ಪ್ರಕಾಶ್ ರೈಗೆ ಕಾವೇರಿಗಿಂತ ಕಾಸು ಮುಖ್ಯ ಎಂದ ಸಂಸದ ಪ್ರತಾಪ್ ಸಿಂಹ
Recommended Video
ಮೈಸೂರು, ಜೂನ್ 4 : ರಾಜ್ಯದಲ್ಲಿ ವಿವಾದ ಎಬ್ಬಿಸಿರುವ ತಮಿಳು ನಟ ರಜನೀಕಾಂತ್ ಅಭಿನಯದ 'ಕಾಳ' ಚಲನಚಿತ್ರ ಬಿಡುಗಡೆ ವಿಚಾರದಲ್ಲಿ ನಟ ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈಗೆ ಕಾವೇರಿಗಿಂತ ಕಾಸು ಮುಖ್ಯ. ನಮಗೆಲ್ಲ ಕಾಸಿಗಿಂತ ಕಾವೇರಿ ಮುಖ್ಯ. ರಜನೀಕಾಂತ್ ಅವರನ್ನು ನಾವೆಲ್ಲರೂ ಇಷ್ಟಪಟ್ಟಿದ್ದೇವೆ. ಆದರೆ ಈ ಹಿಂದೆ ಕಾವೇರಿ ವಿಚಾರವಾಗಿ ಕೊಟ್ಟಂತಹ ಹೇಳಿಕೆ ಬಹಳ ನೋವನ್ನು ಕೊಟ್ಟಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಸಹಜವಾಗಿ ಅವರ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ ಎಂದರು.
ಕಾವೇರಿಗೂ 'ಕಾಲಾ' ಸಿನಿಮಾಕ್ಕೂ ಏನು ಸಂಬಂಧ?: ಪ್ರಕಾಶ್ ರೈ
ರಜನೀಕಾಂತ್ ಅವರಿಗೆ ಪ್ರಕಾಶ್ ರೈ ಸಲಹೆ ಕೊಡುವುದರ ಬದಲು ಕಾವೇರಿಗೂ 'ಕಾಳ' ಚಿತ್ರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಪ್ರಕಾಶ್ ರೈ ಕರ್ನಾಟಕದ ಪಾಲಿಗೆ ಓರ್ವ ಖಳನಾಯಕ ಎಂದಿದ್ದಾರೆ.
ಪ್ರಕಾಶ್ ರೈ ಈ ಹಿಂದೆ ವಾಹಿನಿಯೊಂದರಲ್ಲಿ ನಡೆದ ತಮ್ಮ ಸಿನಿಮಾ ಕಾರ್ಯಕ್ರಮದಲ್ಲಿ ಕಾವೇರಿ ವಿಚಾರ ಚರ್ಚೆ ಮಾಡೊಲ್ಲ ಎಂದಿದ್ದರು. ಈಗ ಸಿನಿಮಾಗೂ ಕಾವೇರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಆ ಮೂಲಕ ಕರ್ನಾಟಕ ಹಾಗೂ ಕಾವೇರಿಯನ್ನು ಪದೇ ಪದೇ ಕೆಣಕುತ್ತಿದ್ದಾರೆ ಎಂದು ಹೇಳಿದರು.
ಪ್ರಕಾಶ್ ರೈಗೆ ಕಾಸೇ ಮುಖ್ಯವಾಗಿದೆ. ಅದಕ್ಕಾಗಿ ರಜನೀಕಾಂತ್ ಚಿತ್ರದ ಪರ ಟ್ವೀಟ್ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ರಜನೀಕಾಂತ್ ಅಷ್ಟೇ ಅಲ್ಲ, ಯಾರೇ ಲಘುವಾಗಿ ಮಾತನಾಡಿದರೂ ಖಂಡಿಸುತ್ತೇವೆ ಎಂದರು.
ಕರ್ನಾಟಕದ ಪಾಲಿಗೆ ಜೀವನಾಡಿ ಕಾವೇರಿ. ಕರ್ನಾಟಕಕ್ಕೆ ಅನ್ನ ಹಾಗೂ ನೀರನ್ನು ಕೊಡುತ್ತಿರುವುದು ಕಾವೇರಿ. ಅಂಥ ಕಾವೇರಿ ವಿಚಾರವಾಗಿ ರಜನೀಕಾಂತ್ ಅಲ್ಲ, ಬೇರೆ ಯಾರೇ ಹೇಳಿಕೆ ಕೊಟ್ಟರೂ ನಾವು ಸಹಿಸಲ್ಲ. ಕಾವೇರಿಯನ್ನು ಕರ್ನಾಟಕದಿಂದ ಕಿತ್ತುಕೊಳ್ಳಲು ಪ್ರಯತ್ನಿಸಿದರೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.