ಮೈಸೂರಿನಲ್ಲಿ ಕೊರೊನಾ; ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಓಡಾಡಿದ್ದ?
ಮೈಸೂರು, ಮಾರ್ಚ್ 22: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ ಮೊದಲ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಕುರಿತು ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಕೊರೊನಾ ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದವರು ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ವ್ಯಕ್ತಿಯೊಬ್ಬರಿಗೆ ನಿನ್ನೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ದುಬೈಗೆ ತೆರಳಿದ್ದ 35 ವರ್ಷದ ಸೋಂಕಿತ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ವ್ಯಕ್ತಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ನೇರವಾಗಿ ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿ ರಕ್ತದ ಮಾದರಿ ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ವ್ಯಕ್ತಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
"ಶೀಘ್ರವೇ ಬೆಳಗಾವಿಯಲ್ಲಿ ಕೊರೊನಾ ಪರೀಕ್ಷೆಗೆ ಪ್ರಯೋಗಾಲಯ"
ಸೋಂಕಿತ ವ್ಯಕ್ತಿಗೆ ಪ್ರತ್ಯೇಕ ಚಿಕಿತ್ಸೆ
ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು ಸಂಬಂಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಜನ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇನ್ನು ಮುಂದೆ ಜನತೆ ಹೊರಗಡೆ ಓಡಾಡುವುದು, ಹೆಚ್ಚು ಜನ ಸೇರುವುದನ್ನು ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಜನ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಜನರಿಗೆ ನಮ್ಮೂರಿಗೆ ಕೊರೊನಾ ಬರಲ್ಲ ಎಂಬ ಭಾವನೆ. ಆದರೆ ಇದರಿಂದ ಜನ ಹೊರ ಬರಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಹೇಳಿದರು.
ದುಬೈನಿಂದ ಬಂದಿದ್ದ ವ್ಯಕ್ತಿ
ದುಬೈನಿಂದ ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಬಂದು ಬೆಂಗಳೂರಿನಿಂದ ಟ್ಯಾಕ್ಸಿಯ ಮೂಲಕ ಮೈಸೂರಿಗೆ ಈ ವ್ಯಕ್ತಿ ಬಂದಿದ್ದ. ಮೈಸೂರಿಗೆ ಬಂದ ತಕ್ಷಣ ತಾನಾಗಿಯೇ ಆಸ್ಪತ್ರೆಗೆ ಬಂದಿದ್ದ. ಆದರೆ ಆತನ ರೂಟ್ ಮ್ಯಾಪ್ ಸಿಕ್ಕಿಲ್ಲ. ರಾತ್ರಿ 11.30 ದುಬೈನಲ್ಲಿ ಫ್ಲೈಟ್ ನಿಂದ ಬಂದಿದ್ದು, ಮೈಸೂರಿಗೆ ಟ್ಯಾಕ್ಸಿಯಲ್ಲಿ ಬಂದಿದ್ದಾರೆ. ಮಂಡ್ಯದ ಸ್ಥಳವೊಂದರಲ್ಲಿ ಟೀ ಕುಡಿದಿದ್ದಾರೆ ಎಂಬುದು ತಿಳಿದುಬಂದಿದೆ.
ರಾಜ್ಯದ ಎಲ್ಲ ಗಡಿಗಳನ್ನು ಬಂದ್ ಮಾಡಲು ಪ್ರತಾಪ ಸಿಂಹ ಮನವಿ
ನೇರವಾಗಿ ಮನೆಗೆ ಹೋಗಿಲ್ಲ
ಈ ವ್ಯಕ್ತಿ ನೇರವಾಗಿ ಮನೆಗೆ ಹೋಗಿಲ್ಲ. ಹುಷಾರಿಲ್ಲ ಎಂದು ಕೆ.ಆರ್. ಆಸ್ಪತ್ರೆಗೆ ಸೇರಿದ್ದಾರೆ. ವ್ಯಕ್ತಿಯ ಸ್ವ್ಯಾಪ್ ಸ್ಯಾಂಪಲ್, ಸ್ಕ್ರೀನಿಂಗ್ ಮಾಡಿ ಖಚಿತ ಆದ ಮೇಲೆ ಸೋಂಕು ದೃಢ ಆಗಿದೆ. ಸದ್ಯ ಕೆಆರ್.ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಅವರನ್ನು ಚೆಕ್ ಮಾಡಿದ ವೈದ್ಯರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
31 ಜನರ ಸ್ಯಾಂಪಲ್ ನಲ್ಲಿ ಒಂದು ಪಾಸಿಟಿವ್
ಮೈಸೂರಿನಲ್ಲಿ ಸೋಂಕು ದೃಢಪಟ್ಟಿರುವ ವ್ಯಕ್ತಿಯು ಏರ್ ಇಂಡಿಯಾ ಫ್ಲೈಟ್ ನಲ್ಲಿ ಬಂದಿದ್ದಾರೆ. ಫೈಟ್ ನಲ್ಲಿದ್ದ ಇನ್ನಿತರ ಪ್ರಯಾಣಿಕರ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿರುವುದಾಗಿ ತಿಳಿಸಿದ್ದಾರೆ. ಒಟ್ಟು ಮೈಸೂರಿನಲ್ಲಿ ನಿಗಾದಲ್ಲಿದ್ದ ವ್ಯಕ್ತಿಗಳು 240. ಮನೆಯಲ್ಲಿ ನಿಗಾದಲ್ಲಿರುವ ವ್ಯಕ್ತಿಗಳು 170. ಇಬ್ಬರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ. 14 ದಿನ ನಿಗಾ ಮುಗಿಸಿದವರು 69 ಜನ. 31 ಜನರ ಸ್ಯಾಂಪಲ್ ನಲ್ಲಿ 1 ಪಾಸಿಟಿವ್ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿ.ಸಿ ಅಭಿರಾಮ್ ಜಿ ಶಂಕರ್ ಹೇಳಿದರು.