ಭಾರತ ಮಾತೆಯ ಮಡಿಲು ಸೇರಿದ ಯೋಧ ಮಹೇಶ್
ಮೈಸೂರು,ಫೆಬ್ರವರಿ,16 : ಸಿಯಾಚಿನ್ ಹಿಮಪಾತದಲ್ಲಿ ಹುತಾತ್ಮನಾದ ವೀರಯೋಧ ಮಹೇಶ್ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಹೋಬಳಿಯ ಪಶುಪತಿಯಲ್ಲಿ ಅಪಾರ ಬಂಧುಗಳು, ಗ್ರಾಮಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ವೀರಶೈವ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಹೆಚ್.ಡಿ.ಕೋಟೆಯಿಂದ ಮಧ್ಯಾಹ್ನ ಕೆ.ಆರ್.ನಗರಕ್ಕೆ ವೀರಯೋಧ ಮಹೇಶ್ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಶಾಸಕ ಸಾ.ರಾ.ಮಹೇಶ್ ಹಾಗೂ ತಾಲೂಕು ಆಡಳಿತ ಸಾವಿರಾರು ಮಂದಿ ಪುಷ್ಪಗುಚ್ಚ ಅರ್ಪಿಸಿ ಬರ ಮಾಡಿಕೊಂಡರು.
ತಾಯಿ ಸರ್ವಮಂಗಳ ಹಾಗೂ ಸಹೋದರ ಮಂಜುನಾಥ್ ಕುಟುಂಬದವರ, ಸಂಬಂಧಿಕರ ರೋಧನ ಮುಗಿಲು ಮುಟ್ಟಿದ್ದು, ನೋಡಿದವರು ಕಣ್ಣೀರು ಹಾಕದೇ ಮನೆಗೆ ತೆರಳಲೇ ಇಲ್ಲ. ಕರುಳು ಕಿವುಚುತ್ತಿತ್ತು ಆ ಹೃದಯ ವಿದ್ರಾವಕ ದೃಶ್ಯ.[ಸಿಯಾಚಿನ್ ಹೀರೋ ಹಾಸನದ ನಾಗೇಶ್ ಗೆ ದುಃಖತಪ್ತ ವಿದಾಯ]
ನಂತರ ಸಾಲಿಗ್ರಾಮ ಮುಖಾಂತರ ಪಶುಪತಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಮೃತ ವೀರಯೋಧ ಮಹೇಶ್ ಅವರ ಜಮೀನಿನ ನಿರ್ಮಿಸಿದ್ದ ವೇದಿಕೆಯಲ್ಲಿ ಕೆಲ ಸಮಯ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಸರತಿ ಸಾಲಿನಲ್ಲಿ ನಿಂತು ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ಜೈಕಾರದ ಘೋಷಣೆಗಳನ್ನು ಕೂಗುತ್ತಾ ಜನ ಅಂತಿಮ ದರ್ಶನ ಪಡೆದರು. ವೀರಯೋಧನಿಗೆ ನೀವು ಅಂತಿಮ ನಮನ ಸಲ್ಲಿಸಿ.
ಮಧ್ಯಾಹ್ನ ಸ್ವಗ್ರಾಮ ತಲುಪಿದ ಪಾರ್ಥಿವ ಶರೀರ
ಫೆಬ್ರವರಿ 1 ರಂದು ಆದ ಸಿಯಾಚಿನ್ ಹಿಮಪಾತ ಘಟನೆಯಲ್ಲಿ ಸಾವನ್ನಪ್ಪಿದ ಯೋಧ ಮಹೇಶ್ ಅವರ ಪಾರ್ಥಿವ ಶರೀರವನ್ನು ಹೆಚ್.ಡಿ.ಕೋಟೆಯಿಂದ ಮಧ್ಯಾಹ್ನ ಕೆ.ಆರ್.ನಗರಕ್ಕೆ ತರಲಾಯಿತು.
ಅಂತಿಮ ನಮನ ಸಲ್ಲಿಸಿದ ಸಿಎಂ
ಸಿಯಾಚಿನ್ ನಲ್ಲಿ ವೀರಮರಣವನ್ನಪ್ಪಿದ ಯೋಧ ಪಿ.ಎನ್.ಮಹೇಶ್ ಅವರ ಸ್ಮರಣಾರ್ಥ ಸ್ಮಾರಕವನ್ನು ಎಚ್.ಡಿ.ಕೋಟೆ ಪಟ್ಟಣದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದರು.
ಅಂತಿಮ ನಮನ ಸಲ್ಲಿಸಿದ ಗಣ್ಯರು
ಹೆಚ್.ಡಿ.ಕೋಟೆಯಿಂದ ಮಧ್ಯಾಹ್ನ ಕೆ.ಆರ್.ನಗರಕ್ಕೆ ವೀರಯೋಧ ಮಹೇಶ್ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಶಾಸಕ ಸಾ.ರಾ.ಮಹೇಶ್ ಹಾಗೂ ತಾಲೂಕು ಆಡಳಿತ ಸಾವಿರಾರು ಮಂದಿ ಪುಷ್ಪಗುಚ್ಚ ಅರ್ಪಿಸಿ ಬರ ಮಾಡಿಕೊಂಡರು.
ವೀರಶೈವ ಪದ್ದತಿಯಲ್ಲಿ ಅಂತ್ಯ ಸಂಸ್ಕಾರ
ವೀರಯೋಧ ಮಹೇಶ್ ಅಂತ್ಯಕ್ರಿಯೆಯು ಸ್ವಂತ ಜಮೀನಿನಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿ ಬೆಟ್ಟದಪುರದಲ್ಲಿ ನಡೆಯಿತು. ಕನ್ನಡಮಠದ ಶ್ರೀಚಿಕ್ಕ ಬಸವದೇಶಿ ಕೇಂದ್ರ ಸ್ವಾಮಿಗಳು, ಕರ್ಪೂರವಳ್ಳಿ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ ವೀರಯೋಧ ಮಹೇಶ್ ಸಹೋದರ ಮಂಜುನಾಥ್, ತಾಯಿ ಸರ್ವಮಂಗಳಾ ಪೂಜಾ ವಿಧಿ ವಿಧಾನಗಳನ್ನು ನೇರವೇರಿಸಿದರು.
ಮಹೇಶ್ ಅಂತ್ಯ ಸಂಸ್ಕಾರದಲ್ಲಿ ಕುಶಾಲತೋಪು ಹಾರಿಸಿದ ಯೋಧರು
ಈ ಸಂದರ್ಭ ಯೋಧರು ಹುತಾತ್ಮ ಯೋಧ ಮಹೇಶ್ ಅವರಿಗೆ ಕುಶಾಲತೋಪನ್ನು ಹಾರಿಸಿ ಗೌರವ ಸಲ್ಲಿಸಿದರು. ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.
ಅಂತಿಮ ಸಂಸ್ಕಾರದಲ್ಲಿ ಯಾರು ಇದ್ದರು?
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಶಾಸಕ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವಖರೆ, ಉಪವಿಭಾಗಾಧಿಕಾರಿ ಆನಂದ್, ತಹಸೀಲ್ದಾರ್ ನಾಗರಾಜ್, ವೀರಯೋಧ ಮಹೇಶ್ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವಗಳೊಂದಿಗೆ ಪುಷ್ಪಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು.
ಯೋಧ ಮಹೇಶ್ ಅಂತಿಮ ಸಂಸ್ಕಾರದಲ್ಲಿ ಜನವೋ ಜನ
ಸಿಯಾಚಿನ್ ದುರಂತದಲ್ಲಿ ಮರಣವನ್ನಪ್ಪಿದ ಯೋಧ ಮಹೇಶ್ ಅಂತ್ಯ ಸಂಸ್ಕಾರಕ್ಕೆ ನೂರಾರು ಮಂದಿ ಆಗಮಿಸಿದ್ದರು. ಅವರಲ್ಲಿ ಕಣ್ಣೀರ ಕಟ್ಟೆ ಒಡೆದಿತ್ತು.