ಮೈಸೂರು: ಜಯಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕನ್ ಚಿರತೆ ಆಗಮನ
ಮೈಸೂರು, ಆಗಸ್ಟ್ 18: ತನ್ನಲ್ಲಿರುವ ವೈವಿಧ್ಯಮಯ ಪ್ರಾಣಿ ಸಂಕುಲದಿಂದ ದೇಶದ ಗಮನ ಸೆಳೆದಿರುವ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಇದೀಗ ವಿದೇಶಿ ಮೂಲದ ಹೊಸ ಅತಿಥಿಯೊಂದು ಆಗಮನವಾಗಿದೆ.
ಮೊದಲೆಲ್ಲ ಪ್ರಾಣಿ ವಿನಿಮಯ ಯೋಜನೆ ಮೂಲಕ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದ್ದು, ಹಲವು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಬಹುಶಃ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಮೂಲಕ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ವಿದೇಶಿ ಅತಿಥಿಯ ಆಗಮನವಾಗಿದೆ.
ಮೈಸೂರು ಅರಮನೆ ತೆರೆಯುವ ಬಗ್ಗೆ ಮಹತ್ವದ ನಿರ್ಧಾರ
ದೂರದ ದಕ್ಷಿಣ ಆಫ್ರಿಕಾದಿಂದ ಬಂದಿರುವ ಅತಿಥಿ ಆಫ್ರಿಕನ್ ಚಿರತೆಯಾಗಿದ್ದು, ಇದನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಿಂಗಾಪುರ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ತರಲಾಗಿದೆ. ಚಿರತೆ ಈಗಾಗಲೇ ಮೈಸೂರು ಮೃಗಾಲಯ ತಲುಪಿದ್ದು, ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ.
ಮೈಸೂರು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ನೇತೃತ್ವದ ತಂಡ ಆಫ್ರಿಕಾದಿಂದ ಚಿರತೆಯನ್ನು ತರುವಲ್ಲಿ ಯಶಸ್ವಿಯಾಗಿದ್ದು, ಮೃಗಾಲಯಕ್ಕೆ ಬಂದಿರುವ ಹೊಸ ಅತಿಥಿಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲು ಮೃಗಾಲಯದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮೃಗಾಲಯದ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.