ರೌಡಿಗಳ ಹೆಡೆಮುರಿಕಟ್ಟಲು ಮೈಸೂರು ಪೊಲೀಸರು ಮಾಡಿದ ಹೊಸ ಪ್ಲಾನ್ ಹೀಗಿದೆ
ಮೈಸೂರು, ಜನವರಿ 6:ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸದಾ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೈಸೂರು ಪೊಲೀಸರು ಹೊಸ ಯೋಜನೆ ಆಯೋಜಿಸಿದ್ದಾರೆ.
ಈಗಾಗಲೇ 2017ನೇ ಜನವರಿ ಮಾಹೆಯಲ್ಲಿ ನಗರಕ್ಕೆ ಪ್ರತ್ಯೇಕವಾದ ರೌಡಿ ಪ್ರತಿಬಂಧಕ ದಳವನ್ನು (Anti Rowdy Squad) ರಚಿಸಿದ್ದು, ಈ ದಳಗಳ ಮೂಲಕ ನಗರದ ರೌಡಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಅತ್ಯಂತ ಕಠಿಣ ಕ್ರಮ ಜಾರಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.
ಕುಖ್ಯಾತ ಕ್ರಿಮಿನಲ್ ಮುರಳೀಧರನ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ
ಈ ದಳವು ನಗರದಲ್ಲಿರುವ ಪ್ರಮುಖವಾದ ಮತ್ತು ತೀವ್ರ ಚಟುವಟಿಕೆಯಲ್ಲಿರುವ ರೌಡಿ ಆಸಾಮಿಗಳ ಸಂಪೂರ್ಣ ಚಲನವಲನಗಳ ಮೇಲೆ ನಿಗಾವಹಿಸುತ್ತಿದೆ. ಪ್ರತಿ ತಿಂಗಳು ಈ ರೌಡಿ ಆಸಾಮಿಗಳ ಪೆರೇಡ್ ನಡೆಸಿ ಅವರುಗಳಿಗೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕಟ್ಟೆಚ್ಚರ ನೀಡಲಾಗುತ್ತಿದೆ.
ಇವರುಗಳ ಮನೆಗಳಿಗೆ ಕಾನೂನಿನ ರೀತ್ಯಾ ಆಗ್ಗಾಗ್ಗೆ ದಿಢೀರ್ ದಾಳಿ ನಡೆಸಿ, ಶೋಧನ ಕಾರ್ಯ ಕೈಗೊಳ್ಳಲಾಗುತ್ತಿದೆ. ಇವರುಗಳು ಪುನರಾವರ್ತಿಯಾಗಿ ಯಾವುದೇ ರೀತಿಯ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಆಗ್ಗಾಗ್ಗೆ ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಮುಂದೆ ಓದಿ...
ಭಾಗಿಯಾಗುವವರ ವಿರುದ್ಧ ಗಡಿಪಾರು
ಕಾನೂನಿನ ರೀತ್ಯಾ ಕ್ರಮ ಜರುಗಿಸಿದ ನಂತರವೂ ಪದೇ ಪದೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತಿದೆ. ರೌಡಿಗಳು ಸಾರ್ವಜನಿಕರಿಗೆ ತೊಂದರೆ ನೀಡುವುದು, ಹಫ್ತಾ ವಸೂಲಿ ಮಾಡುವುದು, ಬಲವಂತವಾಗಿ ರಿಯಲ್ ಎಸ್ಟೇಟ್ ದಂಧೆ ನಡೆಸುವುದು, ಭೂ ಕಬಳಿಕೆ ಮಾಡುವುದು, ಹಲ್ಲೆ ಮತ್ತು ಭಯ ಪಡಿಸುವುದು, ಮಹಿಳೆಯರನ್ನು ಚುಡಾಯಿಸುವುದು, ಬ್ಲಾಕ್ ಮೇಲ್ ಮಾಡಿದರೆ ತಕ್ಷಣ ರೌಡಿ ಪ್ರತಿಬಂಧಕದಳವನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಿದ್ದಾರೆ.
ರೌಡಿಗಳಿಗೆ ಕಟ್ಟೆಚ್ಚರ
2019ನೇ ಹೊಸ ವರ್ಷಾಚರಣೆ ಸಮಯದಲ್ಲಿಯೂ ಸಹ ಡಿ.ಸಿ.ಪಿ. ಡಾ. ವಿಕ್ರಂ ಅಮಟೆ ಅವರ ನೇತೃತ್ವದಲ್ಲಿ ರೌಡಿಗಳ ಪೆರೇಡ್ ಮತ್ತು ರೌಡಿ ಮನೆಗಳಿಗೆ ದಿಢೀರ್ ದಾಳಿ ನಡೆಸಿ ಶೋಧನಾ ಕಾರ್ಯ ನಡೆಸಿ ರೌಡಿಗಳಿಗೆ ಕಟ್ಟೆಚ್ಚರ ನೀಡಲಾಗಿತ್ತು. ಈ ವರ್ಷದಲ್ಲಿಯೂ ಸಹ ಇನ್ನೂ ಹೆಚ್ಚಿನ ರೀತಿಯಲ್ಲಿ ಇವರುಗಳ ಮೇಲೆ ನಿಗಾ ವಹಿಸಿ ಮೈಸೂರು ನಗರವನ್ನು ರೌಡಿ ಚಟುವಟಿಕೆ ಮುಕ್ತ ನಗರವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಕಮೀಷನರ್ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.
50 ಲಕ್ಷ ಡಕಾಯಿತಿ ಪ್ರಕರಣ, ರೌಡಿ ಶೀಟರ್ಗೆ ಪೊಲೀಸರ ಗುಂಡೇಟು
ದ್ವಿಚಕ್ರವಾಹನಗಳು ವಶಕ್ಕೆ
ಅಷ್ಟೇ ಅಲ್ಲ, ಲಕ್ಷ್ಮಿಪುರಂ ಠಾಣೆಯ ಪೊಲೀಸರು ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಒಂದೇ ನಂಬರ್ ಪ್ಲೇಟ್ ಇರುವ, ನಂಬರ್ ಪ್ಲೇಟೇ ಇಲ್ಲದಿರುವ ಹಲವು ದ್ವಿಚಕ್ರವಾಹನಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಶಾಂತಲಾ ಚಿತ್ರಮಂದಿರದ ಸಿಗ್ನಲ್ ಬಳಿಯಿಂದು ಕಾರ್ಯಾಚರಣೆಗಿಳಿದ ಲಕ್ಷ್ಮಿಪುರಂ ಠಾಣೆಯ ಪೊಲೀಸರು ನಂಬರ್ ಪ್ಲೇಟ್ ಒಂದೇ ಇರುವ ಮತ್ತು ನಂಬರ್ ಪ್ಲೇಟ್ ನ್ನೇ ಅಳವಡಿಸದ ದ್ವಿಚಕ್ರವಾಹನಗಳನ್ನು ತಮ್ಮ ವಶಕ್ಕೆ ಪಡೆದರು.
ಕಾನೂನು ರೀತ್ಯ ಕ್ರಮ
ಈ ಸಂದರ್ಭದಲ್ಲಿ ಲಕ್ಷ್ಮಿಪುರಂ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಘು ಮಾತನಾಡಿ, ಕೆಲವರು ತಮ್ಮ ದ್ವಿಚಕ್ರವಾಹನಗಳಿಗೆ ಒಂದೇ ನಂಬರ್ ಪ್ಲೇಟ್ ಅಳವಡಿಸಿದ್ದಾರೆ. ಹಿಂದೆ ಅಥವಾ ಮುಂದುಗಡೆ ನಂಬರ್ ಪ್ಲೇಟ್ ಸಿಂಗಲ್ಲಾಗಿದೆ. ಆದರೆ ಇನ್ನು ಕೆಲವು ದ್ವಿಚಕ್ರವಾಹನಗಳಿಗೆ ನಂಬರ್ ಪ್ಲೇಟ್ ನ್ನೇ ಅಳವಡಿಸಲಾಗಿಲ್ಲ. ಅಂತಹವುಗಳನ್ನೆಲ್ಲ ನಮ್ಮ ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ಯುತ್ತೇವೆ. ಎರಡು ನಂಬರ್ ಪ್ಲೇಟ್ ಅಳವಡಿಸದ ಕಾರಣ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಈ ವಾಹನವನ್ನು ಬಳಸಿಕೊಳ್ಳಬಹುದೆನ್ನುವ ಅನುಮಾನ ನಮ್ಮದು. ಅದಕ್ಕಾಗಿ ಈ ಕಾರ್ಯಾಚರಣೆ ನಡೆದಿದೆ. ಅವರು ಠಾಣೆಗೆ ಬಂದು ಈ ವಾಹನ ನಮ್ಮದೇ ಎಂದು ಸರಿಯಾದ ದಾಖಲಾತಿಯನ್ನು ತೋರಿಸಿ, ನಮ್ಮೆದುರೇ ನಂಬರ್ ಪ್ಲೇಟ್ ಅಳವಡಿಸಿದರೆ ಮಾತ್ರ ದಂಡವಿಧಿಸಿ ವಾಹನ ಬಿಟ್ಟುಕೊಡಲಾಗುವುದು. ಇಲ್ಲದಿದ್ದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ : ಎಎಸ್ಐಗಳ ಕೈಗೆ ರಿವಾಲ್ವಾರ್!