ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ; ಕಾಮಗಾರಿ ಪರಿಶೀಲಿಸಿದ ಪ್ರತಾಪ್ ಸಿಂಹ
ಮೈಸೂರು, ಸೆಪ್ಟೆಂಬರ್ 11; ಶ್ರೀರಂಗ ಪಟ್ಟಣದ ಬಳಿಯ ಗಣಂಗೂರು ಬೇಸ್ ಕ್ಯಾಂಪ್ ಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು- ಬೆಂಗಳೂರು ನಡುವಿನ ದಶ ಪಥದ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದರು.
ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ನಿಂದ ನಿರ್ಮಾಣವಾಗುತ್ತಿರುವ ಶ್ರೀರಂಗಪಟ್ಟಣ ಸೇತುವೆಗಳನ್ನು ವೀಕ್ಷಣೆ ಮಾಡಿದರು. ಕಾಮಗಾರಿ ಕುರಿತು ಅಧಿಕಾರಿಗಳಿಂದ ಸ್ಥಳದಲ್ಲಿಯೇ ಚರ್ಚೆ ನಡೆಸಿ, ಕಾಮಗಾರಿಯ ನೀಲನಕ್ಷೆ ಪರಿಶೀಲಿಸಿದರು.
ಶಾಸಕ ಜಮೀರ್ ಅವರನ್ನು ಏಕೆ ಬಂಧಿಸಿಲ್ಲ?: ಸಂಸದ ಪ್ರತಾಪ್ ಸಿಂಹ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೈಸೂರು- ಬೆಂಗಳೂರು ನಡುವೆ ದಶ ಪಥ ಹೆದ್ದಾರಿ ರಾಜ್ಯದ ಮೊದಲ ಎಕ್ಸ್ಪ್ರೆಸ್ ಹೈವೇ ಆಗಿದ್ದು, ಕೇವಲ 90 ನಿಮಿಷದಲ್ಲೇ ಮೈಸೂರಿನಿಂದ ಬೆಂಗಳೂರು ತಲುಪುವ ಗುರಿ ಇದೆ. ಬರೋಬ್ಬರಿ 7400 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಮಂಡ್ಯ, ರಾಮನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣ ಸೇರಿ 51 ಕಿ.ಮೀ. ಉದ್ದದ 6 ಬೈಪಾಸ್, 8 ಕಿ.ಮೀ. ಎಲಿವೇಟೆಡ್ ಕಾರಿಡಾರ್, ರಾಮನಗರ ಬಳಿ ವಿಶ್ರಾಂತಿ ತಾಣ, 60 ಅಂಡರ್ ಪಾಸ್, 2 ಟೋಲ್ ಒಳಗೊಂಡ ಹೆದ್ದಾರಿ ಇದಾಗಿದೆ" ಎಂದು ಮಾಹಿತಿ ನೀಡಿದರು.
ಈಗಾಗಲೇ ಮೊದಲ ಪ್ಯಾಕೇಜ್ ಶೇ.51.20, ಎರಡನೇ ಪ್ಯಾಕೇಜ್ ಶೇ.30.12 ಕಾಮಗಾರಿ ಮುಕ್ತಾಯಗೊಂಡಿದೆ ಎಂದು ತಿಳಿಸಿದರು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ಶ್ರೀಧರ್, ಭೂಸ್ವಾಧೀನ ಅಧಿಕಾರಿ ದೇವರಾಜು ಸೇರಿದಂತೆ ಪ್ರಮುಖರು ಹಾಜರಿದ್ದರು.