ಅಮೆರಿಕಾದಲ್ಲೇ ನಡೆಯಿತು ಮೈಸೂರಿನ ಅಭಿಷೇಕ್ ಅಂತ್ಯಕ್ರಿಯೆ
ಮೈಸೂರು, ಡಿಸೆಂಬರ್ 7: ಕಳೆದ ನ. 28ರಂದು ಅಮೆರಿಕಾದ ಹೋಟೆಲೊಂದರಲ್ಲಿ ದುಷ್ಕರ್ಮಿಯೊಬ್ಬನಿಂದ ಹತ್ಯೆಗೀಡಾಗಿದ್ದ ಮೈಸೂರಿನ ಕುವೆಂಪುನಗರ ನಿವಾಸಿ ಅಭಿಷೇಕ್ ಅವರ ಅಂತ್ಯ ಸಂಸ್ಕಾರವನ್ನು ನಿನ್ನೆ ಬಾಬಿಟ್ ಮೆಮೊರಿಯಲ್ ಚಾಪೆಲ್ ನಲ್ಲಿ ನೆರವೇರಿಸಲಾಯಿತು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಅಭಿಷೇಕ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿಯ ಅಧ್ಯಕ್ಷರು, ಶಿಕ್ಷಕರು, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಭಾರತೀಯ ಹಾಗೂ ಕನ್ನಡ ಸಂಘಟನೆಗಳ ಸದಸ್ಯರಲ್ಲದೇ ಅಭಿಷೇಕ್ ತಂದೆ ಸುದೇಶ್, ತಾಯಿ ನಂದಿನಿ, ಸೋದರ ಅಭಿಶ್ರೇಷ್ಠ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಸ್ತಿ ಸಂಚಯ ಹಾಗೂ ಇತರ ಧಾರ್ಮಿಕ ಕ್ರಿಯೆಗಳನ್ನು ಇಂದು ಅಮೆರಿಕಾದ ಫೀನಿಕ್ಸ್ ನಲ್ಲಿರುವ ಪುತ್ತಿಗೆ ಮಠದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಅಮೆರಿಕ ತಲುಪಿದ ಅಭಿಷೇಕ್ ಕುಟುಂಬ; ಅಂತ್ಯಕ್ರಿಯೆ ಬಗ್ಗೆ ತೀರ್ಮಾನ
ಉನ್ನತ ವ್ಯಾಸಂಗಕ್ಕೆಂದು ತೆರಳಿದ ಮಗನ ಹತ್ಯೆಯ ಘಟನೆಯ ಆಘಾತದಿಂದ ಇನ್ನೂ ಕುಟುಂಬಸ್ಥರು ಚೇತರಿಸಿಕೊಂಡಿಲ್ಲ. ವೀಸಾ ಸಿಗಲು ತಡವಾದ ಕಾರಣ ಕುಟುಂಬದವರಿಗೆ ಅಮೆರಿಕಾಗೆ ತೆರಳಲು ತಡವಾಗಿತ್ತು. ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ, ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ವಿದೇಶ ಮಂತ್ರಿಗಳ ಕಾರ್ಯಾಲಯಕ್ಕೆ ಟ್ವಿಟರ್ ಮೂಲಕ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದರು. ನಂತರ ವೀಸಾ ದೊರೆತಿತ್ತು.