ಜೆಡಿಎಸ್ ವಿಲೀನ ವಿಚಾರ; "ದೇವೇಗೌಡರು ಈ ತೀರ್ಮಾನ ಮಾಡಿದಂತಿದೆ''
ಮೈಸೂರು, ಡಿಸೆಂಬರ್ 21: ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಕಷ್ಟ ಸಾಧ್ಯ. ವಿಲೀನ ಸ್ವರೂಪದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಮೈಸೂರಿನಲ್ಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಜೆಡಿಎಸ್ಗೆ ಸದ್ಯ ಹತಾಶ ಸ್ಥಿತಿ ಇದ್ದು, ಬಿಜೆಪಿ ಜೊತೆ ಬರುವುದು ಜೆಡಿಎಸ್ಗೆ ಅನಿವಾರ್ಯವಾಗಿದೆ ಎಂದರು.
ಜೆಡಿಎಸ್ ಪಕ್ಷ ತನ್ನ ನೆಲೆಗಳಲ್ಲೇ ಸೋಲು ಕಾಣುತ್ತಿದ್ದು, ತುಮಕೂರಿನಲ್ಲಿ ಸ್ವತಃ ಎಚ್.ಡಿ ದೇವೇಗೌಡರು ಸೋತರು. ರಾಜಕೀಯ ಭವಿಷ್ಯಕ್ಕಾಗಿ ಅವರು ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯವಾಗಿದ್ದು, ಬಿಜೆಪಿ ಜೊತೆ ಜೆಡಿಎಸ್ ವಿಲೀನ ವಿಚಾರವನ್ನು ದೇವೇಗೌಡರು ತೀರ್ಮಾನ ಮಾಡಿದಂತಿದೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
JDS-BJP ವಿಲೀನ: ಬಿಜೆಪಿ ನಾಯಕರಲ್ಲಿ ಸಿಎಂ ಯಡಿಯೂರಪ್ಪ ಮಹತ್ವದ ಮನವಿ!
ಕಾಂಗ್ರೆಸ್ ಮೈತ್ರಿಯಿಂದ ಅವರು ಹೊರ ಬಂದಿದ್ದು, ದೇವೇಗೌಡರಿಗೆ ನಾನು ವೈಯುಕ್ತಿಕವಾಗಿ ಸಲಹೆ ಕೊಡಲ್ಲ. ಯಾಕೆಂದರೆ ದೇವೇಗೌಡರು ಯಾವಾಗ, ಏನು ತೀರ್ಮಾನ ಮಾಡುತ್ತಾರೋ ಯಾರಿಗೂ ಗೊತ್ತಾಗುವುದಿಲ್ಲವೆಂದರು.
ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೇಗೌಡರ ಸ್ವಭಾವ
ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೇಗೌಡರ ಸ್ವಭಾವ. ಹೊಂದಾಣಿಕೆ ವಿಚಾರದಲ್ಲಿ ಹೈಕಮಾಂಡ್ದೆ ಅಂತಿಮ. ಕೇವಲ ಎರಡು ಮೂರು ಜಿಲ್ಲೆಗೆ ಸೀಮಿತವಾಗಿರುವ ಜೆಡಿಎಸ್ಗೆ ಸಿಎಂ ಸ್ಥಾನ ಬಿಟ್ಟುಕೊಡೋಕೆ ಆಗುತ್ತಾ? ಎಂದು ಪ್ರಶ್ನಿಸಿ, ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಳ ಒಪ್ಪಂದದಿಂದ ನನ್ನನ್ನು ಸೋಲಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯನವರೇ ನಿಮಗೆ ಈಗ ಸೋಲಿನ ಕಹಿ ಈಗ ಅರ್ಥ ಆಯ್ತಾ. ನಾನು ನಂಜನಗೂಡು ಉಪ ಚುನಾವಣೆಯಲ್ಲಿ ಸೋತ ಮರುದಿನವೇ ಹೇಳಿದ್ದೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲ್ತಾರೆ ಅಂತ ಎಂದು ಗುಡುಗಿದರು.
ಅಧಿಕಾರದಲ್ಲಿದ್ದಾಗ ದರ್ಪ, ದುರಹಂಕಾರ
ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಕಾಣುವುದಿಲ್ಲ ಅನ್ಕೊಂಡಿದ್ದೀರಾ? ಸಿದ್ದರಾಮಯ್ಯ ಹತಾಶನಾಗಿ ಸತ್ತ ಕೋಳಿಯಂತಾಗಿದ್ದಾನೆ. ಸತ್ತಕೋಳಿ ಬೆಂಕಿಗೆ ಹೆದರುವಂತಾಗಿದೆ ಸಿದ್ದರಾಮಯ್ಯನ ಸದ್ಯದ ಸ್ಥಿತಿ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ, ಮಹದೇವಪ್ಪನ ದರ್ಪ, ದುರಹಂಕಾರ ಈ ಪರಿಸ್ಥಿತಿಗೆ ಕೊಂಡೊಯ್ದಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ವಿರುದ್ಧ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗರಂ
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನನ್ನು ವಿರೋಧಿಸುವವರಿದ್ದಾರೆ. ಈಗಾಗಲೇ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಃಪತನದ ಹಾದಿ ಹಿಡಿಯುವಂತಾಗಿದೆ ಎಂದು ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಫುಲ್ ಗರಂ ಆಗಿದ್ದರು. ಜಿಲ್ಲಾಧಿಕಾರಿ ಶರತ್ ಅವರನ್ನು ಒಂದೇ ತಿಂಗಳಲ್ಲಿ ಎತ್ತಂಗಡಿ ಮಾಡಿದ್ದು ತಪ್ಪು ನಿರ್ಧಾರ. ರೋಹಿಣಿ ಸಿಂಧೂರಿಗೆ ಜಾಗ ತೋರಿಸಬೇಕೆಂದಿದ್ದರೆ ಬೇರೆ ಕಡೆ ಅವಕಾಶ ಕೊಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.
ನನಗೆ ಸುತಾರಾಂ ಇಷ್ಟ ಆಗಲಿಲ್ಲ
ರೋಹಿಣಿ ಸಿಂಧೂರಿ ದುರಹಂಕಾರಿ, ಜನಪ್ರತಿನಿಧಿಗಳಿಗೆ ಗೌರವ ಕೊಡಲ್ಲ ಅನ್ನುವ ಕಾರಣಕ್ಕಲ್ಲವೇ ನಾನ್ ಎಕ್ಸಿಕ್ಯೂಟಿವ್ ಪೋಸ್ಟ್ಗೆ ಹಾಕಿದ್ದು. ಈಗ ಅವಳನ್ನೇ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿದ್ದು, ನನಗೆ ಸುತಾರಾಂ ಇಷ್ಟ ಆಗಲಿಲ್ಲ ಎಂದರು. ಕಲಬುರಗಿಯಲ್ಲಿ ಶರತ್ಗೆ ಒಳ್ಳೆಯ ಹೆಸರಿತ್ತು. ಅವರನ್ನು ಇಲ್ಲಿಗೆ ವರ್ಗಾವಣೆ ಮಾಡಿ 29 ದಿನದಲ್ಲಿ ಬೇರೆ ಕಡೆ ಹಾಕಿದ್ದು ಎಷ್ಟು ಸರಿ. ಇಂತಹ ವಿಚಾರದಲ್ಲಿ ಸಿಎಂ ವಿವೇಚನೆಯಿಂದ ವರ್ತಿಸಬೇಕು ಎಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.