ಮೈಸೂರು-ಕುಶಾಲನಗರ ನಡುವೆ ಹೆದ್ದಾರಿ ನಿರ್ಮಾಣ: ಸಂಸದ ಪ್ರತಾಪ್ ಸಿಂಹ
ಮೈಸೂರು, ಫೆಬ್ರವರಿ 20: ಮೈಸೂರು ಮತ್ತು ಕುಶಾಲನಗರ ನಡುವಿನ ಹೆದ್ದಾರಿಯನ್ನು ನಿರ್ಮಿಸಲಾಗುವುದು ಆದರೆ ಈಗ ಇರುವ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಸಾಧ್ಯವಿಲ್ಲ, ಇದಕ್ಕೆ ಪರಿಸರವಾದಿಗಳೂ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಇದರ ಭೂಸ್ವಾಧೀನಕ್ಕಾಗಿ 1,000 ಕೋಟಿ ರೂ. ಬೇಕು, ರಸ್ತೆ ನಿರ್ಮಾಣಕ್ಕಾಗಿ 2,120 ಕೋಟಿ ರೂ. ಬೇಕು. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎಂದರು.
ಮೈಸೂರು ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ
ಮೈಸೂರು-ಕುಶಾಲನಗರ ನಡುವಿನ ಹೊಸ ಹೆದ್ದಾರಿ ಮೈಸೂರು-ಬೆಂಗಳೂರು ಹೆದ್ದಾರಿಗೆ ಕನೆಕ್ಟ್ ಆಗಲಿದೆ. ಶ್ರೀರಂಗಪಟ್ಟಣದ ಬೊಮ್ಮೂರು ಅಗ್ರಹಾರದ ಬಳಿ ಕನೆಕ್ಟ್ ಆಗುತ್ತದೆ. ಅಲ್ಲಿಂದ ಗುಗ್ರಾಲ್ ಛತ್ರ, ಹೊಸ ರಾಮೇನಹಳ್ಳಿ, ಕಟ್ಟೆಮಳಲವಾಡಿ, ಹುಣಸೂರು, ಗೋಣಿಕೊಪ್ಪ ಮಾರ್ಗವಾಗಿ ಕುಶಾಲನಗರದ ಕಳ್ಳ ಬೆಟ್ಟದ ಬಳಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು- ಮೈಸೂರು ನಡುವಿನ ಹೆದ್ದಾರಿಯನ್ನು 10 ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕಾಗಿ ಬರೋಬ್ಬರಿ 7500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಶ್ರೀರಂಗಪಟ್ಟಣ, ಮಂಡ್ಯ, ಚನ್ನಪಟ್ಟಣ, ಬಿಡದಿ ಸೇರಿದಂತೆ 5 ನಗರಗಳಿಗೆ ಬೈಪಾಸ್ ಆಗುತ್ತದೆ, ಮೊದಲ ಹಂತದ ಕಾಮಗಾರಿ ಶೇ.37 ಹಾಗೂ ಎರಡನೇ ಹಂತದ ಕಾಮಗಾರಿ ಶೇ.5 ರಷ್ಟು ಮುಕ್ತಾಯ ಆಗಿದೆ. ಇನ್ನು ಮುಂದೆ ಸಮರೋಪಾದಿಯಲ್ಲಿ ಕೆಲಸ ಸಾಗಲಿದೆ.
"ಕಲ್ಲಿನಲ್ಲಿರುವ ದೋಷದಿಂದ ಪ್ರತಿಮೆಯಲ್ಲಿ ಬಿರುಕು"
ಕಾಮಗಾರಿ ಮುಕ್ತಾಯವಾದರೆ ಕೇವಲ 90 ನಿಮಿಷದಲ್ಲೇ ಮೈಸೂರಿಂದ ಬೆಂಗಳೂರಿಗೆ ತಲುಪಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇನ್ನು ಇದೇ ಸಂಮದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಪ್ರಕರಣಕ್ಕೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ""ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫ್ಲೇ ಕಾರ್ಡ್ ಪ್ರದರ್ಶನಕ್ಕಿಂತಲೂ ಇದು ಗಂಭೀರ ಪ್ರಕರಣ. ದೇಶದ್ರೋಹದಂತಹ ಪ್ರಕರಣಕ್ಕೆ ಯಾಕೆ ಸ್ಟೇಷನ್ ಬೇಲ್ ಕೊಟ್ಟರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಜಾಮೀನು ಕೊಟ್ಟಿರುವುದು ದೊಡ್ಡ ತಪ್ಪು, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸ್ಟೇಷನ್ ಬೇಲ್ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆಂದರು.''
ರಾಜ್ಯದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದರ ಬಗ್ಗೆ ಮಾಹಿತಿ ಇರುತ್ತೆ ಅಂತ ನಾನು ಭಾವಿಸುತ್ತೇನೆ. ದೇಶದ್ರೋಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದವರಿಗೆ ಬೇಲ್ ಕ್ಯಾನ್ಸಲ್ ಮಾಡಬೇಕು.
ಮತ್ತೆ ಅವರ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದರು.