'ಮೈಸೂರು ಅಕ್ಷರಜಾತ್ರೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸರಿಗೆ ಸಹಕರಿಸಿ'
ಮೈಸೂರು, ನವೆಂಬರ್ 24 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ (ಶುಕ್ರವಾರ) ಮೂರು ದಿನಗಳ ಕಾಲ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ಸಾಧ್ಯತೆ ಇದೆ.
ಈ ಕಾರಣದಿಂದಾಗಿ ಸಂಚಾರ ವ್ಯವಸ್ಥೆಯಲ್ಲಿ ಮತ್ತು ವಾಹನ ನಿಲುಗಡೆಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅದನ್ನು ತಪ್ಪಿಸಲು ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಮಣೇಶ್ವರ ರಾವ್ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಅದನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಚಿತ್ರಗಳು : ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ
ನವೆಂಬರ್ 24ರಿಂದ ನ. 26ರವರೆಗೆ ಮೂರು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದ ಆವರಣದ ಪ್ರಧಾನ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ಸಲುವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಸ್ಥಳಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಬರಲಿದ್ದಾರೆ.
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿ
ಹೀಗಾಗಿ ಅಲ್ಲಿ ಸಂಚಾರ ವ್ಯವಸ್ಥೆ ಮಾತ್ರವಲ್ಲದೆ ಇನ್ನಿತರೆ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿರುವುದರಿಂದ ಮತ್ತು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳ ಪಟ್ಟಿ
ಸಮ್ಮೇಳನದ ಸಮಯದಲ್ಲಿ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಹಲವೆಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಸಮ್ಮೇಳನ ನಡೆಯುವ ಪ್ರಧಾನ ವೇದಿಕೆ ಮತ್ತು ಇತರೆ ಕಾರ್ಯಕ್ರಮ ನಡೆಯುವ ಸ್ಥಳ ಮಾತ್ರವಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದೋಬಸ್ತ್ ನಲ್ಲಿ 900 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದಲ್ಲದೆ 07 ಕೆಎಸ್ ತುಕಡಿ, 08 ಸಿಎಆರ್ ತುಕಡಿಗಳು ಹಾಗೂ ತುರ್ತು ಸೇವೆಗಾಗಿ 05 ಅಗ್ನಿ ಶಾಮಕ, 06 ಅಂಬ್ಯುಲೆನ್ಸ್ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಸುಗಮ ಸಂಚಾರ ವ್ಯವಸ್ಥೆ
ಮೂರು ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 9ರಿಂದ ರಾತ್ರಿ 11ಗಂಟೆವರೆಗೆ ಕೆಆರ್ ಬಿ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ಏಕಲವ್ಯ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಆದ್ದರಿಂದ ಕಾರ್ಯಕ್ರಮಕ್ಕೆ ರಾಮಸ್ವಾಮಿ ವೃತ್ತದ ಕಡೆಯಿಂದ ಬಸ್ಸು ಮತ್ತು ಇತರೇ ಭಾರಿ ಸಾರ್ವಜನಿಕ ಸಾರಿಗೆಗಳಲ್ಲಿ ಬರುವ ಸಾರ್ವಜನಿಕರು ರಾಮಸ್ವಾಮಿ ವೃತ್ತದಲ್ಲಿಯೇ ವಾಹನದಿಂದ ಇಳಿದು ಕಾರ್ಯಕ್ರಮಕ್ಕೆ ನಡೆದುಕೊಂಡು ಬರುವಂತೆ ಸೂಚಿಸಲಾಗಿದೆ.
ವಾಹನ ನಿಲುಗಡೆಗೆ ವ್ಯವಸ್ಥೆ ಎಲ್ಲೆಲ್ಲಿ?
ಅತಿಗಣ್ಯರ, ಅಂಬ್ಯುಲೆನ್ಸ್, ಫೈರ್ ಟೆಂಡರ್, ಕಾರ್ಯಕ್ರಮ ಕಲಾವಿದರ ವಾಹನಗಳನ್ನು ಮಹಾರಾಜ ಕಾಲೇಜು ಮೈದಾನದ ವೇದಿಕೆ ಹಿಂಭಾಗ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಗಣ್ಯರ ವಾಹನಗಳಿಗೆ ಅರಸು ಬೋರ್ಡಿಂಗ್ ಶಾಲೆ ಅವರಣ, ಮಾಧ್ಯಮದವರ ವಾಹನಗಳಿಗೆ ಮಹಾರಾಜ ಕಾಲೇಜು ಮೈದಾನದ ಜಿಮ್ನಾಷಿಯಂ ಮುಂಭಾಗ, ಸಾರ್ವಜನಿಕರ ಎಲ್.ಎಂ.ವಿ., ದ್ವಿಚಕ್ರ ವಾಹನಗಳಿಗೆ ಶತಮಾನೋತ್ಸವ ಭವನದ ಮಹಾರಾಜ ಕಾಲೇಜು ಮೈದಾನದ ಆವರಣ, ಯುವರಾಜ ಕಾಲೇಜು ಮೈದಾನದ ಆವರಣ, ಓವಲ್ ಮೈದಾನ ಮತ್ತು ಕೆ.ಆರ್.ಬಿ. ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ವಾಣಿವಿಲಾಸ ರಸ್ತೆ ಜಂಕ್ಷನ್ ವರೆಗೆ ಅವಕಾಶ ಮಾಡಿಕೊಡಲಾಗಿದೆ.
ಟೆಂಪೊ ಟ್ರಾವಲ್ ಮತ್ತು ಬಸ್ಸುಗಳ ಪಾರ್ಕಿಂಗ್
ಟೆಂಪೊ ಟ್ರಾವಲ್ ರ್, ಬಸ್ಸುಗಳಿಗೆ ಮಹಾರಾಜ ಜೂನಿಯರ್ ಕಾಲೇಜು, ಮಹಾರಾಣಿ ಕಾಲೇಜಿನಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು, ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿ ಸುಗಮ ಸಂಚಾರ ಹಾಗೂ ಕಾರ್ಯಕ್ರಮವು ಸುಲಲಿತವಾಗಿ ನಡೆಯಲು ಸಹಕರಿಸುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.