ನಿರಂತರ ರಂಗ ಚಟುವಟಿಕೆಯಲ್ಲಿ ಮೈಸೂರು ರಂಗಾಯಣ
ಮೈಸೂರು, ಮಾರ್ಚ್ 10: ಆಧುನಿಕ ರಂಗಭೂಮಿಯನ್ನು ಕಟ್ಟಲು ಮೈಸೂರಿನ ರಂಗಾಯಣವು ಸಕ್ರಿಯವಾಗಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಾ ಬಂದಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಾಂಡ ಕಾರ್ಯಪ್ಪ ಹೇಳಿದರು.
ರಂಗಾಯಣದ ವತಿಯಿಂದ ಶ್ರೀರಂಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಂಗಾಯಣವು ಪ್ರಧಾನ ರಂಗ ಘಟಕ, ಕಿರಿಯ ರಂಗ ಘಟಕ ಹಾಗೂ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕುವೆಂಪು ಅವರ ಶೂದ್ರ ತಪಸ್ವಿ ನಾಟಕವನ್ನು ಸುಳ್ಯದ ರಂಗಮನೆ ಹಾಗೂ ಮಣಿಪುರದಲ್ಲಿ ಪ್ರದರ್ಶನವನ್ನು ನೀಡಿದೆ ಎಂದರು.
ಆತಂಕ ತಂದಿದ್ದ ಕೊಕ್ಕರೆಗಳ ಸಾವು; ಮೈಸೂರಿನಲ್ಲಿ ಹಕ್ಕಿ ಜ್ವರ ಇಲ್ಲ
ಪ್ರೇಕ್ಷಕರ ಒತ್ತಾಯದ ಮೇರೆಗೆ ಗಾಂಧಿ ವರ್ಸಸ್ ಗಾಂಧಿ ನಾಟಕವು ಮಾರ್ಚ್ 15 ರಂದು ವಾರಾಂತ್ಯದ ರಂಗಪ್ರದರ್ಶನವಾಗಿ ಪ್ರಸ್ತುತ ಪಡಿಸಲಿದ್ದು, ರಂಗಾಯಣದ ಮೈಲಿಗಲ್ಲು ಎನಿಸಿದ ನಾಟಕಗಳನ್ನು ಪ್ರದರ್ಶನವಾಗದ ಭಾಗಗಳಲ್ಲಿ ಪ್ರದರ್ಶಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕಿರಿಯ ರಂಗ ಘಟಕದ ಮೂಲಕ ಆರ್ಕೇಡಿಯಾದಲ್ಲಿ ಪಕ್, ಬೆಂದಕಾಳು ಆನ್ ಟೋಸ್ಟ್ ಮತ್ತು ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕಗಳು ರಾಜ್ಯದಲ್ಲಿ ಮಾತ್ರವಲ್ಲದೇ ಇತರೆ ಬೇರೆ ಕಡೆಗಳಲ್ಲೂ 100 ಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು, ಕೇರಳದ ಕೊಚ್ಚಿನ್ನಲ್ಲಿ ಮಾರ್ಚ್ 25 ರಿಂದ 27 ರವರೆಗೆ ಹಾಗೂ ಹೈದರಾಬಾದ್ನಲ್ಲಿ ಏಪ್ರಿಲ್ 3 ರಿಂದ 5 ರವರೆಗೂ ವಿಶೇಷವಾಗಿ ಪ್ರೇಕ್ಷಕರ ಮನರಂಜಿಸಲಿದೆ ಎಂದು ಹೇಳಿದರು.
ಭಾರತೀಯ ರಂಗ ಶಿಕ್ಷಣ ಕೇಂದ್ರವು ಸೈದ್ಧಾಂತಿಕವಾಗಿ ಶಿಸ್ತಿನಿಂದ ರಂಗಭೂಮಿ ತರಬೇತಿ ನೀಡುವ ಹಂಪಿ ವಿಶ್ವವಿದ್ಯಾಲಯದಿಂದ ಡಿಪೆÇ್ಲಮಾ ಕೋರ್ಸ್ನ ಶಿಕ್ಷಣ ಅವಧಿಯಲ್ಲಿ ಮೂರು ನಾಟಕಗಳು ಕಲಿಕೆಯ ಭಾಗವಾಗಿ ಸಿದ್ಧವಾಗಿತ್ತಿವೆ. ಅಲ್ಲದೇ ಈಗಾಗಲೇ ಪ್ರತಿಮಾ ನಾಟಕಂ, ಟ್ವೆಲ್ತ್ ನೈಟ್ ನಾಟಕಗಳು ಪ್ರದರ್ಶನವಾಗಿದ್ದು ಮೊದಲ ಬಾರಿಗೆ ವಾರಾಂತ್ಯದ ನಾಟಕಗಳಾಗಿ ಮೂಡಿಬರಲಿದೆ. ಏಪ್ರಿಲ್ 8 ಮತ್ತು 9 ರಂದು 'ಆ ಊರು ಈ ಊರು' ನಾಟಕ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು.
ಚಿಣ್ಣರ ಮೇಳ ರಂಗ ತರಬೇತಿ ಶಿಬಿರ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದೆ. ಇದಾದ ಬಳಿಕ ವಿಶ್ವ ರಂಗಭೂಮಿ ದಿನದ ಅಂಗವಾಗಿ ಮೈಸೂರು ರಂಗಾಯಣದ ರಂಗಸಪ್ತಾಹವು ಏಳು ದಿನಗಳ ಕಾಲ ನಡೆಯಲಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದಲ್ಲಿ ಜನ ಮನ್ನಣೆ ಗಳಿಸಿದ 'ಪಾಪು ಗಾಂಧಿ-ಗಾಂಧಿ ಬಾಪು' ಈವರೆಗೆ 150 ಪ್ರದರ್ಶನ ಕಂಡಿದ್ದು, ಅಕ್ಟೋಬರ್ 2 ರವರೆಗೆ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು. ಹವ್ಯಾಸಿ ರಂಗಕರ್ಮಿಗಳನ್ನು ಉತ್ತೇಜಿಸಲು ಮೈಸೂರಿನ ಜಿಪಿಐಇಆರ್ ತಂಡದಿಂದ ಶ್ರೀ ಮಂಟೇಸ್ವಾಮಿ ಕಥಾಪ್ರಸಂಗ ಮತ್ತು ಪರಿವರ್ತನ ತಂಡದಿಂದ ಬೆಟ್ಟದ ಜೀವ ನಾಟಕಗಳು ಪ್ರೇಕ್ಷಕರನ್ನು ರಂಜಿಸಿರುವುದಾಗಿ ಹೇಳಿದರು. ಸಭೆಯಲ್ಲಿ ರಂಗಾಯಣದ ಉಪನಿರ್ದೇಕರಾದ ಮಲ್ಲಿಕಾರ್ಜುನ ಸ್ವಾಮಿ, ಭಾರತೀಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಪ್ರಕಾಶ್ ಗರುಡ ಉಪಸ್ಥಿತಿಯಲ್ಲಿದ್ದರು.