ಮೈಸೂರಿನಲ್ಲಿ ಹೆಲಿ ಟೂರಿಸಂ; ಸಂಸದ ಪ್ರತಾಪ್ ಸಿಂಹ ವಿರೋಧ
ಮೈಸೂರು, ಏಪ್ರಿಲ್ 12; ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಿಸಲು ವಿರೋಧ ವ್ಯಕ್ತವಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆಗೆ ಈಗ ಸಂಸದ ಪ್ರತಾಪ್ ಸಿಂಹ ಸಹ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಲಲಿತಮಹಲ್ ಅರಮನೆ ಬಳಿಯ ಹೆಲಿ ಟೂರಿಸಂ ಯೋಜನೆ ನಿರ್ಮಾಣ ಜಾಗಕ್ಕೆ ಭೇಟಿ ನೀಡಿದರು. ಈ ಜಾಗದಲ್ಲಿ ಮರಗಳನ್ನು ಕಡಿದು ಹೆಲಿಪ್ಯಾಡ್ ನಿರ್ಮಾಣ ಮಾಡಲು ಈಗಾಗಲೇ ವಿರೋಧ ವ್ಯಕ್ತವಾಗಿದೆ.
ಹೆಲಿ ಟೂರಿಸಂಗೆ ಆಕ್ಷೇಪ: ಮರಗಳನ್ನು ಉಳಿಸಲು ಅಭಿಯಾನ
"ಮರಕಡಿದು ಹೆಲಿಪ್ಯಾಡ್ ನಿರ್ಮಿಸುವ ಅಗತ್ಯವಿಲ್ಲ. ಪಕ್ಕದಲ್ಲೇ ಇರುವಂತಹ ಮಹಾರಾಣಿ ಅವರಿಗೆ ಸೇರಿದಂತಹ ಹೆಲಿಪ್ಯಾಡ್ ಅನ್ನು ಲೀಸ್ ಅಥವಾ ಬಾಡಿಗೆಗೆ ತೆಗೆದುಕೊಳ್ಳಬಹುದು" ಎಂದು ಹೇಳಿದರು.
ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ವಾಟಾಳ್ ನಾಗರಾಜ್ ವಿರೋಧ
"ಅಗತ್ಯವಿದ್ದರೆ ಮೈಸೂರು ವಿಮಾನ ನಿಲ್ದಾಣವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಮರ ಕಡಿಯಬಾರದು. ಇಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡುವ ಅಗತ್ಯವಿಲ್ಲ. ಅರಣ್ಯ ಇಲಾಖೆಯವರು ಅನುಮತಿ ಕೊಡಬಾರದು" ಎಂದು ಸೂಚನೆ ಸೂಚನೆ ನೀಡಿದರು.
ಇಂಥವೆಲ್ಲಾ ತುಂಬಾ ನೋಡಿದ್ದೇವೆ
"ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು. ಮಂಡ್ಯದಲ್ಲಿ ಡಿಸ್ನಿ ಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡುತ್ತೇನೆ ಎನ್ನುತ್ತಾರೆ. ಇಂಥವೆಲ್ಲಾ ತುಂಬಾ ನೋಡಿದ್ದೇವೆ" ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ಗೆ ಟಾಂಗ್ ಕೊಟ್ಟಿದ್ದಾರೆ.
ಹೆಲಿ ರೈಡ್ಗೆ ಜನರು ಬರೋಲ್ಲ
"ಮೈಸೂರು ದಸರಾ ಸಂದರ್ಭದಲ್ಲಿ ಮಾಡುವ ಹೆಲಿ ರೈಡ್ಗೆ ಜನರು ಬರುವುದಿಲ್ಲ. ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಎನ್ನುತ್ತೀರಿ. ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ?" ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಯೋಜನೆ ರೂಪಿಸುವ ಮುನ್ನ ಗಮನಿಸಿ
"ಯಾವುದೇ ಯೋಜನೆ ರೂಪಿಸುವ ಮುನ್ನ ಎಲ್ಲವನ್ನೂ ಗಮನಿಸಬೇಕು. ಹೆಲಿಕಾಪ್ಟರ್ ಹಾರಿಸಬೇಕು ಎಂದು ಅನ್ನಿಸಿದರೆ ವಿಮಾನ ನಿಲ್ದಾಣದಲ್ಲಿ ಜಾಗ ಕೊಡುತ್ತೇವೆ. ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದೆ. ಅದನ್ನು ಬಾಡಿಗೆ, ಭೋಗ್ಯಕ್ಕೆ ಪಡೆಯಬಹುದು" ಎಂದು ಪ್ರತಾಪ್ ಸಿಂಹ ಹೇಳಿದರು.
ಹೆಲಿ ಟೂರಿಸಂಗೆ ನನ್ನ ವಿರೋಧವಿದೆ
"ಹೆಲಿ ಟೂರಿಸಂ ಯೋಜನೆಗೆ ನನ್ನ ವಿರೋಧವಿದೆ. ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆ ಮಾತನಾಡುವೆ" ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.