ಒಂದೇ ಚೀಲದಲ್ಲಿ 13 ತಲೆಬುರುಡೆ: ಹೌಹಾರಿದ ಮೈಸೂರಿಗರು!
ಮೈಸೂರು, ಜನವರಿ 19 : ಧಾರವಾಡದ ಅಣ್ಣಿಗೇರಿಯಲ್ಲಿ ಕಳೆದ ವರುಷವಷ್ಟೇ ತಲೆಬುರುಡೆ ಪತ್ತೆಯಾಗಿದ್ದ ಬೆನಲ್ಲೇ, ಇಂದು ಬೆಳ್ಳಂಬೆಳಿಗ್ಗೆ ಮೈಸೂರು ಕಸದ ರಾಶಿಯಲ್ಲಿ ಒಂದೇ ಕಡೆ 13 ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿ ಜನರನ್ನು ಅಚ್ಚರಿಗೊಳಿಸಿದೆ. ಇಲ್ಲಿನ ವಿಜಯನಗರ 2 ನೇ ಹಂತದ ಕಸದ ರಾಶಿಯಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ಒಟ್ಟು 13 ತಲೆಬುರಡೆಗಳನ್ನು ಚೀಲದಲ್ಲಿ ಅಪರಿಚಿತರು ತಂದೆಸೆದಿದ್ದಾರೆ.
ಬೆಳಿಗ್ಗೆ ಕಸದ ರಾಶಿ ಹೊತ್ತೊಯ್ಯಲು ಬಂದ ಪೌರ ಕಾರ್ಮಿಕರ ಕಣ್ಣಿಗೆ ಈ ತಲೆ ಬುರುಡೆಗಳು ಬಿದ್ದಿವೆ. ಚೀಲದಲ್ಲಿ ಕಟ್ಟಿಟ್ಟಿದ್ದ ತಲೆ ಬುರುಡೆಗಳ ಪೈಕಿ ಸಣ್ಣ ಮಕ್ಕಳ ತಲೆ ಬುರುಡೆಗಳೂ ಇವೆ. ಅಕ್ಕಪಕ್ಕ ಸ್ಮಶಾನ ಇಲ್ಲದಿದ್ದರೂ ತಲೆ ಬರುಡೆ ಎಲ್ಲಿಂದ ಬಂತು ಎಂಬುದು ಸ್ಥಳೀಯರ ಪ್ರಶ್ನೆ. ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದಾರೆ. ತಲೆ ಬುರುಡೆಗಳನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಸಣ್ಣ ಮಕ್ಕಳ ತಲೆಬುರುಡೆ ಸೇರಿದಂತೆ ಒಟ್ಟು 13 ತಲೆ ಬುರುಡೆ ಇದರಲ್ಲಿದೆ ಎನ್ನಲಾಗಿದ್ದು, ಯಾವ ಕಾರಣಕ್ಕೆ ಎಸೆಯಲಾಗಿದೆ ಎಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಾಮಾಚಾರಕ್ಕೆ ಈ ತಲೆಬುರಡೆಗಳನ್ನು ಬಳಸಿಕೊಂಡಿರಬಹುದೆಂಬ ಮಾತುಗಳು ಕೇಳಿ ಬರುತ್ತಿದ್ದು, ತನಿಖೆ ನಂತರವಷ್ಟೇ ಸತ್ಯಾಂಶ ಬೆಳಕಿಗೆ ಬರಲಿದೆ. ತಲೆಬುರುಡೆ ಪತ್ತೆಯಾದ ವಿಷಯ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿದ್ದರು. ಒಟ್ಟಾರೆ ನಗರದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.