ಮೈಸೂರಿಗನ ಯೋಗ ಸಾಧನೆ; ಥಾಯ್ಲೆಂಡ್ ನಲ್ಲಿ ಮೊಳಗಿತು ಕನ್ನಡದ ಕಂಪು
ಮೈಸೂರು, ಜುಲೈ 13: ದೃಷ್ಟಿದೋಷ ನಿವಾರಣೆಗಾಗಿ ಯೋಗ ಪ್ರಾರಂಭಿಸಿದ ಯುವಕನೊಬ್ಬ ಇದೀಗ ಅದೇ ಯೋಗದಿಂದ ಥಾಯ್ಲೆಂಡ್ ನಲ್ಲಿ ಆರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.
ಮೈಸೂರು ನಗರದ ಬೆಸ್ತಗೇರಿ ನಿವಾಸಿ ಹಾಗೂ ಅರಮನೆ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಪರಶುರಾಮ ಅವರ ಪುತ್ರ ಪಿ. ಕುವಲಾಶ್ವ ವಿದೇಶದಲ್ಲಿ ಯೋಗ ಸಾಧನೆ ಮಾಡುವ ಮೂಲಕ ಕನ್ನಡದ ಕಂಪನ್ನು ಮೊಳಗಿಸಿದ್ದಾರೆ.
ಮೈಸೂರಿನಲ್ಲಿ ಯೋಗದ್ದೇ ಧ್ಯಾನ, ಯೋಗದ್ದೇ ಕನವರಿಕೆ
ಥಾಯ್ಲೆಂಡ್ ನಲ್ಲಿ ಜೂನ್ ತಿಂಗಳಿನಲ್ಲಿ ಎರಡು ದಿನಗಳ ಕಾಲ ನಡೆದ ವಿಶ್ವ 7ನೇ ಅಂತಾರಾಷ್ಟ್ರೀಯ ಯೋಗ ಫೆಸ್ಟಿವಲ್ ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಆರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ ಕುವಲಾಶ್ವ. ಭಾರತದಿಂದ ತೆರಳಿದ್ದ 150 ಮಂದಿಯಲ್ಲಿ ಅತ್ಯಧಿಕ ಪ್ರಶಸ್ತಿ ಪಡೆದ ಗರಿಮೆ ಇವರದ್ದು.
'ದೃಷ್ಟಿದೋಷ ನಿವಾರಣೆಗಾಗಿ ಯೋಗ ಮಾಡಲು ಪ್ರಾರಂಭಿಸಿದೆ. ಇಂದು ಇದರಿಂದ ನನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ. ಥಾಯ್ಲೆಂಡ್ ನಲ್ಲೂ ಯೋಗ ಪ್ರದರ್ಶನ ಮಾಡಿದೆ. ಆರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇದೇ ಕ್ಷೇತ್ರದಲ್ಲಿ ಮತ್ತಷ್ಟು ಸಾಧಿಸಬೇಕೆಂಬ ಹಂಬಲವಿದೆ' ಎಂದರು ಕುವಲಾಶ್ವ.