ಮೈಸೂರಿನಲ್ಲಿ ಕೊರೊನಾ ಪೇಂಟಿಂಗ್; ಹೀಗಿತ್ತು ಪೊಲೀಸರ ಜಾಗೃತಿ
ಮೈಸೂರು, ಮಾರ್ಚ್ 28: ವಿಶ್ವವನ್ನೇ ಆವರಿಸಿರುವ ಕೊರೊನಾ ಭೀತಿ ಕುರಿತು ಮೈಸೂರು ಪೊಲೀಸರು ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ವೈರಸ್ ಸೋಂಕನ್ನು ಮನೆಗೆ ಕೊಂಡೊಯ್ಯಬೇಡಿ ಎಂದು ನಗರದ ವಿವಿಧ ವೃತ್ತಗಳಲ್ಲಿ ಪೇಂಟಿಂಗ್ ರಚಿಸುವ ಮೂಲಕ ಎನ್ ಆರ್ ಠಾಣಾ ಪೊಲೀಸರು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುತಿದ್ದಾರೆ.
ರಾಜ್ಯದಲ್ಲಿ ಒಟ್ಟು 70ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಮೈಸೂರಿನಲ್ಲಿ ಮೂರು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಜನತೆ ಮಾತ್ರ ನಗರದಲ್ಲಿ ಓಡಾಟ ನಡೆಸುವುದನ್ನು ಬಿಟ್ಟಿಲ್ಲ.
ಕೊರೊನಾ ಜನಜಾಗೃತಿಗಾಗಿ ಮೈಕ್ ಹಿಡಿದು ಬೀದಿಗಿಳಿದ ಮಠಾದೀಶ!
ಜನತೆಗೆ ಎಷ್ಟೇ ಎಚ್ಚರಿಕೆ ನೀಡಿದರೂ ಮಾರುಕಟ್ಟೆಗೆ ಬರುವುದು, ವಿನಾಕಾರಣ ರಸ್ತೆಗಿಳಿದು ವಾಹನ ಚಲಾಯಿಸುವುದನ್ನು ಬಿಟ್ಟಿಲ್ಲ. ಅದಕ್ಕಾಗಿ ಮೈಸೂರು ನಗರದ ಎನ್ ಆರ್ ಠಾಣೆಯ ಪೊಲೀಸರು ಕೊರೊನಾ ವೈರಸ್ ಪೇಂಟಿಂಗ್ ರಚಿಸಿ ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ರಾಜೇಂದ್ರ ನಗರ ಸರ್ಕಲ್, ಡಿವಿಎನ್ ಸರ್ಕಲ್, ಸರ್ಕಾರಿ ಆಸ್ಪತ್ರೆ, ನಾಯ್ಡು ನಗರ, ರಾಜೇಂದ್ರ ನಗರ ಬಸ್ ನಿಲ್ದಾಣದಲ್ಲಿ ಪೇಂಟಿಂಗ್ ರಚಿಸುವ ಮೂಲಕ ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಆದೇಶಕ್ಕೆ ಬೆಲೆ ಕೊಡಿ, ನಿಮ್ಮ ಮತ್ತು ನಿಮ್ಮ ಕುಟುಂಬದವರ ಪ್ರಾಣವನ್ನು ರಕ್ಷಿಸಿ, ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಪಣ ತೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.