"ಸಾರಾ ಮಹೇಶ್ ಅಕ್ರಮವನ್ನು ಸಾಬೀತುಪಡಿಸಲಿ"; ಮೈಮುಲ್ ಅಧ್ಯಕ್ಷ
ಮೈಸೂರು, ಜೂನ್ 16: ಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಾರಾ ಮಹೇಶ್ ಆರೋಪಿಸಿದ್ದು, ಅಕ್ರಮ ನಡೆದಿದ್ದೇ ಆದರೆ ಸಾರಾ ಮಹೇಶ್ ಅದನ್ನು ಸಾಬೀತುಪಡಿಸಲಿ ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಪ್ರತಿಕ್ರಿಯಿಸಿದ್ದಾರೆ.
Recommended Video
"ಉತ್ಪಾದಕರ ಒಕ್ಕೂಟಕ್ಕೆ ರಾಜಕಾರಣಿಗಳು ಇಷ್ಟು ತಲೆ ಹಾಕುವುದು ಒಳ್ಳೆಯದಲ್ಲ. ಸಾರಾ ಮಹೇಶ್ ಆರೋಪ ಸತ್ಯಕ್ಕೆ ದೂರವಾದ ವಿಚಾರ. ನೇಮಕಾತಿಗೆ ಕೋರ್ಟ್ ತಡೆ ಒಡ್ಡಿದ್ದರೆ ನಾವೆಲ್ಲಿ ನೇಮಕಾತಿ ಮಾಡಿಕೊಳ್ಳಲು ಸಾಧ್ಯ? ನಿಮ್ಮ ಪ್ರಕ್ರಿಯೆ ಮಾಡಿಕೊಳ್ಳಿ, ಅಂತಿಮ ಪಟ್ಟಿಯನ್ನು ಕೋರ್ಟ್ ಗೆ ತಿಳಿಸಿ ಬಿಡುಗಡೆ ಮಾಡಿ ಎಂದು ಕೋರ್ಟ್ ಹೇಳಿದೆ. ಆಡಿಯೋ ಬಿಡ್ತೀನಿ, ಸಿಡಿ ಬಿಡ್ತೀನಿ ಎಂದರು. ಸಿಡಿ ಬಿಡಲಿ ಬಿಡಿ, ಅಧ್ಯಕ್ಷರು, ನಿರ್ದೇಶಕರು ಲೋಪದೋಷ ಮಾಡಿದ್ದರೆ ಸಿಡಿಯಿಂದ ಹೊರ ಬರಲಿ" ಎಂದು ಹೇಳಿದ್ದಾರೆ.
ಮೈಮುಲ್ ನೇಮಕಾತಿ ಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಸಂದರ್ಶನ: ಸಾ.ರಾ ಮಹೇಶ್
"30-40 ಕೋಟಿ ಹಗರಣವಾಗಿದೆ ಎಂದು ಸಾರಾ ಹೇಳಿದ್ದಾರೆ. ಆದರೆ ಕೋಟಿಗೆ ಸೊನ್ನೆಗಳೆಷ್ಟು ಎನ್ನುವುದು ಗೊತ್ತಿಲ್ಲ. ನಮ್ಮ ಸಂಸ್ಥೆಯಲ್ಲಿ ಒಂದು ತಿಂಗಳಲ್ಲಿ ಮೂವತ್ತು ಕೋಟಿ ವ್ಯವಹಾರ ನಡೆಯುತ್ತದೆ, ಅದರ ಸೊನ್ನೆಗಳು ಎಷ್ಟು ಎನ್ನುವುದು ಗೊತ್ತಿದೆ" ಎಂದಿದ್ದಾರೆ.
"ನಾನು ಒಕ್ಕೂಟದ ಅಧ್ಯಕ್ಷನಾಗಲು ಜಿ.ಟಿ.ದೇವೇಗೌಡ, ಹರೀಶ್ ಗೌಡ ಕಾರಣ. 105 ಪೋಸ್ಟ್ ಅನ್ನು ಸಾರಾ ಮಹೇಶ್ ಅವರೇ ಅಪ್ರೂವಲ್ ಮಾಡಿಸಿಕೊಟ್ಟಿದ್ದಾರೆ. ಕೋರ್ಟ್ ಮತ್ತು ಸರ್ಕಾರ, ಬೋರ್ಡ್ ಕ್ಲಿಯರ್ ಕೊಟ್ಟಿದೆ. ಇದೇ ತಿಂಗಳ 22ರಿಂದ ನೇಮಕಾತಿ ಸಂದರ್ಶನ ಆರಂಭವಾಗಲಿದ್ದು, ಮುಂದಿನ ಜುಲೈ ಎಂಟನೇ ತಾರೀಖಿನವರೆಗೆ ನಡೆಯಲಿದೆ" ಎಂದು ಸಾರಾ ಮಹೇಶ್ ಆರೋಪಕ್ಕೆ ಸಿದ್ದೇಗೌಡ ತಿರುಗೇಟು ನೀಡಿದ್ದಾರೆ.