ತನ್ವೀರ್ ಸೇಠ್ ಹತ್ಯೆ ಯತ್ನ: RSS ರಾಜು ಕೊಲೆ ಆರೋಪಿಗಳ ವಿಚಾರಣೆ
ಮೈಸೂರು, ನವೆಂಬರ್ 19: ನರಸಿಂಹರಾಜ ಕ್ಷೇತ್ರ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನದ ಬಗ್ಗೆ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಆರ್ಎಸ್ಎಸ್ ಮುಖಂಡ ರಾಜು ಹತ್ಯೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆರ್ಎಸ್ಎಸ್ ಮುಖಂಡ ಕ್ಯಾತಮಾರನಹಳ್ಳಿ ರಾಜು ಅವರ ಕೊಲೆ ಪ್ರಕರಣದ ಆರೋಪಿಗಳಿಗೂ ತನ್ವೀರ್ ಸೇಠ್ ಹತ್ಯೆ ಯತ್ನಕ್ಕೂ ನಂಟು ಇರುವ ಬಗ್ಗೆ ಪೊಲೀಸರು ಶಂಖೆ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿಯಿಂದ ಹಲ್ಲೆ, ತೀವ್ರ ಗಾಯ
ಕುವೆಂಪುನಗರ ಇನ್ಸ್ಪೆಕ್ಟರ್ ರಾಜು ಹಾಗೂ ನರಸಿಂಹರಾಜ ಠಾಣೆ ಇನ್ಸ್ಪೆಕ್ಟರ್ ಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಆರ್ಎಸ್ಎಸ್ ರಾಜು ಹತ್ಯೆ ಪ್ರಕರಣದ ಆರೋಪಿಗಳಾದ ಹಬೀಬ್ ಪಾಷಾ, ಟಿಂಬರ್ ಅತಿಕ್, ಟೈಲ್ಸ್ ಮುಜಮಿಲ್, ನೂರ್ ಖಡನ್, ಮಜೀದ್ ಸೇರಿ ಇನ್ನೂ ಹಲವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ತನ್ವೀರ್ ಸೇಠ್ ಹತ್ಯೆ ಯತ್ನ ಹಿಂದೆ ರಾಜಕೀಯ ಸಂಘಟನೆ?
ತನ್ವೀರ್ ಸೇಠ್ ಹತ್ಯೆ ಯತ್ನ ಹಿಂದೆ ರಾಜಕೀಯ ಸಂಘಟನೆಯ ಕೈವಾಡ ಇದೆ ಎಂಬ ಅನುಮಾನ ಮೊದಲಿನಿಂದಲೂ ಬಲವಾಗಿದ್ದು, ಈ ನಿಟ್ಟಿನಲ್ಲಿಯೇ ತನಿಖೆ ಸಾಗಿದೆ.
ಭಾನುವಾರ ತಡ ರಾತ್ರಿ ಆಯಿತು ಹಲ್ಲೆ
ಶಾಸಕ ತನ್ವೀರ್ ಸೇಠ್ ಮೇಲೆ ಭಾನುವಾರ ರಾತ್ರಿ ಮೈಸೂರಿನ ಬನ್ನಿ ಮಂಟಪದ ಬಳಿ ಕತ್ತಿಯಿಂದ ಹಲ್ಲೆ ಮಾಡಲಾಗಿತ್ತು. ಘಟನೆಯಲ್ಲಿ ತನ್ವೀರ್ ಸೇಠ್ ಕುತ್ತಿಗೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಜಿ ಸಚಿವ ತನ್ವೀರ್ ಸೇಠ್ ಹತ್ಯೆ ಯತ್ನ, 5 ಮಂದಿ ವಶಕ್ಕೆ
ಹಲ್ಲೆ ಮಾಡಿದವನು ಪೊಲೀಸ್ ಸುಪರ್ಧಿಯಲ್ಲಿ
ಹಲ್ಲೆ ಮಾಡಿದವನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಹಲ್ಲೆ ಮಾಡಿದ ವ್ಯಕ್ತಿಯನ್ನು ಪರ್ಹಾನ್ ಪಾಷಾ (24) ಎಂದು ಗುರುತಿಸಲಾಗಿದ್ದು, ಆತ ಎಸ್ಡಿಪಿಐ ಸಂಘಟನೆಗೆ ಸೇರಿದವನೆಂದು ಹೇಳಲಾಗುತ್ತಿದೆ. ಹಲ್ಲೆಗೆ ಕಾರಣವನ್ನು ನೀಡಿದ್ದ ಆತ ಶಾಸಕರ ಮೇಲಿದ್ದ ಅಸಮಾಧಾನದಿಂದ ಆತನ ಮೇಲೆ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾನೆ.
ರಾಜ್ಯ ಸರ್ಕಾರದ ವೈಫಲ್ಯ: ಸಿದ್ದರಾಮಯ್ಯ
ತನ್ವೀರ್ ಸೇಠ್ ಮೇಲೆ ನಡೆದಿರುವ ಹಲ್ಲೆಯನ್ನು ಹಲವು ರಾಜಕೀಯ ನಾಯಕರು ಖಂಡಿಸಿದ್ದು, 'ಹಲ್ಲೆಯು ರಾಜ್ಯ ಸರ್ಕಾರ ವೈಫಲ್ಯವನ್ನು ತೋರುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತನ್ವೀರ್ ಸೇಠ್ ಭೇಟಿಗೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.