ನಳಿನಿ ಪ್ರಕರಣ; ವಕೀಲರ ಸಂಘದಿಂದ ಮಂಜುಳ ಮಾನಸ ಅಮಾನತು
ಮೈಸೂರು, ಜನವರಿ 24: ಸಂಘ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ವಕೀಲರಾದ ಮಂಜುಳ ಮಾನಸ ಅವರನ್ನು ಮೈಸೂರು ವಕೀಲರ ಸಂಘದಿಂದ ಅಮಾನತು ಮಾಡಲಾಗಿದೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ತಿಳಿಸಿದ್ದಾರೆ.
ವಕೀಲರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ವಕೀಲರ ಸಂಘ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
"ಫ್ರೀ ಕಾಶ್ಮೀರ್" ಪ್ರಕರಣ: ನಳಿನಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ
"ನಿನ್ನೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಸಂಘದ ವಿರುದ್ಧ ಹೇಳಿಕೆ ನೀಡಿದ್ದಾರೆ. ವಕೀಲರ ಸಂಘದಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರೂ ವಕೀಲರಾಗಿದ್ದರು. ನಮ್ಮ ಸಂಘದ ಸದಸ್ಯರೂ ಆಗಿದ್ದರು. ಈಗ ಯಾರದ್ದೋ ಚಿತಾವಣೆಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಹೇಳುವಂತೆ ನಾವು ಉದ್ದಟತನ ಮಾಡಿಲ್ಲ. ನಿನ್ನೆ ಹೇಳಿಕೆ ನೀಡುವಾಗ ಮಂಜುಳಾ ಮಾನಸ ಅವರೂ ಜೊತೆಗಿದ್ದರು. ಸಂಘದಲ್ಲಿ ನಡೆದ ವಿದ್ಯಮಾನಗಳನ್ನು ಹೊರಗೆ ಮಾತನಾಡುತ್ತಿದ್ದರು. ಇದನ್ನು ಸಂಘ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಮಾನತು ಮಾಡಿದ್ದೇವೆ" ಎಂದರು. ಕೂಡಲೇ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಂಜುಳಾ ಮಾನಸ ಈ ಹಿಂದೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದರು. ಸದ್ಯ ಕೆಪಿಸಿಸಿ ವಕ್ತಾರೆಯಾಗಿದ್ದಾರೆ.