"ಸಿದ್ದರಾಮಯ್ಯ ಬೀಫ್ ತಿಂತಾರೆ ಅಂತ, ಇಡೀ ಕುರುಬ ಸಮಾಜ ತಿನ್ನುತ್ತೆ ಅನ್ನೋಕಾಗುತ್ತಾ?''
ಮೈಸೂರು, ಡಿಸೆಂಬರ್ 25: ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು ಗೋಮಾಂಸ ತಿನ್ನಬಹುದು. ಆದರೆ ಅದೇ ಕಾರಣಕ್ಕೆ ಇಡೀ ಕೊಡವರನ್ನು ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ? ನೀವು ಗೋಮಾಂಸ ತಿಂತೀರಿ ಅಂತ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ? ಎಂದು ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಹಾಕಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೆ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗ್ತಿಲ್ಲ. ಆತ್ಮದ್ರೋಹದ ಮಾತುಗಳನ್ನು ಕಾಂಗ್ರೆಸ್ ನವರು ಮಾತ್ರ ಮಾತನಾಡುವುದಕ್ಕೆ ಸಾಧ್ಯ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಕೊಡವರು ಗೋ ಪೂಜಕರು, ಭಂಜಕರಲ್ಲ: ಸಿದ್ದು ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ
ಗೋಶಾಲೆಯಲ್ಲಿ ಸಗಣಿ ಬಾಚಿ ಸೇವೆ ಮಾಡಿದರು
ಇನ್ನು ಮುಂದಾದರೂ ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಗೋಮಾತೆಯನ್ನು ಎರಡನೇ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಬರುವಂತ ಮಾತು ಆಡಬೇಡಿ ಎಂದು ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ, ಸಂಸದ ಪ್ರತಾಪ್ಸಿಂಹ ಗೋಶಾಲೆಯಲ್ಲಿ ಶ್ರಮದಾನ ಮಾಡಿದರು. ಗೋಪಾಲಕನಾಗಿ ಗೋಶಾಲೆಯಲ್ಲಿ ಸಗಣಿ ಬಾಚಿ ಸೇವೆ ಮಾಡಿದರು. ಗೋ ಪೂಜೆಗಾಗಿ ತಾನೇ ಹಸುವಿನ ಮೈತೊಳೆದು, ಮೇವು ತಿನ್ನಿಸಿ ಹಾರೈಕೆ ಮಾಡಿದರು.
ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸುತ್ತೀರಾ?
ನಂತರ ಗೋಪೂಜೆ ಮಾಡಿ ಫಲಾಮೃತ ಬೆಲ್ಲ, ಅಕ್ಕಿ ನೀಡಿದ ಸಂಸದ ಪ್ರತಾಪ್ಸಿಂಹಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. ಮೈಸೂರಿನ ಪಿಂಜರಾಪೋಲ್ ಗೋಶಾಲೆಯಲ್ಲಿ ಗೋ ಪೂಜೆ ನಂತರ ಬಿಜೆಪಿ ಕಾರ್ಯಕರ್ತರು ಗೋವುಗಳಿಗೆ ಜೈಕಾರ ಹಾಕಿದದರು. ನಂತರ ಮಾತಾಡಿದ ಸಂಸದ ಪ್ರತಾಪ್ ಸಿಂಹ ಜನರನ್ನು ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸುತ್ತೀರಾ? ಕಳೆದ ಮಾರ್ಚ್ನಿಂದಲೂ ಜನರು ನಿರ್ಬಂಧದ ವ್ಯವಸ್ಥೆಯಲ್ಲೆ ಇದ್ದಾರೆ. ಇನ್ನಾದರೂ ಜನರು ಓಡಾಡಲು ಬಿಡಿ. ಮಾಸ್ಕ್ ಹೆಸರಿನಲ್ಲಿ ಜನರಿಗೆ ಅನಗತ್ಯ ತೊಂದರೆ ಕೊಡಬೇಡಿ ಎಂದರು.
ಅಭಿವೃದ್ಧಿಗೆ ಮೇಯರ್ ಸ್ಥಾನ ನಮಗೆ ಕೊಡಿ
ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿ ಬಂದಿದ್ದೇನೆ. ಎಲ್ಲ ಕಡೆ ಕೊರೊನಾ ರೂಪಾಂತರದ ಬಗ್ಗೆ ಚರ್ಚೆ ಇದೆ. ಆದರೆ ಜನರನ್ನು ಹೆಚ್ಚು ದಿನ ನಿರ್ಬಂಧ ಮಾಡೋಕೆ ಆಗೋಲ್ಲ. ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಕಡ್ಡಾಯ ಮಾಡಿ. ಆದರೆ ಮಾಸ್ಕ್ ಹೆಸರಿನಲ್ಲಿ ಕಾರು ಬೈಕ್ ನಿಲ್ಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ಸಿಂಹ ಮನವಿ ಮಾಡಿದರು. ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರ ಮಾತನಾಡಿದ ಸಂಸದರು, ಈ ಬಾರಿ ಬಿಜೆಪಿಗೆ ಮೈಸೂರು ಪಾಲಿಕೆ ಮೇಯರ್ ಸ್ಥಾನ ಬೇಕೇ ಬೇಕು. ಮೈಸೂರಿನ ಸಮಗ್ರ ಅಭಿವೃದ್ಧಿ ಆಗಬೇಕೆಂದರೆ ಮೇಯರ್ ಸ್ಥಾನ ನಮಗೆ ಕೊಡಿ ಎಂದು ಆಗ್ರಹಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ
ನಾವು ಪಾಲಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. 22 ಸ್ಥಾನ ಇರುವ ನಮಗೆ ಯಾರು ಬೇಕಾದರೂ ಸಹಕಾರ ಕೊಡಬಹುದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರು ಪಾಲಿಕೆಯಲ್ಲೂ ಬಿಜೆಪಿ ನೇತೃತ್ವದ ಅಧಿಕಾರ ಇದ್ದರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು. ನಮಗೆ ಒಮ್ಮೆಯೂ ಮೈಸೂರು ಪಾಲಿಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಹಿಂದೆ ಜೆಡಿಎಸ್ ಜೊತೆ ಹೊಂದಾಣಿಕೆ ಆಗಿದ್ದಾಗ ನಾಲ್ಕು ಬಾರಿ ಉಪ ಮೇಯರ್ ಮಾತ್ರ ಆಗಿದ್ದೇವೆ. ಈ ಬಾರಿ ಯಾರ ಜೊತೆ ಹೊಂದಾಣಿಕೆ ಆದರೂ ಮೇಯರ್ ಸ್ಥಾನ ನಮಗೇ ಬೇಕು. ನಿಮಗೆಲ್ಲ ಸಾಕಷ್ಟು ಅವಕಾಶ ಕೊಟ್ಟಾಗಿದೆ. ನಮಗೂ ಒಮ್ಮೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ಕೇಳಿದರು.