ಸೋನಿಯಾ, ಪ್ರಿಯಾಂಕಾ, ವಾದ್ರಾಗೆ ರಾಯರೆಡ್ಡಿ ಬೋಧಿಸಲಿ: ಪ್ರತಾಪ್ ಸಿಂಹ
ವಿಐಪಿ ಗಳ ಕಾರುಗಳ ಮೇಲೆ ಕೆಂಪು ದೀಪಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದನ್ನು ಟೀಕಿಸಿದ್ದ ರಾಯರೆಡ್ಡಿ ವಿರುದ್ಧ ಶನಿವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.
ಮೈಸೂರು, ಏಪ್ರಿಲ್ 22 : ಭದ್ರತೆ ವಿಚಾರದಲ್ಲಿ ಮೋದಿಯವರನ್ನು ಟೀಕಿಸಿರುವ ಸಚಿವ ಬಸವರಾಜ ರಾಯರೆಡ್ಡಿ, ಮೊದಲು ತಮ್ಮ ಪಕ್ಷದ ನಾಯಕರಾದ ಸೋನಿಯಾ, ಪ್ರಿಯಾಂಕಾ ಹಾಗೂ ವಾದ್ರಾ ಅವರಿಗೆ ಭದ್ರತೆ ಬಗ್ಗೆ ಬೋಧನೆ ಮಾಡಲಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಇತ್ತೀಚೆಗೆ, ವಿಐಪಿ ಗಳ ಕಾರುಗಳ ಮೇಲೆ ಕೆಂಪು ದೀಪಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದನ್ನು ಟೀಕಿಸಿದ್ದ ರಾಯರೆಡ್ಡಿ ವಿರುದ್ಧ ಶನಿವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಾಪ್ ಸಿಂಹ, ರೆಡ್ಡಿಯವರ ಹೇಳಿಕೆಯನ್ನು ಖಂಡಿಸಿದರು.
ಕೇಂದ್ರದ ಆದೇಶವನ್ನು ಶುಕ್ರವಾರ (ಏ. 21) ಟೀಕಿಸಿದ್ದ ರಾಯರೆಡ್ಡಿ, ಪ್ರಧಾನಿಯವರು ತಮಗೆ ಮಾತ್ರ ಭದ್ರತೆ ಉಳಿಸಿಕೊಂಡು ಉಳಿದ ಗಣ್ಯರ ಭದ್ರತೆಗೆ ಚ್ಯುತಿ ತಂದಿದ್ದಾರೆ ಎಂದು ಟೀಕಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಪ್ರತಾಪ್ ಸಿಂಹ, ''ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಬಸವರಾಯ ರೆಡ್ಡಿಗೆ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ. ಮೋದಿಯವರಿಗೆ ದೇಶದ ಪ್ರಧಾನಿ ಎಂಬ ಕಾರಣಕ್ಕೆ ಶಿಷ್ಟಾಚಾರದಂತೆ ಭದ್ರತೆ ನೀಡಲಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕಿದೆ'' ಎಂದು ಕುಟುಕಿದರು.
''ಅಲ್ಲದೆ, ಒಂದು ಕಲ್ಲಿನ ಏಟಿಗೆ ಕಾಂಗ್ರೆಸ್ಸಿಗರು ಹೆದರುತ್ತಾರೆ. ಆದರೆ ಪ್ರಧಾನಿ ಬಂದೂಕಿನ ಗುಂಡೇಟಿಗೆ ಬಗ್ಗುವುದಿಲ್ಲ'' ಎಂದು ಅವರು ಹೇಳಿದರು.
ಇದೇ ವೇಳೆ, ಮಾತನಾಡಿದ ಪ್ರತಿಭಟನಾಕಾರರು, 'ಜೀವ ಬೆದರಿಕೆ ಇದ್ದರೆ ಸಾಯಲಿ ಬಿಡಿ, ಅಧಿಕಾರ ಬೇಕಾದ್ರೆ ಸಾಯಬೇಕಪ್ಪ. ಯಾರೇನು ಮಾಡಬೇಕು ಅದಕ್ಕೆ? ಅಧಿಕಾರ ಬೇಡ ಅಂದರೆ ಮನೆಯಲ್ಲಿ ಕೂರಲಿ' ಎಂದು ರಾಯರೆಡ್ಡಿ ಉಢಾಪೆಯ ಉತ್ತರ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವರು ತಾವೂ ಸಹ ಸರ್ಕಾರದ ಒಂದು ಉನ್ನತ ಖಾತೆಯಲ್ಲಿದ್ದು, ಪ್ರಧಾನ ಮಂತ್ರಿ ಅವರ ಬಗ್ಗೆ ಈ ರೀತಿಯ ಉತ್ತರ ನೀಡಿರುವುದು ಸರಿಯಲ್ಲ. ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.