ಅಮೆರಿಕದಲ್ಲಿ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾದ ಮೈಸೂರಿನ ಯುವಕ
ಮೈಸೂರು, ನವೆಂಬರ್ 29: ಅಮೆರಿಕಾದಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿದ್ದ ಮೈಸೂರು ಯುವಕನೊಬ್ಬ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಮೈಸೂರಿನ ಕುವೆಂಪುನಗರದ ಪಿ ಅಂಡ್ ಎಫ್ ಬ್ಲಾಕ್ ನಲ್ಲಿ ವಾಸವಿರುವ ಸುರೇಶ್ ಚಂದ್ ಅವರ ಪುತ್ರ ಅಭಿಷೇಕ್ (25) ಮೃತಪಟ್ಟ ಯುವಕ. ಅಭಿಷೇಕ್ ಮೈಸೂರಿನ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಿದ್ದರು. ಬಳಿಕ ಎಂಎಸ್ ಮಾಡಲು ಒಂದೂವರೆ ವರ್ಷದ ಹಿಂದೆಯೇ ಅಮೇರಿಕಾಗೆ ತೆರಳಿದ್ದರು. ಅಲ್ಲಿನ ಸ್ಯಾನ್ ಬರ್ನಾಡಿಯೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು.
ಯಮಸ್ವರೂಪಿಯಾಗಿ ಬಂದ ಟಿಪ್ಪರ್: ಮಂಗಳೂರಲ್ಲಿ ಅಪಘಾತಕ್ಕೆ ಮಹಿಳೆ ಬಲಿ
ವ್ಯಾಸಂಗದ ಅವಧಿಯ ಬಿಡುವಿನ ವೇಳೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ನಿನ್ನೆ ಕ್ಯಾಲಿಫೋರ್ನಿಯಾದಲ್ಲಿ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾರೆ. ಅಮೇರಿಕಾದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಮೈಸೂರಿನಲ್ಲಿರುವ ಅಭಿಷೇಕ್ ಪೋಷಕರು ಆತಂಕಕ್ಕೀಡಾಗಿದ್ದಾರೆ. ಮೃತ ಅಭಿಷೇಕ್ ಅಂತ್ಯಕ್ರಿಯೆಯನ್ನು ಅಮೇರಿಕಾದಲ್ಲೇ ಮಾಡಲು ಅಭಿಷೇಕ್ ಪೋಷಕರು ಮುಂದಾಗಿರುವುದಾಗಿ ತಿಳಿದುಬಂದಿದೆ.