ಯಡಿಯೂರಪ್ಪ ಹುಷಾರಾಗಿರಬೇಕು ಎಂದು ಎಚ್ಚರಿಸಿದ ಸಂಸದ ಶ್ರೀನಿವಾಸ್ ಪ್ರಸಾದ್
ಮೈಸೂರು, ನವೆಂಬರ್ 26: ಮುಖ್ಯಮಂತ್ರಿ ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಪಂಚೆಯನ್ನು ಮುಳ್ಳಿನಿಂದ ಹುಷಾರಾಗಿ ತೆಗೆಯಬೇಕು ಎಂದು ಮೈಸೂರಿನಲ್ಲಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಅಧಿಕಾರ ಕೆಲವೊಮ್ಮೆ ಎಲ್ಲರನ್ನೂ ಬದಲಾವಣೆ ಮಾಡಿಸಿಬಿಡುತ್ತದೆ. ಸಿಎಂ ಹಿಂದಿಗಿಂತ ಬದಲಾಗಿದ್ದಾರೆ ಅಂತನೂ ಹೇಳೋಕಾಗಲ್ಲ. ಬದಲಾಗಿಲ್ಲ ಅಂತಲೂ ಹೇಳೋಕಾಗಲ್ಲ. ಸಿಎಂ ಅಂದುಕೊಂಡಷ್ಟು ಸುಲಭವಲ್ಲ. ಅಧಿಕಾರ ನಡೆಸೋದು ಬಹಳ ಕಠಿಣ ಕೆಲಸ" ಎಂದು ಹೇಳಿದರು. ಮುಂದೆ ಓದಿ...
ಕೊನೆಗೂ ಸಂಸದ ಶ್ರೀನಿವಾಸ ಪ್ರಸಾದ್ ಸಮಾಧಾನ ಮಾಡಿದ ಯಡಿಯೂರಪ್ಪ!
ನಿಗಮ ಮಂಡಳಿ ಆಯ್ಕೆ ಬಗ್ಗೆ ಅಸಮಾಧಾನ
ನಿಗಮ ಮಂಡಳಿ ಆಯ್ಕೆ ವಿಚಾರದಲ್ಲಿ ನನಗೆ ಅತೃಪ್ತಿ ಇದೆ. ಇನ್ನೂ ಉತ್ತಮವಾಗಿ ನೇಮಕಾತಿ ಮಾಡಬಹುದಿತ್ತು. ಎಲ್ಲರ ಸಲಹೆ ಪಡೆದು ಮಾಡಬಹುದಿತ್ತು ಅನ್ನೋದು ನನ್ನ ಅಭಿಪ್ರಾಯ. ಸಿಎಂಗೆ ಇನ್ನು ಬಾಕಿ ಇರುವುದು ಎರಡೂವರೆ ವರ್ಷ ಅಷ್ಟೇ. ಅಷ್ಟರೊಳಗೆ ಏನಾದರೂ ಮಾಡಬೇಕಲ್ಲವೇ? ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಅದಕ್ಕಾಗಿ ಪಕ್ಷದ ಹೈಕಮಾಂಡ್ ಇದೆ. ಹಿರಿಯ ನಾಯಕರಿದ್ದಾರೆ ಎಂದು ಹೇಳಿದರು.
"ಸಿದ್ದರಾಮಯ್ಯ ಸೋತಿದ್ದು ಇದರಿಂದಲೇ ಅಲ್ಲವೇ?"
ಸಿಎಂಗೆ ಕಾರ್ಯದೊತ್ತಡ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಸೋತಿದ್ದು ಇದರಿಂದಲೇ ಅಲ್ಲವೇ? ಸಿಎಂಗೆ ಪರಮಾಧಿಕಾರ ಇರುತ್ತೆ, ಅದರಂತೆ ಬುದ್ಧಿವಂತಿಕೆ ಇರಬೇಕು. ಸಿದ್ದರಾಮಯ್ಯಗೆ ಬುದ್ಧಿವಂತಿಕೆ ಇರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅದೇ ಹೇಳುತ್ತಿದ್ದೇನೆ. ಸ್ವಲ್ಪ ಬುದ್ಧಿವಂತಿಕೆಯಿಂದ ತೀರ್ಮಾನ ತಗೊಳ್ಳಿ ಅಂತ.
"ಕೇಂದ್ರದಲ್ಲಿ ಮಂತ್ರಿಯಾಗುವ ಆಸೆ ಇಲ್ಲ"
"ನನಗೆ ಕೇಂದ್ರದಲ್ಲಿ ಮಂತ್ರಿಯಾಗುವ ಆಸೆ ಇಲ್ಲ. ಈಗಾಗಲೇ ಅದನ್ನು ಪಕ್ಷದ ಹೈಕಮಾಂಡ್ ಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಒಂದು ಡಜನ್ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡಿ ನನಗೆ ಸಾಕಾಗಿದೆ. ಚುನಾವಣೆ ಬೇಡವೆಂದೇ ಕುಳಿತಿದ್ದವನು ನಾನು. ಕೊನೇ ಗಳಿಗೆಯಲ್ಲಿ ಎಲ್ಲರ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧೆ ಮಾಡಿದೆ. ಆದರೆ ಪಾರ್ಲಿಮೆಂಟ್ ನಲ್ಲಿ ನನ್ನ ಬ್ಯಾಚ್ ಮೇಟ್ಸ್ ಒಬ್ರೂ ಇಲ್ಲ. 1980ರ ಬ್ಯಾಚ್ ನಲ್ಲಿನ ಸದ್ಯ ಉಳಿದಿರೋದು ನಾನೊಬ್ಬನೇ. ಇನ್ನಾವ ರಾಜಕೀಯ ಆಸೆಯೂ ನನಗಿಲ್ಲ. ಸಿದ್ದರಾಮಯ್ಯ ನನಗೆ ಮಾಡಿದ ದ್ರೋಹಕ್ಕೆ ತಕ್ಕ ಉತ್ತರ ನೀಡಿರುವೆ. ಅದಕ್ಕೆ ನನಗೆ ಸಮಾಧಾನವಿದೆ ಎಂದು ಹೇಳಿದರು.
"ಹಿಗ್ಗಿ ಹೀರೇಕಾಯಿ ಆಗಬೇಕಿಲ್ಲ"
ಉಪಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಇದಕ್ಕಾಗಿ ಹಿಗ್ಗಿ ಹೀರೇಕಾಯಿ ಆಗಬೇಕಿಲ್ಲ. ವಿಪಕ್ಷಗಳು ಕುಸಿದು ಹೋಗಿವೆ. ತಿಹಾರ್ ಜೈಲಿನಲ್ಲಿದ್ದವನನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇನ್ನೇನಾಗುತ್ತದೆ?. ಹಾಗಾಗಿ ಅದರ ಲಾಭ ಬಿಜೆಪಿಗೆ ಬಂದಿದೆ ಅಷ್ಟೇ ಎಂದರು.
ಇಡೀ ನನ್ನ ರಾಜಕೀಯ ಜೀವನದ ಬಗ್ಗೆ ಸಂತೃಪ್ತ ಭಾವನೆ ಇದೆ. ಹಾದಿ ಬೀದಿಯಲ್ಲಿ ಕೆಲವರು ರಾಜಕೀಯ ಮತ್ಸರಕ್ಕೆ ಆಡುವ ಮಾತುಗಳಲ್ಲಿ ಸತ್ಯವಿಲ್ಲ. ನಾನೆಂದೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದವನಲ್ಲ. ನನ್ನ ಬಗ್ಗೆ ಮಾತನಾಡುವವರು ಎದೆ ಮುಟ್ಟಿಕೊಂಡು ಹೇಳಲಿ ಎಂದು ಹೇಳಿದ್ದಾರೆ.