ಅಪಶಕುನದ ಚರ್ಚೆಗೆ ನಾಂದಿ ಹಾಡಿದ ಮೈಸೂರು ದಸರಾ
ಮೈಸೂರು, ಅಕ್ಟೋಬರ್ 24 : ನಾಲ್ಕುನೂರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅಕ್ಟೋಬರ್ 23ರ ವಿಜಯದಶಮಿಯಂದು ತೆರೆಬಿದ್ದಿದೆ. ಆದರೆ ದಸರಾ ಸಂದರ್ಭ ನಡೆದ ಕೆಲವು ಘಟನೆಗಳು ಶಕುನ-ಅಪಶಕುನಗಳ ಚರ್ಚೆಗೆ ಕಾರಣವಾಗಿದೆ.
ಈ ಬಾರಿಯ ದಸರಾದ ಆರಂಭದಲ್ಲೇ ಒಂದು ರೀತಿಯ ಗೊಂದಲ ನಿರ್ಮಾಣವಾಗಿತ್ತು. ಆಯುಧಪೂಜೆ ದಿನವೇ ಜಂಬೂಸವಾರಿ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿಕೆ ನೀಡಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಜಯದಶಮಿಯ ದಿನ ಜಂಬೂಸವಾರಿ ನಡೆಸಲು ತೀರ್ಮಾನಿಸುವ ಮೂಲಕ ಈ ವಿಚಾರದಲ್ಲಿ ರಾಜಮನೆತನ ಮತ್ತು ಸರ್ಕಾರದ ನಡುವಿನ ಗೊಂದಲಕ್ಕೆ ತೆರೆ ಎಳೆಯಲಾಯಿತು.
ಎಗ್ಗುಸಿಗ್ಗಿಲ್ಲದ ಗಾಳಿಮಾತು : ಇದೀಗ ಶುಕ್ರವಾರ ನಡೆದ ಜಂಬೂಸವಾರಿ ಸಂದರ್ಭ ಕೆಲವು ಘಟನೆಗಳು ನಡೆದಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಎಂಬಂತಹ ಗಾಳಿಮಾತು ಹಾರಾಡುತ್ತಿವೆ. ಇಷ್ಟಕ್ಕೂ ಜಂಬೂಸವಾರಿಯಂದು ಆಗಿದ್ದೇನು ಎನ್ನುವುದನ್ನು ನೋಡುವುದಾದರೆ 12.16ರ ಶುಭಧನುರ್ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಮಾಡಿದ್ದರೆ ಪುಷ್ಪಾರ್ಚನೆ 3.08ರ ಯಮಗಂಡ ಕಾಲದಲ್ಲಿ ಮಾಡಲಾಗಿದೆ. [ನಂದಿಧ್ವಜ ಪೂಜೆಯಲ್ಲಿ ಮತ್ತೆ ಗೊಂದಲ]
ಯಮಗಂಡ ಕಾಲದಲ್ಲಿ ಪುಷ್ಪಾರ್ಚನೆ ಮಾಡಿರುವುದು ಶುಭಸೂಚಕವಲ್ಲ. ಅದಕ್ಕಿಂತ ಹೆಚ್ಚಾಗಿ ಸಿಎಂ ಎರಚಿದ ಪುಷ್ಪ ಚಾಮುಂಡೇಶ್ವರಿ ಮೇಲೆ ಬೀಳದೆ ಅದು ಆನೆ ಮೇಲೆ ಬಿದ್ದಿದೆ. ಮತ್ತೆ ಆನೆಯನ್ನು ಹತ್ತಿರ ಕರೆಯಿಸಿ ಪುಷ್ಪ ಎರಚುವುದು ಕೂಡ ಸಂಪ್ರದಾಯವಲ್ಲ ಎಂದು ಕೆಲವರು ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮುಟ್ಟಿ ನಮಸ್ಕರಿಸಿರುವುದು ಕೂಡ ಸರಿಯಿಲ್ಲ ಎಂಬ ಅಪಸ್ವರವನ್ನು ಕೆಲವರು ಎಳೆಯುತ್ತಿದ್ದು, ಇಂತಹ ಕೆಲವು ಪ್ರಮಾದದಿಂದಲೇ ಕುದುರೆ ಸಾವನ್ನಪ್ಪಿದೆ ಎಂದು ಕಥೆ ಕಟ್ಟುತ್ತಿದ್ದಾರೆ. ಎಂಥಾ ಕಾಲದಲ್ಲಿದ್ದೇವಪ್ಪಾ ನಾವು? [ಸುಂದರ ಜಂಬೂ ಸವಾರಿಯೊಂದಿಗೆ ಸರಳ ದಸರಾಗೆ ತೆರೆ]
ಇನ್ನು ಜಂಬೂಸವಾರಿಯಲ್ಲಿ 5 ಸಾಲಾನೆಗಳು ಸಾಗುತ್ತವೆ. ಅವುಗಳಲ್ಲಿ 2 ಹೆಣ್ಣಾನೆ ಇರುತ್ತವೆ. ಆದರೆ ಈ ಬಾರಿ ಸಂಪ್ರದಾಯ ಮುರಿಯಲಾಗಿದ್ದು ನಾಲ್ಕು ಗಂಡಾನೆಗಳನ್ನು ಬಳಸಲಾಗಿದೆ ಎಂಬ ಆರೋಪವೂ ಇದೆ.
ಇಷ್ಟಕ್ಕೂ ಪುಷ್ಪಾರ್ಚನೆಗೆ ತಡವಾಗಲು ಕಾರಣವೇನು ಎಂದು ನೋಡುವುದಾದರೆ ಚಾಮುಂಡಿಬೆಟ್ಟದಲ್ಲಿ ಶುಕ್ರವಾರವೇ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ನೆರವೇರಿಸಿ, ದೇವಸ್ಥಾನ ಶುದ್ದೀಕರಿಸಿ ಬಳಿಕ ಅಲ್ಲಿಂದ ಉತ್ಸವ ಮೂರ್ತಿಯನ್ನು ಕರೆತರಲಾಗಿತ್ತು. ಹೀಗಾಗಿ ನಿಗದಿತ ಸಮಯದಲ್ಲಿ ಪುಷ್ಪಾರ್ಚನೆ ಮಾಡಲು ಸಾಧ್ಯವಾಗಿರಲಿಲ್ಲ.
ಸಾಮಾನ್ಯವಾಗಿ ಜಂಬೂಸವಾರಿಯಂದು ವರುಣನ ಸಿಂಚನವಾಗಬೇಕಿತ್ತು. ಆದರೆ ಈ ಬಾರಿ ಅದು ಆಗಲಿಲ್ಲ. ಏನ್ಮಾಡೋಕಾಗತ್ತೆ? ಇದೆಲ್ಲದಕ್ಕೂ ಒಂದಕ್ಕೊಂದು ಸಂಬಂಧಗಳನ್ನು ಜೋಡಿಸುತ್ತಾ ದಸರಾದಲ್ಲಿ ಹಲವು ರೀತಿಯ ವಿಘ್ನಗಳಾಗಿದೆ ಎಂಬ ಮಾತು ಚರ್ಚೆ ಎಗ್ಗಿಲ್ಲದೆ ಸಾಗಿದೆ. ಇಲ್ಲಿ ಕುದುರೆ ಹೃದಯಾಘಾತದಿಂದ ಸಾವನ್ನಪ್ಪಿದೆ. ಕೆಲವು ಘಟನೆಗಳು ಕಾಕತಾಳೀಯವಾಗಿದೆ. ಆದರೆ ಅದಕ್ಕೆ ಸಂಬಂಧಪಟ್ಟಂತೆ ಕಥೆ ಹೆಣೆದು ಜನರಲ್ಲಿ ಭಯಹುಟ್ಟಿಸುತ್ತಿರುವುದು ಮಾತ್ರ ವಿಷಾದದ ಸಂಗತಿಯಾಗಿದೆ. [ಹೃದಯಾಘಾತದಿಂದ 'ಝಾನ್ಸಿರಾಣಿ' ಸಾವು]
ಯಮಗಂಡ ಕಾಲದಲ್ಲಿ ಮಕ್ಕಳು ಹುಟ್ಟಲ್ವಾ? : ದಸರಾ ಸಂದರ್ಭದಲ್ಲಿ ನಡೆದ ಕೆಲವು ಘಟನಾವಳಿಗಳಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ದಿನದ ಘಟನೆಗಳು ಕಾಕತಾಳೀಯ. ಕುದುರೆ ಹೃದಯಾಘಾತದಿಂದ ಸಾವನ್ನಪ್ಪಿದೆ. ಇನ್ನು ಯಮಗಂಡಕಾಲದಲ್ಲಿ ಪುಷ್ಪಾರ್ಚನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯಮಗಂಡಕಾಲದಲ್ಲಿ ಮಕ್ಕಳು ಹುಟ್ಟುತ್ತವೆ. ಅವುಗಳನ್ನು ಪ್ರೀತಿಸಲ್ವೆ ನಾವು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆಲ್ಲ ಹೆಚ್ಚು ಪ್ರಾಮುಖ್ಯತೆ ನೀಡದಂತೆಯೂ ಮನವಿ ಮಾಡಿದ್ದಾರೆ. [ರಾಹುಕಾಲ ಗುಳಿಕಕಾಲ ಯಮಗಂಡಕಾಲ ಯಾಕ್ರೀ ನೋಡಬೇಕು?]