ಮೈಸೂರು ಡಿಸಿ ರೋಹಿಣಿ ಸಿಂಧೂರಿ ಪರ ಪ್ರತಾಪ್ ಸಿಂಹ ಮಾತು
ಮೈಸೂರು, ಡಿಸೆಂಬರ್ 2: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಜನಪ್ರತಿನಿಧಿಗಳ ಮೇಲೆ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ರೋಹಿಣಿ ಸಿಂಧೂರಿ ಅವರ ಪರವಾಗಿ ಮಾತನಾಡಿದ್ದಾರೆ.
ಈಚೆಗೆ ಸಭೆಯೊಂದರಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಹುಣಸೂರು ಶಾಸಕ ಮಂಜುನಾಥ್ ಅವರ ನಡುವೆ ಜಟಾಪಟಿ ನಡೆದಿತ್ತು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೂಡ ಡಿಸಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, "ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಯಾವ ಕ್ಷೇತ್ರವನ್ನೂ ಜನರು ಶಾಸಕರು ಹಾಗೂ ಸಂಸದರಿಗೆ ಬರೆದುಕೊಟ್ಟಿಲ್ಲ. ಡಿಸಿ ಜನರ ಬಳಿಗೆ ಹೋಗಿ ಅವರ ಸಮಸ್ಯೆಯನ್ನು ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು" ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಶಾಸಕ ಮಂಜುನಾಥ್
"ನೀವು ಜನರ ಸಮಸ್ಯೆಗಳನ್ನು ಬಗೆಹರಿಸಿದ್ದರೆ ಡಿಸಿ ಈಗ ಯಾಕೆ ಜನರ ಬಳಿಗೆ ಹೋಗಬೇಕಾಗುತ್ತಿತ್ತು? ನೀವು ಮಾಡಲು ಆಗದ ಕೆಲಸವನ್ನು ರೋಹಿಣಿ ಸಿಂಧೂರಿ ಮಾಡುತ್ತಿದ್ದಾರೆ. ಅವರಿಗೆ ಅವರ ಕೆಲಸ ಮಾಡಲು ಬಿಡಿ" ಎಂದು ವಾಗ್ದಾಳಿ ನಡೆಸಿದ್ದಾರೆ. "ಹುಣಸೂರು ಶಾಸಕ ಮಂಜುನಾಥ್, ಡಿಸಿ ರೋಹಿಣಿ ಸಿಂಧೂರಿಯವರನ್ನು ಮಹಾರಾಣಿ ಎಂದಿದ್ದು ತಪ್ಪು. ಮೈಸೂರು ರಾಜಮನೆತನಕ್ಕೆ ನಾವು ಬೆಲೆ ಕೊಡುವುದು ಅವರು ಮಾಡಿರುವ ಕೆಲಸಕ್ಕಾಗಿ. ಜಿಲ್ಲಾಧಿಕಾರಿಯನ್ನು ಮಹಾರಾಣಿಗೆ ಹೋಲಿಕೆ ಮಾಡಿದ್ದು ತಪ್ಪು" ಎಂದು ಹೇಳಿದರು.
ಈಚೆಗೆ ಸಭೆಯೊಂದರಲ್ಲಿ ಹುಣಸೂರು ಶಾಸಕ ಮಂಜುನಾಥ್, ರೋಹಿಣಿ ಸಿಂಧೂರಿ ಅವರನ್ನು ಉದ್ದೇಶಿಸಿ, "ಹುಣಸೂರು ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕ್ಷೇತ್ರದ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಅವರಿಗೆ ಅನೇಕ ಬಾರಿ ಪತ್ರ ಬರೆದು ಗಮನ ಸೆಳೆದಿದ್ದೇನೆ. ಆದರೆ ಒಂದು ಪತ್ರಕ್ಕೂ ಅವರಿಂದ ಪ್ರತಿಕ್ರಿಯೆ ದೊರೆತಿಲ್ಲ. ಒಬ್ಬ ಶಾಸಕ ಬರೆದ ಪತ್ರಕ್ಕೂ ಜಿಲ್ಲಾಧಿಕಾರಿ ಉತ್ತರಿಸುವುದಿಲ್ಲ. ನೀವು ಈ ರೀತಿ ಮಹಾರಾಣಿಯಾಗಿ ಮೆರೆಯಬೇಡಿ, ಅಧಿಕಾರಿಯಾಗಿ ವರ್ತಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹೋದ ಕಡೆಯೆಲ್ಲಾ ಸರ್ಕಾರದ ವಿರುದ್ಧವೇ ನಡೆಯುವ ಪ್ರವೃತ್ತಿ. ಅವರು ಸರ್ಕಾರವನ್ನೇ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದರು.