ಮೈಸೂರು: ಜು.29 ರಿಂದ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆ ಬಂದ್
ಮೈಸೂರು, ಜುಲೈ 28: ಮೈಸೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ದೇವರಾಜ ಮಾರುಕಟ್ಟೆಯನ್ನು ಮೂರು ದಿನಗಳ ಕಾಲ ಬಂದ್ ಮಾಡಲು ತೀರ್ಮಾನಿಸಲಾಗಿದೆ.
Recommended Video
ಜು. 31 ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿಗಾಗಿ ಉಂಟಾಗುವ ಜನದಟ್ಟಣೆ ತಪ್ಪಿಸಲು ನಾಳೆ (ಜು.29) ರಿಂದ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆ, ಹೂವಿನ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಆದೇಶಿಸಿದೆ.
ಮೈಸೂರಲ್ಲಿ ಕೊರೊನಾ ಸೋಂಕು ಪರೀಕ್ಷೆ ಹೆಚ್ಚಳ: ಜಿಲ್ಲಾಧಿಕಾರಿ
ಬದಲಿ ವ್ಯವಸ್ಥೆಯಾಗಿ ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರಸ್ಥರ ಹಾಗೂ ನಗರ ಜನತೆಯ ಅನುಕೂಲಕ್ಕಾಗಿ ಸದರಿ ಮೂರು ದಿನಗಳು ರೈಲ್ವೆ ನಿಲ್ದಾಣದ ಬಳಿ ಇರುವ ಜೀವರಾಯನಕಟ್ಟೆ ಮೈದಾನದಲ್ಲಿ (ಜೆ.ಕೆ ಗ್ರೌಂಡ್) ಹೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಹೂ ವ್ಯಾಪಾರಕ್ಕಾಗಿ ದೇವರಾಜ ಮಾರುಕಟ್ಟೆಗೆ ಹೋಗುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುವ ಸಂಭವವಿರುತ್ತದೆ. ಕೋವಿಡ್ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮವಾಗಿ ಜುಲೈ 29 ರಿಂದ 31 ರವರೆಗೆ ಮಳಿಗೆಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.