"ನನ್ನ ಗುರಿ ಇದ್ದಿದ್ದು ಸಮ್ಮಿಶ್ರ ಸರ್ಕಾರ ಪತನ"; ಎಚ್ ವಿಶ್ವನಾಥ್
ಮೈಸೂರು, ಜನವರಿ 31: "ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಇನ್ನು ನಾವು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ" ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಇಲ್ಲ ಎಂದು ಬಿಜೆಪಿ ವಲಯಲ್ಲಿ ಮಾತು ಕೇಳಿ ಬಂದಿರುವ ಹಿನ್ನೆಲೆ ವಿಶ್ವನಾಥ್ ನಿನ್ನೆ ಮಾಧ್ಯಮದ ಎದುರು ಅಸಮಾಧಾನ ವ್ಯಕ್ತಪಡಿಸಿದರು.
'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?
"ನನ್ನ ಗುರಿ ಇದ್ದಿದ್ದು ಸಮ್ಮಿಶ್ರ ಸರ್ಕಾರ ಪತನ. ನಾನು ತಪ್ಪು ಮಾಡಿದ್ದೇನೆ ಅನ್ನಿಸಿಲ್ಲ. ಮಂತ್ರಿಗಿರಿ ಸಿಗಲಿ ಬಿಡಲಿ ನಾನು ನಾನೇ. ರಾಜಕೀಯ ಕೊನೆಗಾಲದಲ್ಲಿ ನನಗೆ ಖಂಡಿತ ಸೋಲಾಗಲ್ಲ. ಸಿಎಂ ಬಿಎಸ್ ಯಡಿಯೂರಪ್ಪರನ್ನು ನಂಬಿದ್ದೇನೆ. ಮಂತ್ರಿ ಸ್ಥಾನ ವಿಚಾರವನ್ನು ಬಿಎಸ್ ವೈ ಬಳಿ ಚರ್ಚಿಸಲ್ಲ" ಎಂದು ಹೇಳಿದರು.
ಎಂಟಿಬಿ-ವಿಶ್ವನಾಥ್ ಮುಳುವಾದ ಸುಪ್ರೀಂ ಹಳೇ ತೀರ್ಪು: ಬಿಎಸ್ವೈ ಗೆ ನೆಮ್ಮದಿ
ಶಾಸಕ ಸುಧಾಕರ್ ವಿರುದ್ಧ ಗರಂ ಆದ ವಿಶ್ವನಾಥ್, "ಉಪಚುನಾವಣೆಗೆ ನಿಲ್ಲಬಾರದಿತ್ತು ಎಂದಿದ್ದಾರೆ. ಹಾಗೆ ಹೇಳಲು ಅವರೇನು ಚೀಫ್ ಮಿನಿಸ್ಟ್ರಾ? ನಮ್ಮ ಗುಂಪಿನಲ್ಲಿ ಯಾರೂ ಈ ರೀತಿ ಹೇಳಿಲ್ಲ. ರಮೇಶ್ ಜಾರಕಿಹೊಳಿ ಸರಿಯಾಗಿ ಮಾತನಾಡಿದ್ದಾರೆ" ಎಂದು ಶಾಸಕ ಸುಧಾಕರ್ ವಿರುದ್ಧ ಕಿಡಿಕಾರಿದರು.