ಹೆಲ್ಮೆಟ್ ಇಲ್ಲಾಂದ್ರೆ ದಂಡದ ಜತೆ ಹೊಸ ಹೆಲ್ಮೆಟ್ಟೂ ಖರೀದಿಸಬೇಕು!!
ಹೆಲ್ಮೆಟ್ ಇಲ್ಲದಿದ್ರೂ ಪರವಾಗಿಲ್ಲ ದಂಡ ಕಟ್ಟಿದರಾಯ್ತು ಎಂದು ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಮೈಸೂರು ಪೊಲೀಸ್; ವಿಮೆ ಅಥವಾ ವಿಮೆ ಕಂತು ಕಟ್ಟಿಲ್ಲದವರಿಗೂ ಇದೇ ಬಿಸಿ.
ಮೈಸೂರು, ಫೆಬ್ರವರಿ 27- ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ವಿನೂತನ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಇನ್ನು ಮುಂದೆ ಹೆಲ್ಮೆಟ್ ರಹಿತ ಚಾಲನೆ ವೇಳೆ ಸಿಲುಕಿ ಕೊಂಡವರು ದಂಡದ ಜೊತೆಗೆ ಹೆಲ್ಮೆಟ್ ಖರೀದಿಸಿ ತಂದು ಧರಿಸಿದ ನಂತರವೇ ಅವರ ವಾಹನವನ್ನು ಮರಳಿ ಪಡೆಯಬಹುದು.
ಹಾಗೆಯೇ ವಿಮೆ ಮಾಡಿಸಿಲ್ಲದವರು ಕೂಡಲೆ ವಿಮೆ ಮಾಡಿಸಿ, ಅದರ ಪತ್ರವನ್ನು ಹಾಜರುಪಡಿಸಿದರೆ ಮಾತ್ರ ವಾಹನ ವಾಪಸ್ ಪಡೆಯಬಹುದು..! ಹೆಲ್ಮೆಟ್ ರಹಿತ ವಾಹನ ಚಾಲನೆ ಅಪಾಯ ಕಾರಿ ಎಂದು ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ, 100 ರೂ. ತಾನೆ ದಂಡ ಕಟ್ಟಿದರಾಯಿತು ಎಂಬ ಮನೋಭಾವ ಕೂಡ ಕೆಲವರದ್ದು.
ಹೀಗಾಗಿ ಅಂತಹವರನ್ನು ಹಣಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿರುವ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಅವರು ಭಾನುವಾರದಿಂದ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ಇನ್ನು ಮುಂದೆ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ವೇಳೆ ಸವಾರರು ಪೊಲೀಸರಿಗೆ ಸಿಕ್ಕಿಕೊಂಡಲ್ಲಿ ದಂಡದ ಜೊತೆಗೆ ಹೆಲ್ಮೆಟ್ಅನ್ನು ಖರೀದಿಸಿ ತಂದು ಧರಿಸುವವರೆಗೂ ಸ್ಥಳದಲ್ಲಿಯೇ ವಾಹನವನ್ನು ತಡೆಹಿಡಿಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಹೆಲ್ಮೆಟ್ ಖರೀದಿಗೆ ನನ್ನಲ್ಲಿ ಹಣವಿಲ್ಲ, ನಾನು ಬಡವ, ಹೀಗೆ ಯಾವುದೇ ಸಬೂಬಿಗೂ ಪೊಲೀಸರು ಒಪ್ಪುವುದಿಲ್ಲ. ದ್ವಿಚಕ್ರ ವಾಹನ ಚಾಲನೆ ಮಾಡಬೇಕೆಂದಾದಲ್ಲಿ ನೀವು ಸಾಲ ಸೋಲ ಮಾಡಿಯಾದರೂ ಹೆಲ್ಮೆಟ್ ಖರೀದಿಸಿ ತನ್ನಿ ಎಂದು ಪೊಲೀಸರು ಹೇಳಲಿದ್ದಾರೆ. ನೀವು ಹೆಲ್ಮೆಟ್ ಖರೀದಿಸಿ ತರುವವರೆಗೂ ನಿಮ್ಮ ವಾಹನ ಪೊಲೀಸರ ಸುಪರ್ದಿ ಯಲ್ಲಿರುತ್ತದೆ!
ಇನ್ನು ವಿಮೆ ವಿಚಾರಕ್ಕೂ ಕೂಡ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ತಪಾಸಣೆ ಕಾಲದಲ್ಲಿ ವಾಹನಗಳಿಗೆ ವಿಮೆ ಮಾಡಿಸದೇ ಇರುವುದು ಕಂಡುಬಂದಲ್ಲಿ ದಂಡ ವಿಧಿಸುವುದರ ಜೊತೆಗೆ ವಾಹನಕ್ಕೆ ವಿಮೆ ಮಾಡಿಸಿ ಹಾಜರುಪಡಿಸುವವರೆಗೂ ಸ್ಥಳದಲ್ಲಿಯೇ ವಾಹನವನ್ನು ತಡೆಹಿಡಿಯುವ ವ್ಯವಸ್ಥೆ ಕೂಡ ಭಾನುವಾರದಿಂದ ಜಾರಿಯಾಗಲಿದೆ.
ಸಬೂಬಿಗೆ ಬಗ್ಗದ ಪೊಲೀಸರು: ''ಸಾರ್.... ಹೆಲ್ಮೆಟ್ ಮನೆಯಲ್ಲಿದೆ..... ಖರೀದಿಗೆ ಹಣವಿಲ್ಲ.... ನಾಳೆಯಿಂದ ಹಾಕುತ್ತೇನೆ'' ಹೀಗೆಂದು ಗೋಗರೆದವರು ಹೆಲ್ಮೆಟ್ರಹಿತ ಸವಾರರು! ಭಾನುವಾರ ಬೆಳಿಗ್ಗೆಯಿಂದಲೇ ತಪಾಸಣೆ ಆರಂಭಿಸಿದ ಪೊಲೀಸರಿಗೆ ಸಿಕ್ಕಿಬಿದ್ದ ಸವಾರರು ಹೆಲ್ಮೆಟ್ ಧರಿಸಿಲ್ಲದ್ದಕ್ಕೆ ಈ ಮೇಲಿನ ರೀತಿ ನಾನಾ ಕಾರಣ ಹೇಳಲು ಮುಂದಾದರು.
ಆದರೆ ಪೊಲೀಸರು ಮಾತ್ರ ಅವರ ಮಾತಿಗೆ ಕಿವಿಗೊಡಲಿಲ್ಲ. ಹೆಲ್ಮೆಟ್ ತನ್ನಿ ವಾಹನ ಪಡೆದುಕೊಳ್ಳಿ ಎಂದು ಖಡಕ್ಕಾಗಿ ಹೇಳಿದ್ದಾರೆ. ಕೆಲವರು ಸಾರ್ ಹಣವಿಲ್ಲ ಎಂದು ಹಲುಬಿದರೆ, ಮತ್ತೆ ಕೆಲವರು ಈ ದಿನ ಬಿಟ್ಟುಬಿಡಿ ಎಂದು ಕೇಳುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಪೊಲೀಸರು ಜಗ್ಗಲಿಲ್ಲ.
ಕೆಲವರು ಆಟೋ, ಬಸ್ಸಿನ ಮೂಲಕ ಮನೆಗೆ ತೆರಳಿ ಹೆಲ್ಮೆಟ್ ತಂದರೆ, ಮತ್ತೆ ಕೆಲವರು ಸ್ನೇಹಿತರ ಹೆಲ್ಮೆಟ್ಗೆ ಮೊರೆಹೋಗಿದ್ದಾರೆ. ಅದರಲ್ಲಿ ಹೊಸ ಹೆಲ್ಮೆಟ್ ಖರೀದಿಸಿ ತಂದವರೂ ಇದ್ದರು. ಒಟ್ಟಾರೆ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ 100ಕ್ಕೂ ಹೆಚ್ಚು ಮಂದಿಗೆ ಹೆಲ್ಮೆಟ್ ತೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದೂ ದಂಡದ ಸಮೇತ....! ಒಟ್ಟಾರೆ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಕಾಯಕ ಮಾತ್ರ ಶ್ಲಾಘನೀಯವೇ ಸರಿ.