ಸಿವಿ ರಾಮನ್ ನಗರದಿಂದ ಸ್ಪರ್ಧೆ: ಅಡ್ಡಗೋಡೆ ಮೇಲೆ ದೀಪವಿಟ್ಟ ಮಹದೇವಪ್ಪ
ಮೈಸೂರು, ಜನವರಿ 5 : "ನಾನು ಕ್ಷೇತ್ರ ಬದಲಾವಣೆ ಮಾಡುವುದರ ಬಗ್ಗೆ ಯೋಚನೆ ಮಾಡಿಲ್ಲ. ಯಾವುದೇ ಕ್ಷೇತ್ರವನ್ನು ಹುಡುಕಲು ಶುರು ಮಾಡಿಯೂ ಇಲ್ಲ" ಎಂದು ಸಚಿವ ಎಚ್.ಸಿ ಮಹದೇವಪ್ಪ ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯಕ್ಕೆ ನಾನು ಟಿ.ನರಸೀಪುರದ ಶಾಸಕ. ನನ್ನ ಅವಧಿ ಮೇ ತಿಂಗಳವರೆಗೂ ಇದೆ. ಹೀಗಾಗಿ ಆ ನಂತರ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ದನಾಗಿರುತ್ತೇನೆ ಎನ್ನುವ ಮೂಲಕ ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದರು.
ಸಿ.ವಿ.ರಾಮನ್ ನಗರದಿಂದ ಸ್ಪರ್ಧೆ, ಮಹದೇವಪ್ಪ ಹೇಳಿದ್ದೇನು?
ನನ್ನ ಪಕ್ಷದ ನಾಯಕರು ಬೆಂಗಳೂರಿಗೆ ಕರೆಯುತ್ತಿದ್ದಾರೆ. ನಂಜನಗೂಡಿನಲ್ಲೂ ಜನ ನೀವೇ ಚುನಾವಣೆಗೆ ಸ್ಪರ್ಧಿಸಿ ಅಂತಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ನಿರ್ಧಾರ ಮಾಡುತ್ತೇನೆ. ನನ್ನ ಮಗ ಕಾಂಗ್ರೆಸ್ನ ಕಾರ್ಯಕರ್ತನಾಗಿದ್ದು, ಒತ್ತಾಯ ಬಂದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾನೆ. ಜನರಿಗೆ ಒಳ್ಳೆಯದು ಮಾಡುವ ಉದ್ದೇಶವಿದ್ದರೆ ಯಾರೇ ಆದರೂ ರಾಜಕೀಯಕ್ಕೆ ಬರಲಿ ಎಂದು ಸಚಿವರು ಹೇಳಿದರು.
ಕೋರೆಗಾಂವ್ ಹಿಂಸಾಚಾರಕ್ಕೆ ಖಂಡನೆ
ಮಹಾರಾಷ್ಟ್ರದ ಕೋರೆಗಾಂವ್ ನಲ್ಲಿನ ಹಿಂಸಾಚಾರ ಖಂಡಿಸಿದ ಮಹದೇವಪ್ಪ, ಅಲ್ಲಿನ ಬಿಜೆಪಿ ಸರಕಾರವು ವಿಜಯೋತ್ಸವವನ್ನು ಹತ್ತಿಕ್ಕಿ, ಭಯದ ವಾತಾವರಣ ನಿರ್ಮಾಣ ಮಾಡಿದೆ. ಇದು ದೇಶದ ಬಹುತ್ವಕ್ಕೆ ಧಕ್ಕೆ ಉಂಟು ಮಾಡಿದೆ. ಸಂವಿಧಾನದ ಬದಲಾವಣೆಯ ಕುರಿತು ಬಿಜೆಪಿ ನಾಯಕರ ಹೇಳಿಕೆಗಳು ಅವರ ದಿಕ್ಸೂಚಿಯನ್ನು ತೋರಿಸುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಹಿಂದುತ್ವದ ಕಾರ್ಡ್ ಪ್ಲೇ ಮಾಡುತ್ತಿದೆ
ರಾಜ್ಯದಲ್ಲಿ ಬಿಜೆಪಿ ಪಕ್ಷ ಹಿಂದುತ್ವದ ಕಾರ್ಡ್ ಪ್ಲೇ ಮಾಡುತ್ತಿದೆ. ಆದರೆ ಅವರ ಕಾರ್ಡ್ ಕರ್ನಾಟಕದಲ್ಲಿ ಕೆಲಸ ನಿರ್ವಹಿಸುವುದಿಲ್ಲ. ಚುನಾವಣಾ ಸಂದರ್ಭದಲ್ಲಿ ಭಾವನಾತ್ಮಕ ವಿಷಯಗಳನ್ನು ಜನರ ಮುಂದೆ ತರುವ ಪ್ರಯತ್ನ ಮಾಡಬಾರದು. ಮಂಗಳೂರಿನ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ತನಿಖೆ ಎಲ್ಲವನ್ನೂ ತಿಳಿಸಲಿದೆ. ಕೊಲೆಗಳಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ದೀಪಕ್ ರಾವ್ 7 ವರ್ಷಗಳ ಕಾಲ ಮುಸ್ಲಿಂ ಸಮುದಾಯದವರ ಜೊತೆಗೆ ಕೆಲಸ ಮಾಡಿದ್ದಾರೆ. ಅವರೇ ಸೌಹಾರ್ದವಾಗಿ ಬದುಕಿದ್ದರು. ಈಗ ಸೌಹಾರ್ದತೆ ಹಾಳು ಮಾಡುವಂತಹ ಕೆಲಸ ಆಗಬಾರದು ಎಂದು ಸಚಿವರು ಹೇಳಿದರು.