ಆಹಾರ ಉಳಿದರೆ ಅನಾಥಾಶ್ರಮಕ್ಕೆ ಹಂಚಿಕೆ: ಮೈಸೂರು ಕಲ್ಯಾಣ ಮಂಟಪ ಸಂಘ ತೀರ್ಮಾನ
ಮೈಸೂರು, ಡಿಸೆಂಬರ್ 13: ಕಲ್ಯಾಣ ಮಂಟಪಗಳಲ್ಲಿ ಆಹಾರ ಉಳಿದರೆ ಅದನ್ನು ಅನಾಥಾಶ್ರಮಕ್ಕೆ ಹಂಚುವುದಾಗಿ ಮೈಸೂರು ಕಲ್ಯಾಣ ಮಂಟಪ ಸಂಘ ತೀರ್ಮಾನಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಕಲ್ಯಾಣ ಮಂಟಪಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಉಳಿಯುವ ತಿಂಡಿ, ಊಟ, ಇನ್ನಿತರ ಆಹಾರ ಪದಾರ್ಥಗಳನ್ನು ಕೆಡದಂತೆ ರಕ್ಷಿಸಿ ನಿರ್ಗತಿಕರು, ಅನಾಥಾಶ್ರಮಗಳಿಗೆ ಹಂಚುವ ಕೆಲಸವನ್ನು ಮಾಡುವುದು ಸಂಘದ ಪ್ರಮುಖ ಉದ್ದೇಶ ಎಂದರು.
ಝೊಮ್ಯಾಟೊ ನೌಕರನ ವರ್ತನೆಗೆ ಜನರು ಏನಂತಾರೆ ಗೊತ್ತಾ?
ನಿತ್ಯ ಕಲ್ಯಾಣಮಂಟಪಗಳಲ್ಲಿ ಆಹಾರ ಉಳಿಕೆ ಆಗಿ ಪೋಲಾಗುತ್ತಿದ್ದು, ಅದನ್ನು ಅಗತ್ಯ ಇರುವವರಿಗೆ ವಿತರಿಸುವ ಬಗ್ಗೆ ಹಾಗೂ ಆಹಾರ ಸಂರಕ್ಷಿಸಿ ವಿತರಿಸಲೆಂದು ಶೀತಲೀಕರಣ ಘಟಕವನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.
ಕೆಲವರು ಸ್ವಲ್ಪ ನೀರು ಕುಡಿಯಲು ನೀರಿನ ಬಾಟಲನ್ನು ಪಡೆದುಕೊಳ್ಳುತ್ತಾರೆ. ಪೂರ್ಣ ಖಾಲಿ ಮಾಡದೇ ನೀರು ವ್ಯರ್ಥವಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂಬ ಪಾಲಿಕೆ ಕ್ರಮಕ್ಕೆ ಕೈಜೋಡಿಸಲು ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಾಟಲು, ಪ್ಲಾಸ್ಟಿಕ್ ಲೋಟ ಮೊದಲಾದವುಗಳ ಬಳಕೆ ನಿಷೇಧಿಸುವ ಬಗ್ಗೆಯೂ ಕ್ರಮ ವಹಿಸಲಾಗುತ್ತಿದೆ.
ಜೀವನಶೈಲಿ ತಂದ ಆಪತ್ತು:ಬೆಂಗಳೂರಿನ ಶೇ.15ರಷ್ಟು ಮಕ್ಕಳಿಗೆ ದೃಷ್ಟಿ ಸಮಸ್ಯೆ
ಕಲ್ಯಾಣಮಂಟಪಗಳ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸಂಘದ ಎಲ್ಲಾ ಕಲ್ಯಾಣಮಂಟಪಗಳ ಮಾಲೀಕರಿಗೆ ಸೂಚಿಸಲಾಗಿದೆ. ಕಲ್ಯಾಣಮಂಟಪಗಳಲ್ಲಿ ಕೆಲಸ ಮಾಡುವ ನೌಕರರಿಗೆ ಮೂಲ ಸೌಕರ್ಯ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಚಿಂತನೆಯಿದೆ ಎಂದು ಸತ್ಯನಾರಾಯಣ ತಿಳಿಸಿದರು.
ಮೈಸೂರು ನಗರದ ವ್ಯಾಪ್ತಿಯಲ್ಲಿರುವ ಕಲ್ಯಾಣಮಂಟಪಗಳನ್ನು ಒಂದೇ ವೇದಿಕೆಯಡಿ ತರುವ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮೈಸೂರು ಕಲ್ಯಾಣಮಂಟಪ ಮಾಲೀಕರ ಸಂಘ ಅಸ್ವಿತ್ವಕ್ಕೆ ಬಂದಿದೆ.
ಇಂದಿರಾ ಕ್ಯಾಂಟೀನ್ ಊಟದಲ್ಲಿ ಇಲಿಗಳ ನಂತರ ಹುಳುಗಳ ಸರದಿ
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಅವರನ್ನು ಸಂಘದ ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮೈಸೂರು ನಗರದಲ್ಲಿ ಸುಮಾರು 100 ಕಲ್ಯಾಣ ಮಂಟಪಗಳಿವೆ. ಈಗಾಗಲೇ 30 ಕಲ್ಯಾಣ ಮಂಟಪಗಳ ಮಾಲೀಕರು ಸಂಘದ ಸದಸ್ಯರಾಗಿದ್ದಾರೆ.
ಇನ್ನುಳಿದವರ ಬಳಿ ತೆರಳಿ ಸದಸ್ಯತ್ವ ಪಡೆಯುವಂತೆ ಆಹ್ವಾನ ನೀಡಲಾಗುವುದು. ಸಂಘದ ಕಾರ್ಯವ್ಯಾಪ್ತಿ ಮೈಸೂರು ನಗರದ ಕಲ್ಯಾಣ ಮಂಟಪಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಕೆ.ಆರ್.ಸತ್ಯನಾರಾಯಣ ಮಾಹಿತಿ ನೀಡಿದರು.