು ಪ್ರತಿ ವರ್ಷವೂ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮ ಇದಾಗಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ಕೊರೊನಾ ತಡೆಗೂ ಇದು ಅನುಕೂಲವಾಗಲಿದೆ. ಇಲ್ಲಿ ಮುಖ್ಯವಾಗಿ, ಅದರಲ್ಲೂ ನಗರ ಪ್ರದೇಶದಲ್ಲಿ ಜನರು ಮನೆಯಿಂದ ಹೊರ ಬಾರದಿದ್ದರೆ ಅದಕ್ಕಿಂತ ಒಳ್ಳೆಯ ಕೆಲಸ ಬೇರೊಂದಿಲ್ಲ. ಆದರೆ ಸುಖಾ ಸುಮ್ಮನೆ ಕೆಲವರು ನಗರಗಳಲ್ಲಿ ಅಡ್ಡಾಡುತ್ತಿರುವುದರಿಂದ ಕೊರೊನಾ ವೈರಸ್ ತಡೆಗೆ ಮಾಡಿರುವ ಕಾರ್ಯಕ್ಕೆ ಅಡ್ಡಿಯಾದಂತಾಗಿದೆ. ಕೆಲವೆಡೆ ಜನರು ಹೆಚ್ಚಾಗಿ ಸಂಚರಿಸುವ ಸ್ಥಳ ಮತ್ತು ಎಟಿಎಂ ಕೇಂದ್ರಗಳಲ್ಲೂ ಔಷಧ ಸಿಂಪಡಿಸಿ ಸ್ಯಾನಿಟೇಷನ್ ಕಾರ್ಯವನ್ನು ಮಾಡಲಾಗುತ್ತಿದೆ.
ಪೌರಕಾರ್ಮಿಕರ ಕೆಲಸದ ಅವಧಿ ಬದಲಾವಣೆ
ಇನ್ನೊಂದೆಡೆ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಬಗ್ಗೆ ನಿಗಾ ವಹಿಸಲಾಗಿದ್ದು, ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ಮೈಸೂರು ಮಹಾನಗರಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕೆಲಸದ ವೇಳೆಯಲ್ಲಿಯೂ ಒಂದಷ್ಟು ಬದಲಾವಣೆ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ. ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಹೊರಡಿಸಿರುವ ಆದೇಶದಂತೆ ಕೆಲಸದ ಅವಧಿಯಲ್ಲಿ ಬದಲಾವಣೆಯಾಗಿದೆ. ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಇದ್ದ ಪೌರ ಕಾರ್ಮಿಕರ ಕೆಲಸದ ಅವಧಿಯನ್ನು ಇನ್ಮುಂದೆ ಪ್ರತಿದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10.30ರವರೆಗೆ ಹಾಗೂ ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಇದ್ದ ಒಳಚರಂಡಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ನಿಗದಿಪಡಿಸಲಾಗಿದೆ.
ಪೌರಕಾರ್ಮಿಕರ ಆರೋಗ್ಯದ ಬಗ್ಗೆ ನಿಗಾ
ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೌರಕಾರ್ಮಿಕರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್, ಮಾಸ್ಕ್, ಬೂಟ್ಗಳನ್ನು ಧರಿಸಿಯೇ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅಗತ್ಯ ಇರುವಷ್ಟು ಹ್ಯಾಂಡ್ ಗ್ಲೌಸ್, ಮಾಸ್ಕ್ ಗಳನ್ನು ಒದಗಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಅಥವಾ ಲಿಕ್ವಿಡ್ ಸೋಪ್ ನೀಡುವಂತೆಯೂ, ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರಲ್ಲಿ ಜ್ವರ, ಶೀತ, ಕೆಮ್ಮು ಕಂಡು ಬಂದಲ್ಲಿ ಕೂಡಲೇ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಿ ಅಗತ್ಯ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.