ಮೈಸೂರು: ಕಸದ ವಿಲೇವಾರಿಗೆ ಬಂತು ಸರ್ವೇ ಕಾರ್ಯ
ಮೈಸೂರು, ಜೂನ್ 12 : ತ್ಯಾಜ್ಯ ವಿಲೇವಾರಿ ಸಮಸ್ಯೆ ನಗರ ಪಾಲಿಕೆಗೆ ಹೆಚ್ಚು ತಲೆನೋವಾಗಿ ಪರಿಣಮಿಸಿದ್ದು, ತ್ಯಾಜ್ಯ ಎಲ್ಲಿಂದ ಹೆಚ್ಚು ಉತ್ಪಾದನೆಯಾಗುತ್ತಿದೆ ಎಂಬುದನ್ನು ತಿಳಿಯುವ ಸಲುವಾಗಿ ಸರ್ವೆ ಕಾರ್ಯವನ್ನು ಆರಂಭಿಸಲಾಗಿದೆ. ಅಂತೆಯೇ ನಗರದಲ್ಲಿರುವ ಹೋಟೆಲ್ ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳ ಬಗ್ಗೆ ಸರ್ವೆ ಮಾಡಿಸಲು ಕೂಡ ನಗರ ಪಾಲಿಕೆ ಮುಂದಾಗಿದೆ.
ಸ್ವಚ್ಛ ನಗರಿ ಎಂದೇ ಬಿರುದು ಪಡೆದಿರುವ ಮೈಸೂರಿಗೆ ಕಸ ವಿಲೇವಾರಿಯದ್ದೇ ದೊಡ್ಡ ತಲೆನೋವು. ಪ್ರತಿ ದಿನ 400 ಟನ್ ತ್ಯಾಜ್ಯ ನಗರದಲ್ಲಿ ಉತ್ಪಾದನೆಯಾಗುತ್ತಿದೆ. ಅದರ ವೈಜ್ಞಾನಿಕ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಶಾಸಕ ರಾಮದಾಸ್ ಅವರು ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ ಎಂದು ನಗರ ಪಾಲಿಕೆ ಮುಂಭಾಗ ಧರಣಿ ಕೂಡ ನಡೆಸಿದ್ದರು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ತ್ಯಾಜ್ಯ ಉತ್ಪಾದನೆ ಬಗ್ಗೆ ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಸ್ವಚ್ಛತಾ ಕಾರ್ಯಕ್ಕೆ ಸ್ವತಃ ಬೀದಿಗಿಳಿದ ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್
ಈ ಸಂಬಂಧ ಕೆಲವು ದಿನಗಳಿಂದ ಇಂಜಿನಿಯರ್ ನೇತೃತ್ವದಲ್ಲಿ ನಗರಪಾಲಿಕೆ ಸಿಬ್ಬಂದಿ ನಗರದಾದ್ಯಂತ ಇರುವ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಕಲ್ಯಾಣ ಮಂಟಪ, ಕಾರ್ಖಾನೆ, ಗುಡಿ ಕೈಗಾರಿಕೆ ಹಾಗೂ ಇನ್ನಿತರೆ ವಾಣಿಜ್ಯ ಸಂಸ್ಥೆಗಳಲ್ಲಿ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಿದ್ದಾರೆ.
ಕರ್ನಾಟಕ ಮುನಿಸಿಪಲ್ ಕಾಯ್ದೆ ಪ್ರಕಾರ ಹೋಟೆಲ್, ಕಲ್ಯಾಣ ಮಂಟಪ ಹಾಗೂ ಇನ್ನಿತರ ವಾಣಿಜ್ಯ ಮಳಿಗೆಗಳಲ್ಲಿ 100 ಕೆಜಿಗಿಂತಲೂ ಹೆಚ್ಚು ತ್ಯಾಜ್ಯ ಉತ್ಪಾದನೆಯಾದಲ್ಲಿ ವೈಜ್ಞಾನಿಕ ವಿಧಾನದಿಂದ ವಿಲೇವಾರಿ ಮಾಡುವ ಘಟಕವನ್ನು ಆಯಾ ಹೋಟೆಲ್, ಕಲ್ಯಾಣ ಮಂಟಪಗಳ ಮಾಲೀಕರೇ ನಿರ್ಮಿಸಬೇಕು. ಆದರೆ ಬಹುತೇಕ ಕಡೆ ಇದರ ನಿರ್ಮಾಣಕ್ಕೆ ಮಾಲೀಕರು ಮುಂದಾಗುವುದಿಲ್ಲ ಎಂಬುದು ಅಧಿಕಾರಿಗಳ ಆರೋಪ. ಹೀಗಾಗಿ ಸರ್ವೆ ಕಾರ್ಯದ ಬಳಿಕ ಹೋಟೆಲ್ ಹಾಗೂ ಇನ್ನಿತರ ವಾಣಿಜ್ಯ ಮಳಿಗೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ, ಅದರಲ್ಲಿ ನಗರ ಪಾಲಿಕೆಗೆ ನೀಡುತ್ತಿರುವ ತ್ಯಾಜ್ಯವೆಷ್ಟು ಎಂಬುದನ್ನು ಅಂಕಿ ಅಂಶಗಳ ಮೂಲಕ ಲೆಕ್ಕಾಚಾರ ಮಾಡಿಕೊಳ್ಳುವ ಕೆಲಸವನ್ನು ನಗರ ಪಾಲಿಕೆ ಸಿಬ್ಬಂದಿ ಕೈಗೆತ್ತಿಕೊಂಡಿದ್ದಾರೆ.
ರಾಜಭವನದಲ್ಲಿ ಹಸಿ ಕಸ ಸಂಸ್ಕರಣೆ, ಕಾಂಪೋಸ್ಟ್ ತಯಾರು
ಸರ್ವೆ ಕಾರ್ಯದ ನಂತರ ನಗರ ಪಾಲಿಕೆ ಅಧಿಕಾರಿಗಳು ಖುದ್ದು ಹೋಟೆಲ್ ಹಾಗೂ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತ ಬಳಿಕ ತಪ್ಪಿದ್ದಲ್ಲಿ, ಕಾನೂನಿನ ಪ್ರಕಾರ ದೂರು ದಾಖಲಿಸುವ ಕೆಲಸವನ್ನು ಮಾಡಲಿದ್ದಾರೆ. ಇದೊಂದು ಕಸ ವಿಂಗಡಣೆಯ ಕುರಿತ ಸಮಗ್ರ ಯೋಜನೆಯಾಗಿದ್ದು, ಎಷ್ಟು ಸಫಲವಾಗಲಿದೆ ಎಂದು ಕಾದು ನೋಡಬೇಕಿದೆ.