ಆದರ್ಶ ಗ್ರಾಮಕ್ಕೆ ಕರಿಮುದ್ದನಹಳ್ಳಿ ದತ್ತು ಪಡೆದ ಪ್ರತಾಪ್
ಮೈಸೂರು, ಜ. 31: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ 'ಸಂಸದ ಆದರ್ಶ ಗ್ರಾಮ ಯೋಜನೆ' ಅಡಿ ಸಂಸದ ಪ್ರತಾಪ್ ಸಿಂಹ ಅವರು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕರಿಮುದ್ದನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕರಿಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆದರ್ಶ ಗ್ರಾಮ ಯೋಜನೆಗೆ ಪ್ರತಾಪ್ ಸಿಂಹ ಚಾಲನೆ ನೀಡಿದರು. ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. [ಅನಂತ್ ಕುಮಾರ್ ಪಡೆದ ಗ್ರಾಮ ರಾಗಿಹಳ್ಳಿ]
ಸಭೆಯಲ್ಲಿ ಯೋಜನೆಯ ಜಾರಿಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರತಾಪ್ ಸಿಂಹ ಹಾಗೂ ಜಿಲ್ಲಾಧಿಕಾರಿಗಳು ಸಲಹೆ, ಸೂಚನೆಗಳನ್ನು ನೀಡಿದರು. [ಆದರ್ಶ ಗ್ರಾಮ ಪಟ್ಟಿ ಡಿಸಿಗೆ ನೀಡಿ]
ಯೋಜನೆಯ ಅನುಷ್ಠಾನ ಕುರಿತು ಈಗಾಗಲೇ ಬಿಜೆಪಿಯ ಹಲವು ಸಂಸದರು ಗ್ರಾಮ ದತ್ತು ಪಡೆದಿದ್ದಾರೆ. ಈಚೆಗಷ್ಟೇ ಕೇಂದ್ರ ಸಚಿವರಾದ ಅನಂತ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗ್ರಾಮವೇ ಇಲ್ಲದ ಕಾರಣ ಪಕ್ಕದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ರಾಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ದತ್ತು ಪಡೆದಿದ್ದರು. [ಒಂದೊಂದು ಗ್ರಾಮ ದತ್ತು ಪಡೆಯಿರಿ]
ಸದಾನಂದಗೌಡ ಅವರು ತನ್ನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉತ್ತರಹಳ್ಳಿ ಹೋಬಳಿ ಸೋಮನಹಳ್ಳಿ ಗ್ರಾಮ ಪಂಚಾಯತ್ನ ನೆಟ್ಟಿಗೆರೆ, ವೀರಸಂದ್ರ ಮತ್ತು ಬೋಳಾರೆ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದರು.