ಗೆಲ್ಲಲಾಗದವರು ಪುಕ್ಕಲುತನದಿಂದ ಹೀಗೆ ಮಾಡಿದರು:ಪ್ರತಾಪ್ ಸಿಂಹ
ಮೈಸೂರು, ಏಪ್ರಿಲ್ 19:ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಗೆ ದೂರು ದಾಖಲಿಸಿದ್ದಾರೆ. ಚುನಾವಣೆ ಆರಂಭವಾಗುವ 48 ಗಂಟೆಗೂ ಮುನ್ನ ನನ್ನ ಕುರಿತಾದ ಸುದ್ದಿಯನ್ನು ಬಿತ್ತರಿಸಬಾರದು. ಆದರೂ ಕೆಲವು ವ್ಯಕ್ತಿಗಳು ಮತ್ತು ಮಾಧ್ಯಮಗಳು ಮತದಾನದ ವೇಳೆ ನನ್ನ ಚಾರಿತ್ರ್ಯವಧೆ ಮಾಡುತ್ತಿವೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಗೆ ದೂರು ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏ. 17 ಅಂದರೆ ಮತದಾನಕ್ಕೆ ಒಂದು ದಿನ ಇರುವಂತೆ ಬುಧವಾರ ಪ್ರತಾಪ ಸಿಂಹ ಧ್ವನಿಯನ್ನು ಹೋಲುವ, ಯುವತಿಯ ಜತೆ ಅಶ್ಲೀಲ ಸಂಭಾಷಣೆ ನಡೆಸಿದ ಆಡಿಯೊ ಕ್ಲಿಪಿಂಗ್ ಗಳು ಸಾಮಾಜಿಕ ಜಾಲತಾಣ ಹಾಗೂ ಕೆಲ ವೆಬ್ ಸೈಟ್ ಗಳಲ್ಲಿ ವೈರಲ್ ಆಗಿತ್ತು.
ಮೈಸೂರಲ್ಲಿ ಪ್ರತಾಪ್ ಸಿಂಹ, ಪ್ರಮೋದಾದೇವಿ ಸೇರಿ ಪ್ರಮುಖರಿಂದ ಮತದಾನ
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರತಾಪ ಸಿಂಹ, ಚುನಾವಣೆಗೆ 48 ಗಂಟೆಗಳ ಮುನ್ನ ಅಭ್ಯರ್ಥಿಯ ತೇಜೋವಧೆ ಅಥವಾ ಮಾನ ಹಾನಿಕರವಾದ ಯಾವುದೇ ಸುದ್ದಿ ಪ್ರಕಟಿಸಬಾರದು ಎಂದು ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಗೆಲ್ಲಲು ಆಗದೇ ಪುಕ್ಕಲುತನದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದರು.
ಪ್ರತಾಪ್ ಸಿಂಹ ಗೆಲುವಿನ ಮೇಲೆ ನನ್ನ ಭವಿಷ್ಯ ನಿರ್ಮಾಣ:ಯಡಿಯೂರಪ್ಪ
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಮೇಲ್ನೋಟಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ 126 ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಮತದಾನಕ್ಕೆ 48 ಗಂಟೆಗಳಿಗೂ ಮುನ್ನ ಪ್ರತಾಪ ಸಿಂಹ ಅವರಿಗೆ ತೇಜೋವಧೆಯಾಗುವಂತೆ ಸುದ್ದಿ ಪ್ರಕಟಿಸಿದ ಮಾಧ್ಯಮಗಳು ಹಾಗೂ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.