ಜೂ. 7ರಿಂದ ಮೈಸೂರು –ಬೆಂಗಳೂರು ವಿಮಾನಯಾನಕ್ಕೆ ಗ್ರೀನ್ ಸಿಗ್ನಲ್
ಮೈಸೂರು, ಮೇ 28 : ಕೇಂದ್ರ ಸರ್ಕಾರದ ನೂತನ ಯೋಜನೆ ಉಡಾನ್ ಹೆಸರಿನಲ್ಲಿ ಜೂನ್ 7ರಿಂದ ಮೈಸೂರು ಮತ್ತು ಬೆಂಗಳೂರು ನಡುವೆ ವಿಮಾನ ಹಾರಾಟ ಪ್ರಾರಂಭವಾಗಲಿದೆ.
ಕೆಲವೇ ದಿನಗಳಲ್ಲಿ ಮೈಸೂರು-ಕೊಚ್ಚಿ ವಿಮಾನ ಸೇವೆ ಆರಂಭ
ಕೇಂದ್ರ ಸರ್ಕಾರದ ಉಡಾನ್-3 ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೆಚ್ಚಿನ ವಿಮಾನಯಾನ ಸಂಪರ್ಕ ಕಲ್ಪಿಸಲು ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಜೂನ್ 7ರಿಂದ ಮೈಸೂರು - ಬೆಂಗಳೂರು ಮಾರ್ಗವಾಗಿ ವಿಮಾನ ಹಾರಾಟ ಆರಂಭವಾಗಲಿದೆ.
ಮೈಸೂರಿನ ಸಾಮಾಜಿಕ, ಆರ್ಥಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟ ಹಾಗೂ ಹೆಚ್ಚಿನ ವಿಮಾನ ಹಾರಾಟಕ್ಕೆ ಈ ಯೋಜನೆಯಡಿ ಅನುವು ಮಾಡಿಕೊಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈಸೂರಿನ ಜನತೆಯ ಪರವಾಗಿ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ .
ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 810 ರೂಪಾಯಿಗೆ ಫ್ಲೈ ಬಸ್ ವ್ಯವಸ್ಥೆ ದೊರೆಯುತ್ತದೆ. ನಿತ್ಯವೂ 10-15 ಫ್ಲೈ ಬಸ್ ಗಳು ಈಗಾಗಲೇ ಸಂಚರಿಸುತ್ತಿವೆ. ರೈಲು, ಬಸ್, ಕಾರು ಸೇರಿದಂತೆ ದಿನನಿತ್ಯವೂ ಸುಮಾರು 1000-1500 ಜನ ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಾರೆ. ಇವೆಲ್ಲದರೊಂದಿಗೆ ಇದೀಗ ಕೇವಲ 55 ನಿಮಿಷಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತಲುಪುವ ಏರ್ ಇಂಡಿಯಾ ವಿಮಾನ ಯಾನ ಸೇವೆಯೂ ಆರಂಭವಾಗುತ್ತಿರುವುದು ಸಂತಸ ತಂದಿದೆ ಎನ್ನುತ್ತಿದ್ದಾರೆ ಮೈಸೂರಿಗರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಸರ್ಕಾರದಿಂದ 300 ಎಕರೆ ಭೂಮಿ
ಪ್ರತಿನಿತ್ಯ ಮಧ್ಯಾಹ್ನ 12ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೊರಡುವ ಏರ್ ಇಂಡಿಯಾ ವಿಮಾನ ಒಂದು ಗಂಟೆಯ ಅವಧಿಯಲ್ಲಿ, ಅಂದರೆ ಮಧ್ಯಾಹ್ನ 1ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪುತ್ತದೆ. ಅದೇ ರೀತಿ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಟು 11.25ಕ್ಕೆ ಅಂದರೆ ಕೇವಲ ಐವತ್ತೈದು ನಿಮಿಷಗಳಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಸೇರಲಿದೆ. ಇದರ ದರ 1,589 ರೂಪಾಯಿ ನಿಗದಿಗೊಳಿಸಲಾಗಿದೆ. ಇದೇ ರೀತಿ ವಾರದ ಪ್ರತಿದಿನವೂ ಟಿಕೆಟ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಪ್ರತಿ ಮಂಗಳವಾರ ಈ ವಿಮಾನ ಸೇವೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ವಿಮಾನ ಯಾನ ಅಧಿಕಾರಿಗಳು.