ಪ್ರಾಣಿ ತ್ಯಾಜ್ಯ ಸಂಸ್ಕರಣೆಗೆ ಮೈಸೂರು ಪಾಲಿಕೆ ಚಿಂತನೆ?
ಮೈಸೂರು, ಮೇ 27: ಕಸದಿಂದ ರಸ ಮಾಡುವ ಪ್ರಯತ್ನಗಳು ಈಗೀಗ ಎಲ್ಲೆಲ್ಲೂ ನಡೆಯುತ್ತಿವೆ. ಅದೇ ಹಾದಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಇನ್ನೂ ಒಂದು ಹೆಜ್ಜೆ ಇಟ್ಟಿದೆ.
ದಿನವೊಂದಕ್ಕೆ ಮಾಂಸ, ಕೋಳಿ ಹಾಗೂ ಮೀನಿನ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕ್ವಿಂಟಾಲ್ ಗಟ್ಟಲೆ ಪ್ರಾಣಿಗಳ ತ್ಯಾಜ್ಯ ಕೊಳೆತು ಗಬ್ಬುನಾತ ಬೀರಲು ಆರಂಭಿಸುತ್ತದೆ. ಅವನ್ನು ಮೋರಿಗೋ ಕಸಕ್ಕೋ ಬಿಸಾಡಿ ಅಂಗಡಿಯವರು ಸುಮ್ಮನಾಗಿಬಿಡುತ್ತಾರೆ. ಆ ತ್ಯಾಜ್ಯ ನಿಷ್ಪ್ರಯೋಜಕವಾಗಿ ಹೋಗುತ್ತದೆ. ಆದರೆ ಈ ತ್ಯಾಜ್ಯವನ್ನೇ ಬಳಸಿ ಬಯೋಗ್ಯಾಸ್, ಕಾಂಪೋಸ್ಟ್, ಅದರೊಟ್ಟಿಗೆ ಮೀನಿನ ಆಹಾರ ತಯಾರಿಸುವ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ಜಾರಿಗೆ ತರಲು ನಿರ್ಧರಿಸಿದೆ.
ಮೈಸೂರು ಪಾಲಿಕೆಯಲ್ಲಿ ಮೂಲೆಗುಂಪಾದ ಶಕ್ತಿಮಾನ್
ಚೆನ್ನೈನಲ್ಲಿ ಅತ್ಯಾಧುನಿಕ ರೀತಿ ಪ್ರಾಣಿಗಳ ತ್ಯಾಜ್ಯವನ್ನು ಸಂಸ್ಕರಿಸಿ ಅದರಿಂದ ಬಯೋಗ್ಯಾಸ್, ಕಾಪೋಸ್ಟ್ ಗೊಬ್ಬರ, ಮೀನಿನ ಆಹಾರ ಘಟಕವನ್ನು ಸ್ಥಾಪಿಸಲಾಗಿತ್ತು. ಇದೇ ಮಾದರಿಯ ಘಟಕ ಸ್ಥಾಪಿಸುವ ಕ್ರಿಯಾ ಯೋಜನೆ ತಯಾರಿಸಿ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಪಡೆದು, ಯೋಜನೆಗಾಗಿ ಬಜೆಟ್ ನಲ್ಲಿ 5 ಕೋಟಿ ರೂಪಾಯಿ ಅನುದಾನಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಮಂಗಳೂರು ಮೂಲದ ಪ್ರಗತಿ ಬ್ರಾಯ್ಲರ್ಸ್ ಸಂಸ್ಥೆಯ ಜೀವನ್ ದಾಸ್ ರೈ ಎಂಬುವರು ಚೆನ್ನೈನಲ್ಲಿ ಅತ್ಯಾಧುನಿಕ ರೆಂಡರಿಂಗ್ ಪ್ಲಾಂಟ್ ನಡೆಸುತ್ತಿದ್ದು, ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಉತ್ಪಾದಿಸುತ್ತಿರುವುದರಿಂದ ಮೈಸೂರಲ್ಲೂ ಈ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕೆ ಮೈಸೂರಿನ ರಾಯನಕೆರೆ ಹಾಗೂ ವಿದ್ಯಾರಣ್ಯಪುರಂನಲ್ಲಿ ತಲಾ 5 ಎಕರೆ ಪಾಲಿಕೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ.
ಹೆಚ್ಚುವರಿ ಕುಡಿಯುವ ನೀರು ಪೂರೈಕೆಗೆ ಮೈಸೂರು ಪಾಲಿಕೆ ತೆಗೆದುಕೊಂಡ ಕ್ರಮವೇನು?
ಯೋಜನೆಗೆ ಮೈಸೂರು ಮಾಜಿ ಮೇಯರ್ ಗಳ ವಿರೋಧ: ಪ್ರಾಣಿಗಳ ಮಾಂಸ ತ್ಯಾಜ್ಯದಿಂದ ಪಶು ಆಹಾರ ತಯಾರು ಮಾಡುವ ಪಾಲಿಕೆ ಚಿಂತನೆಗೆ ಮಾಜಿ ಮೇಯರ್ ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಮೇಯರ್ ಗಳಾದ ಬಿ.ಎಲ್.ಭೈರಪ್ಪ, ಪುರುಷೋತ್ತಮ್ ಸುದ್ದಿಗೋಷ್ಠಿ ನಡೆಸಿ, ನಮ್ಮ ಸಂಪ್ರದಾಯದಲ್ಲಿ ಗೋವುಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಆದರೆ ಗೋವುಗಳನ್ನು ಕೂಡಾ ಮಾಂಸಾಹಾರಿ ಮಾಡಲು ಹೊರಟಿರುವುದು ವಿಪರ್ಯಾಸ. ಸುಯೋಜ್ ಫಾರಂನಲ್ಲಿ ಪ್ರಾಣಿ ತ್ಯಾಜ್ಯಗಳಿಂದ ಪಶು ಆಹಾರ ತಯಾರಿಕಾ ಘಟಕ ಮಾಡಲು ತೀರ್ಮಾನ ಮಾಡಿರುವುದು ಅವೈಜ್ಞಾನಿಕ. ಸಾರ್ವಜನಿಕರು ಸುಯೇಜ್ ಫಾರಂನ ವಾಸನೆಯಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಎರಡೂ ಘಟಕಗಳು ಇಲ್ಲಿಯೇ ನಿರ್ಮಾಣವಾದರೆ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಲಿದೆ. ಕೂಡಲೇ ಪಾಲಿಕೆ ಆಯುಕ್ತರು ಹಾಗೂ ಪಶುವೈದ್ಯಾಧಿಕಾರಿಗಳು ಈ ಯೋಜನೆಯನ್ನು ಇಲ್ಲಿಗೇ ಕೈಬಿಡಬೇಕು. ನುರಿತ ತಜ್ಞರಿಂದ ಇದರ ಬಗ್ಗೆ ಸಂಶೋಧನೆ ನಡೆಸಿ ನಂತರ ಯೋಜನೆ ಬಗ್ಗೆ ಚಿಂತಿಸಬೇಕು ಎಂದಿದ್ದಾರೆ.
ಈ ಯೋಜನೆ ಮುಂದುವರೆಸಿದ್ದೇ ಆದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಮಾಜಿ ಮೇಯರ್ ಭೈರಪ್ಪ.