ಇನ್ಮುಂದೆ ಬದಲಾದ ಸಮಯದಲ್ಲಿ ಮೈಸೂರು–ಬೆಂಗಳೂರು ಮೆಮು ರೈಲು
ಮೈಸೂರು, ಜುಲೈ 27: ಬದಲಾದ ಸಮಯದ ಮೈಸೂರು-ಬೆಂಗಳೂರು ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್ ಸಿಂಹ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಇಂದು ಹಸಿರು ನಿಶಾನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, "ರೈಲ್ವೆ ಇಲಾಖೆಯ ಅನೇಕ ಯೋಜನೆಗಳು ಮೈಸೂರಿನಿಂದ ಜಾರಿಗೆ ಬಂದಿವೆ. 2004ರಿಂದ 2014ರವರೆಗೆ ಹೊಸ ರೈಲನ್ನು ಮೈಸೂರಿಗೆ ಪರಿಚಯಿಸಿಲ್ಲ. ಪರಿಚಯಿಸಬೇಕೆಂದರೂ ರೈಲ್ವೆ ಬಜೆಟ್ ಗಾಗಿ ಕಾಯುವ ಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮೋದಿ ಸರ್ಕಾರದಲ್ಲಿ ಮುಂದಿನ ಬಜೆಟ್ ವರೆಗೂ ಕಾಯುವ ಅಗತ್ಯವಿಲ್ಲ" ಎಂದರು.
ಬೆಂಗಳೂರಿನಿಂದ ಮೈಸೂರಿಗೆ ವಾರದಲ್ಲಿ 6 ದಿನ ಮೆಮು ರೈಲು ಸಂಚಾರ
"ಕೇವಲ ಒಂದು ವಾರದಲ್ಲಿ ಎಲ್ಲ ರೈಲ್ವೆ ಇಲಾಖೆಗೆ ಕಾಯಕಲ್ಪ ನಡೆಯುತ್ತದೆ. ಕಳೆದ ಜನವರಿಯಲ್ಲಿ ಬೆಂಗಳೂರು-ಮೈಸೂರು-ಕಣ್ಣೂರು ಎಕ್ಸ್ ಪ್ರೆಸ್ ರೈಲನ್ನು ಬೆಂಗಳೂರು- ಹಾಸನದ ನಡುವೆ ಬ್ರಾಡ್ ಗೇಜ್ ಮಾಡಿದ ಬಳಿಕ ವಾರದಲ್ಲಿ ನಾಲ್ಕು ದಿನ ಮಾರ್ಗ ಬದಲಾಯಿತು. ಬೆಂಗಳೂರು- ರಾಮನಗರದವರೆಗೆ ಮೆಮು ಸೇವೆ ಇತ್ತು. ಅದನ್ನು ಬದಲಾಯಿಸಿ ಸಂಜೆ 7.50ಕ್ಕೆ ಮೈಸೂರಿನಿಂದ ವಾರಕ್ಕೆ ನಾಲ್ಕು ದಿನ ಬರುವ ಹಾಗೆ ಮಾಡಲಾಯಿತು. ಈಗ ಸಮಯವನ್ನು ಬದಲಾಯಿಸಲಾಗಿದೆ. ಇದಕ್ಕೆಲ್ಲ ಕಾರಣ ರೈಲ್ವೆ ಸಚಿವ ಪಿಯೂಷ್ ಗೋಯಲ್. ಅವರು ಕೊಟ್ಟ ನಿರ್ದೇಶನವನ್ನು ಅಧಿಕಾರಿಗಳು ಸಮರ್ಪಕವಾಗಿ ನಡೆಸುತ್ತಿದ್ದಾರೆ. ಕೇಂದ್ರದಿಂದ ರಾಜ್ಯ ರೈಲ್ವೆ ಸಚಿವರಾಗಿ ಸುರೇಶ್ ಅಂಗಡಿ ಅವರಿಂದಲೂ ತ್ವರಿತವಾಗಿ ಕೆಲಸ ನಡೆಯುತ್ತಿದೆ. ಇನ್ನು ಮೈಸೂರಿನಿಂದ ತ್ರಿವೆಂಡ್ರಮ್ ಹಾಗೂ ಮೈಸೂರಿನಿಂದ ಮುಂಬೈಗೂ ಸದ್ಯದಲ್ಲಿಯೇ ಹೊಸ ರೈಲು ಬರಲಿದೆ" ಎಂದು ತಿಳಿಸಿದರು.
ಮೆಮು ರೈಲು ಬೆಂಗಳೂರಿನಿಂದ ಸಂಜೆ 7.50ಕ್ಕೆ ಹೊರಡುತ್ತಿತ್ತು. ಇನ್ನು ಮುಂದೆ ಪ್ರತಿ ದಿನ ಸಂಜೆ 5.20ಕ್ಕೆ ಹೊರಟು ರಾತ್ರಿ 8.20ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಮತ್ತೆ ರಾತ್ರಿ 8.30ಕ್ಕೆ ಹೊರಟು ರಾತ್ರಿ 11.20ಕ್ಕೆ ಬೆಂಗಳೂರು ತಲುಪಲಿದೆ. ಇದೇ ರೀತಿ ಆರು ದಿನವೂ ಕಾರ್ಯಾಚರಣೆ ನಡೆಯಲಿದೆ.
ವಾರ ಪೂರ್ತಿ ಮೈಸೂರು -ಬೆಂಗಳೂರು ಮೆಮು ರೈಲಿಗೆ ಜು.27ರಂದು ಗ್ರೀನ್ ಸಿಗ್ನಲ್
ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣಾ ಗಾರ್ಗ್ ಉಪಸ್ಥಿತರಿದ್ದರು.