ಮೈಸೂರಿನ ರಂಗಕರ್ಮಿ ದಂಪತಿ ಲಕ್ನೋದಲ್ಲಿ ಸಾವು
ಮೈಸೂರು, ಜುಲೈ 8: ಮೈಸೂರಿನ ರಂಗಕರ್ಮಿ ದಂಪತಿ ಲಕ್ನೋ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಮೋರಿಗೆ ಉರುಳಿದ ಬಸ್; 29 ಮಂದಿ ಸಾವು
ಮೈಸೂರಿನ ಹಿರಿಯ ರಂಗಕರ್ಮಿ ಕೆ.ಮುದ್ದುಕೃಷ್ಣ (65) ಹಾಗೂ ಅವರ ಪತ್ನಿ ಬಿ.ಇಂದ್ರಾಣಿ (59) ಮೃತಪಟ್ಟವರು. ಪರದೆ ಹಿಂದಿನ ಧ್ರುವತಾರೆ ಎಂದೇ ಮುದ್ದುಕೃಷ್ಣ ಅವರು ಪ್ರಸಿದ್ಧಿ ಪಡೆದಿದ್ದರು.
ಇಂದ್ರಾಣಿಯವರು ಸಿಎಫ್ ಟಿಆರ್ ಐನಲ್ಲಿ ವಿಜ್ಞಾನಿಯಾಗಿದ್ದರು. ನಿನ್ನೆ ಲಕ್ನೋದಲ್ಲಿ ನಡೆದ ಅಪಘಾತದಲ್ಲಿ ಮುದ್ದುಕೃಷ್ಣ ಹಾಗೂ ಇಂದ್ರಾಣಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಇಂದ್ರಾಣಿ ಕೊನೆಯುಸಿರೆಳೆದಿದ್ದರು. ಚೇತರಿಕೆ ಹಾದಿಯಲ್ಲಿದ್ದ ಮುದ್ದುಕೃಷ್ಣ ಅವರು ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾರ್ಥಿವ ಶರೀರಗಳನ್ನು ತರಲು ರಂಗಕರ್ಮಿ ಜಯರಾಮ್ ಅವರು ಉತ್ತರ ಪ್ರದೇಶಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.
ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮುದ್ದುಕೃಷ್ಣರವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. ರಂಗಾಸಕ್ತರಾದ ಮುದ್ದುಕೃಷ್ಣರವರು ನೇರ ನಿಷ್ಠುರ ವ್ಯಕ್ತಿತ್ವದವರು. ಅವರ ಸಾವು ತುಂಬಲಾರದ ನಷ್ಟ. ಸಮಾಜದ ತೊಡಕುಗಳನ್ನು ಕೆದಕಿ ಸರಿಪಡಿಸಲು ಹೋರಾಟ ಮಾಡಿದ ಮುದ್ದುಕೃಷ್ಣ ದಂಪತಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದರು.
ನಟ ಮಂಡ್ಯ ರಮೇಶ್ ಮಾತನಾಡಿ, ಮುದ್ದುಕೃಷ್ಣ ಬಹುಮುಖಿ ಚಿಂತಕ. ಬಹುಕಾಲದಿಂದ ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ಅತಿ ಹೆಚ್ಚು ಹೆಸರು ಮಾಡಿದವರು ಇವರು. ಮೈಸೂರಿನ ರಂಗಭೂಮಿ ವಲಯ ನಿಜವಾದ ರಂಗಾಸಕ್ತರನ್ನು ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಇಂದ್ರಾಣಿ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲೇ ದುರಂತ ಸಂಭವಿಸಿರುವುದು ಕುಟುಂಬ ದುಃಖದ ಮಡುವಿನಲ್ಲೇ ಮುಳುಗುವಂತೆ ಮಾಡಿದೆ.