"ಸಿಎಂ ಆಗುವ ತನಕ ನಾನು ಬೇಕಿತ್ತು, ಈಗ ನನ್ನ ದರ್ದಿಲ್ಲ: ನೋಡ್ಕೋತ್ತೀನಿ''
ಮೈಸೂರು, ನವೆಂಬರ್ 25: ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹಿರಂಗವಾಗಿ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ ಸಂಸದ ಶ್ರೀನಿವಾಸ್ ಪ್ರಸಾದ್, ಅವರು ಮುಖ್ಯಮಂತ್ರಿ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದರಲ್ಲ, ಇನ್ನೇನು ನನ್ನ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿ ಇದ್ದಾರೆ, ನೋಡ್ಕೋತೀವಿ ಬಿಡಿ ಎಂದು ಕಿಡಿಕಾರಿದರು.
"ಶ್ರೀನಿವಾಸ್ ಪ್ರಸಾದ್ ಅವರಿಗೆ ಕೇಂದ್ರದಲ್ಲಿ ಸ್ಥಾನ ಕೊಡಿ, ಇಲ್ಲವಾದರೆ ನನಗೆ ಸಚಿವ ಸ್ಥಾನ ಕೊಡಿ"
ಸಂಪುಟ ವಿಸ್ತರಣೆ ವಿಚಾರವಾಗಿ ನಿಮ್ಮ ಸಲಹೆ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ, ಖಾರವಾಗಿ ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ್ ಪ್ರಸಾದ್, ಮಂತ್ರಿ ಪಟ್ಟವನ್ನು ನಾನೇ ಬೇಡ ಎಂದಿದ್ದೇನೆ. ಚುನಾವಣೆಯನ್ನೇ ಬೇಡ ಎಂದಿದ್ದವನು ನಾನು. ಇನ್ನು ಮಂತ್ರಿ ಪಟ್ಟ ಯಾಕೇ ಬೇಕು ನನಗೆ ಎಂದರು.
ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದ ಅವರು, ಹಳೇ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವ ವಿಚಾರವಾಗಿ, ಅಳಿಯ, ಶಾಸಕ ಹರ್ಷವರ್ಧನ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದರು.
ಹರ್ಷವರ್ಧನ್ ನೀಡಿರುವ ಹೇಳಿಕೆ ವೈಯಕ್ತಿಕವಾದುದು. ಹಳೇ ಮೈಸೂರು ಭಾಗಕ್ಕೆ ಈಗ ಸಾಕಾಗುವಷ್ಟು ಮಂತ್ರಿ ಸ್ಥಾನ ಇದೆ. ಸಿಎಂ ಕೂಡಾ ಹಳೇ ಮೈಸೂರು ಭಾಗದವರೇ. ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ. ಸೋಮಶೇಖರ್ ಹಳೇ ಮೈಸೂರಿನವರೇ. ಇನ್ನೆಷ್ಟು ಜನರನ್ನು ಗುಡ್ಡೆ ಹಾಕಿಕೊಳ್ತೀರಾ ಹೇಳಿ ಎಂದು ಮರು ಪ್ರಶ್ನಿಸಿದರು.