'ಇರುವ 2 ಜೊತೆ ಒಳ ಉಡುಪು ಹರಿದಿದೆ, ಬಟ್ಟೆ ಅಂಗಡಿ ತೆರೆಸಿ' - ಸಿಎಂಗೆ ಮೈಸೂರಿನ ವ್ಯಕ್ತಿ ಮನವಿ
ಮೈಸೂರು, ಜೂ. 1: ಕೊರೊನಾ ಲಾಕ್ಡೌನ್ ಸಂದರ್ಭ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ಔಷಧಗಳ ಅಂಗಡಿಗಳು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ. ಈ ನಡುವೆ ತನ್ನಲ್ಲಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ಬಟ್ಟೆ ಅಂಗಡಿ ತೆರೆಸಿ ಎಂದು ಮೈಸೂರಿನ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಮೈಸೂರಿನ ಚಾಮರಾಜಪುರದ ಕೊ.ಸು. ನರಸಿಂಹಮೂರ್ತಿ ಎಂಬವರು, ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ ಎಂದು ಕೋರಿದ್ದಾರೆ.
ಥಾಮಸ್ ಹಿಕ್ಕಿಯ 19 ನೇ ಶತಮಾನದ ಈ ಚಿತ್ರಕಲೆಯಲ್ಲಿರುವ ಮೈಸೂರಿನ ಮೂವರು ಮಹಿಳೆಯರು ಯಾರು?
''ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸಬಹುದು. ಆದರೆ ಪರಿಸ್ಥಿತಿಯನ್ನು ಒಮ್ಮೆ ನೀವು ಅವಲೋಕನೆ ಮಾಡಿ. ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಎಂದು ನಿಮಗೆ ತಿಳಿದಿದೆಯೇ?'' ಎಂದು ಕೊ.ಸು. ನರಸಿಂಹಮೂರ್ತಿ, ಮುಖ್ಯಮಂತ್ರಿಗೆ ಪ್ರಶ್ನಿಸಿದ್ದಾರೆ.
''ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿಯುತ್ತಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ಯಾರ ಹತ್ತಿರವೂ ಹೇಳುವುದು ನಮ್ಮ ಈ ಕಷ್ಟವನ್ನು? ನಿಮಗೆ ಜನರ ಅಂತರಾಳದ ಕಷ್ಟ ತಿಳಿದರೆ ಸಾಕು. ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ'' ಎಂದು ಸಿಎಂಗೆ ಮನವಿ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)