ಇನ್ನು ಒಂದು ವಾರ ತಡೆದುಕೊಳ್ಳಿ; ಫೇಸ್ ಬುಕ್ ಲೈವ್ ನಲ್ಲಿ ಪ್ರತಾಪ ಸಿಂಹ
ಮೈಸೂರು, ಏಪ್ರಿಲ್ 9: "ಚೀನಾದಿಂದ ಕನ್ಸೈನ್ಮೆಂಟ್ ನಿಂದ ವೈರಸ್ ಬಂದಿದೆ ಅಂತ ಊಹಾಪೋಹಗಳಿವೆ. ರಾಜಕಾರಣದಲ್ಲಿ ಇರುವವರು ಅದರ ಬಗ್ಗೆ ಪರಾಮರ್ಶೆ ಮಾಡದೆ ಹೇಳಿಕೆಗಳನ್ನು ಕೊಟ್ಟು ಬಿಡುತ್ತೇವೆ" ಎಂದು ಇಂದು ಫೇಸ್ ಬುಕ್ ಲೈವ್ ಗೆ ಬಂದ ಸಂಸದ ಪ್ರತಾಪ ಸಿಂಹ ಗರಂ ಆಗಿದ್ದಾರೆ.
"ಕೊರೊನಾ ವೈರಸ್ ಆಕಾಶದಿಂದಲೋ ಕನ್ಸೈನ್ಮೆಂಟ್ ನಿಂದಲೋ ಬಂದಿಲ್ಲ. ಅದಕ್ಕೊಂದು ಸೂಕ್ತ ಕಾರಣ ಇದೆ. ಅದು ಎಲ್ಲರಿಗೂ ಹೇಗೆ ಹರಡುತ್ತೋ ಅದೇ ರೀತಿ ಹರಡಿದೆ. ಅದನ್ನು ನಿಮ್ಮ ಗಮನಕ್ಕೆ ತರುತ್ತೇವೆ" ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ನಂಜನಗೂಡು ಶಾಸಕ ಹರ್ಷವರ್ಧನ್ಗೆ ತಿರುಗೇಟು ನೀಡಿದ್ದಾರೆ.
ರಾಜ್ಯದ ಎಲ್ಲ ಗಡಿಗಳನ್ನು ಬಂದ್ ಮಾಡಲು ಪ್ರತಾಪ ಸಿಂಹ ಮನವಿ
ಇದೇ ಸಂದರ್ಭ ಮೈಸೂರಿನಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಮಾತನಾಡಿದ ಅವರು, "ಮೈಸೂರು ಹಾಫ್ ಸೆಂಚ್ಯುರಿ ಹೊಡೆಯುತ್ತೆ. ಮೈಸೂರು ಸೆಂಚ್ಯುರಿ ಹೊಡೆಯುತ್ತೆ ಅಂತ ಆತಂಕ ಇತ್ತು. ಆದ್ರೆ ಹಾಫ್ ಸೆಂಚ್ಯುರಿಗೆ ನಿಲ್ಲುತ್ತೆ ಎನ್ನುವ ಧೈರ್ಯ ಬಂದಿದೆ. ಜುಬಿಲಿಯೆಂಟ್ ಕಾರ್ಖಾನೆಯಲ್ಲೂ ಕೆಲವು ಕೇಸ್ ಬರುತ್ತೆ, ನಿಜಾಮುದ್ದೀನ್ ಪ್ರಕರಣದಲ್ಲೂ ಕೆಲವು ಕೇಸ್ ಬರುತ್ತೆ" ಎಂದು ಮಾಹಿತಿ ನೀಡಿದರು.
"ಕೊಡಗಿನಲ್ಲಿ ಈಗಾಗಲೇ ಕೊರೊನಾ ತಹಬದಿಗೆ ಬಂದಿದೆ. ಮೈಸೂರಿನಲ್ಲೂ ಪ್ರಕರಣಗಳು ಗಣನೀಯವಾಗಿ ಕಡಿಮೆ ಆಗುತ್ತಿವೆ. ಮೈಸೂರಿಗರು ತೋರಿಸಿದ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ. ನನಗೂ ಮನೆಯಲ್ಲಿ ಕುಳಿತು ಕುಳಿತು ಬೋರಾಗಿದೆ. ಯಾವಾಗ ಸ್ವಾತಂತ್ರ್ಯ ಸಿಗುತ್ತೋ ಅಂತ ಕಾಯುತ್ತಿದ್ದೇವೆ. ಕೆಲವರಿಗೆ ಡೀಅಡಿಕ್ಷನ್ ಕ್ಯಾಂಪ್ಗೆ ಹಾಕಿದಂತೆ ಆಗಿದೆ. ಇನ್ನು ವಾರ ತಡೆದುಕೊಳ್ಳಿ, ಹಂತ ಹಂತವಾಗಿ ಸ್ವಾತಂತ್ರ್ಯ ಸಿಗುತ್ತೆ. ನಾನೂ ಹೊಟ್ಟೆ ಕರಗಿಸಲು ಶುರು ಮಾಡಿದ್ದೇನೆ. ಮನೆಯಲ್ಲಿ ವ್ಯಾಯಾಮ ಮಾಡಿ" ಎಂದು ಸಲಹೆ ನೀಡಿದ್ದಾರೆ.