ಮೈಸೂರಿನಲ್ಲೂ ಬಿಡಿಎ ಮಾದರಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಮುಡಾ ಯೋಜನೆ
ಮೈಸೂರು, ಡಿಸೆಂಬರ್ 4; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿರುವ ಬಹು ಮಹಡಿ ವಸತಿ ಸಮುಚ್ಚಯದ ರೀತಿಯಲ್ಲೇ ಮೈಸೂರು ನಗರದಲ್ಲೂ ಸಮುಚ್ಚಯ ನಿರ್ಮಾಣಕ್ಕೆ ಮುಡಾ ಮುಂದಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಆಯುಕ್ತರ ನಿಯೋಗವು ಬಿಡಿಎ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ಬಹುಮಹಡಿ ವಸತಿ ಸಮುಚ್ಚಯಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದ್ದು ಕೆಲವು ಮಾಹಿತಿಗಳನ್ನು ಕಲೆ ಹಾಕಲಾಯಿತು. ಮುಂದೆ ಓದಿ...
ಪಿಎಂ ಆವಾಸ್ ಯೋಜನೆ: ಮನೆ ಪಡೆಯಲು ಅರ್ಹತೆ, ಪ್ರಮುಖ ವಿವರಗಳು
ವಿನ್ಯಾಸ, ರಚನೆ, ಜಾಗದ ಅವಶ್ಯಕತೆಗಳ ಮಾಹಿತಿ
ಈ ಸಂಬಂಧ ಕೆಂಗೇರಿ ವಸತಿ ಸಮುಚ್ಚಯದ ವಿನ್ಯಾಸ, ರಚನೆ ಸೇರಿದಂತೆ 2 ಬೆಡ್ ರೂಂ ಹಾಗೂ 3 ಬೆಡ್ ರೂಂಗಳ ಮನೆಗಳ ಜಾಗದ ಅವಶ್ಯಕತೆಗಳ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಆಯುಕ್ತ ಡಾ. ನಟೇಶ್, ತಾಂತ್ರಿಕ ವರ್ಗದವರು ಬೆಂಗಳೂರಿನ ಬಿಡಿಎ ಅಧಿಕಾರಿಗಳು, ಇಂಜಿನಿಯರ್ ಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಅಪಾರ್ಟ್ ಮೆಂಟ್ ನಿರ್ಮಾಣದ ಕುರಿತು ಮಾಹಿತಿ ಸಂಗ್ರಹ
ಈ ಸಮುಚ್ಚಯ ನಿರ್ಮಾಣದ ತಂತ್ರಜ್ಞಾನ, ಇದಕ್ಕೆ ಸಾರ್ವಜನಿಕರ ಸ್ಪಂದನೆ, ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡುವ ಇತರ ಯೋಜನೆಗಳ ಬಗ್ಗೆ ನಿಯೋಗವು ಮಾಹಿತಿ ಪಡೆಯಿತು. ಲಿಫ್ಟ್ ಗಳು, ಸ್ಟೇರ್ ಕೇಸ್ ಗಳು, ಮಳೆ ಇಂಗುಗುಂಡಿ ನಿರ್ಮಾಣ, ರಸ್ತೆಗಳು, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಬಗ್ಗೆಯೂ ನಿಯೋಗ ಮಾಹಿತಿ ಪಡೆದುಕೊಂಡಿತು.
ಮೂಡಾದಿಂದ 18 ತಿಂಗಳಿನಲ್ಲಿ ಬಡಾವಣೆ ಯೋಜನೆ ಪೂರ್ಣಗೊಳಿಸುವ ಭರವಸೆ
"ಮೈಸೂರಿಗೆ ತಕ್ಕಂತೆ ಅಪಾರ್ಟ್ ಮೆಂಟ್ ನಿರ್ಮಾಣ"
ಅಪಾರ್ಟ್ ಮೆಂಟ್ ವಿನ್ಯಾಸ, ಒಳಾಂಗಣ ವ್ಯವಸ್ಥೆ, ಮೂಲಸೌಕರ್ಯಗಳ ಬಗ್ಗೆ ಇದೇ ವೇಳೆ ಮುಡಾ ತಂಡ ವಾಸವಾಗಿರುವ ನಿವಾಸಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಸಾಮಾನ್ಯ ಜನರಿಗೂ ಮನೆಗಳು ಕಡಿಮೆ ದರದಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂಬ ಚಿಂತನೆಯಿಂದ ಬೆಂಗಳೂರಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡಿದ್ದೇವೆ. ಇಲ್ಲಿನ ರೂಪುರೇಷೆಗಳು ಸೇರಿದಂತೆ ಎಲ್ಲ ಮಾಹಿತಿಗಳನ್ನು ಪಡೆದು ಮೈಸೂರಿಗೆ ಬೇಕಾದಂತಹ ರೀತಿಯಲ್ಲಿ ಮಾರ್ಪಡಿಸಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
Recommended Video
"ಗುಣಮಟ್ಟದ ಮನೆಗಳ ನಿರ್ಮಾಣಕ್ಕೆ ಕ್ರಮ"
ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಈ ಮುಂಚೆ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಮೈಸೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಜನರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗುಣಮಟ್ಟದ ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.