ಶ್ರೀನಿವಾಸ್ ಪ್ರಸಾದ್ ಪುಸ್ತಕದ ಬಗ್ಗೆ ಕೆಂಡವಾದ ಸಂಸದ ಧ್ರುವನಾರಾಯಣ್
ಮೈಸೂರು, ಮಾರ್ಚ್ 22 : ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿನ ಹಲವಾರು ಅಂಶಗಳು ಸುಳ್ಳಿನಿಂದ ಕೂಡಿರುವುದು ಗೊತ್ತಾಗಿದೆ ಎಂದು ಸಂಸದ ಧ್ರುವನಾರಾಯಣ್ ಕೆಂಡ ಕಾರಿದ್ದಾರೆ.
ನಂಜನಗೂಡು ಉಪ ಚುನಾವಣೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಬರೆದ ಪುಸ್ತಕವನ್ನು ಬುಧವಾರ ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಧ್ರುವನಾರಾಯಣ್, ಜಾತ್ಯತೀತ ದಳದಲ್ಲಿದ್ದ ಶ್ರೀನಿವಾಸ್ ಪ್ರಸಾದ್ ಅವರು 2008ರಲ್ಲಿ ಕಾಂಗ್ರೆಸ್ ಸೇರಿದರು. 2008ರ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿರುವುದಾಗಿ ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದು ಪೂರ್ಣ ಸುಳ್ಳು ಎಂದಿದ್ದಾರೆ.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳು
ನನಗೆ ಅವರೇನೂ ಟಿಕೆಟ್ ನೀಡಿಲ್ಲ. ಹಾಲಿ ಶಾಸಕನಾಗಿದ್ದರಿಂದ ಟಿಕೆಟ್ ನೀಡಲಾಯಿತು. ಆ ಸಂದರ್ಭದಲ್ಲಿ ನನ್ನೊಂದಿಗೆ ಕಾರಿನಲ್ಲಿ ಬಂದಿದ್ದ ಶ್ರೀನಿವಾಸ್ ಪ್ರಸಾದ್, ವಿಧಾನಸಭೆಯ 3 ಮೀಸಲು ಕ್ಷೇತ್ರಗಳಿವೆ. ಅದರಲ್ಲಿ ಯಾವುದರಲ್ಲಿ ಬೇಕಾದರೂ ಸ್ಪರ್ಧಿಸು ಎಂದರು. ಆಗ ನಾನು, 'ನೀವು, ಮಹದೇವಪ್ಪ ಸ್ಪರ್ಧಿಸುವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿರಿ. ಉಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ' ಎಂದು ಹೇಳಿದೆ ಎಂದು ಧ್ರುವನಾರಾಯಣ ವಿವರಿಸಿದ್ದಾರೆ.
2009ರ ಲೋಕಸಭಾ ಚುನಾವಣೆಯಲ್ಲಿಯೂ ನನಗೆ ಟಿಕೆಟ್ ಕೊಡಿಸಿರುವುದಾಗಿ ಪ್ರಸಾದ್ ಅವರು ಪುಸ್ತಕದಲ್ಲಿ ಸುಳ್ಳು ಹೇಳಿದ್ದಾರೆ. ವಾಸ್ತವವಾಗಿ ನಾನು ಲೋಕಸಭಾ ಚುನಾವಣೆಯ ಟಿಕೆಟ್ ಗಾಗಿ ಅರ್ಜಿಯನ್ನು ಸಲ್ಲಿಸಿಯೇ ಇರಲಿಲ್ಲ. 2 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತವಿರಲಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಆದರೆ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಶ್ರೀನಿವಾಸಪ್ರಸಾದ್ ಹಾಗೂ ಮಹದೇವಪ್ಪ ಜತೆ ಚರ್ಚಿಸಿದ್ದಾರೆ. ಕೊನೆಗೆ ನನಗೆ ಚಾಮರಾಜನಗರ ಲೋಕಸಭಾ ಕ್ಷೇತದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ. ಇದರಲ್ಲಿ ಶ್ರೀನಿವಾಸ್ ಪ್ರಸಾದ್ ಪಾತ್ರವೇನೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ರ ಮೇಲೆ ಅಪಾರ ಗೌರವ ಹೊಂದಿದ್ದರು. ಮೈಸೂರಿಗೆ ಬಂದಾಗಲೆಲ್ಲಾ ಎಲ್ಲಿ ನನ್ನ ಯಜಮಾನ ಎಂದು ಕೇಳುತ್ತಿದ್ದರು. ಅವರಿಗೆ ಸಚಿವ ಸ್ಥಾನವನ್ನೂ ನೀಡಿದ್ದರು. ಆದರೆ ಇದ್ಯಾವುದನ್ನು ಪರಿಗಣಿಸದ ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿಗಳ ಬಗ್ಗೆ ಸಲ್ಲದ ಮಾತುಗಳನ್ನು ಆಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಖಂಡನಾರ್ಹ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸೋಲುಂಡ ಅವರು ಹತಾಶರಾಗಿದ್ದಾರೆ. ಸತ್ಯ ಸಂಗತಿಗಳನ್ನು ಮರೆ ಮಾಚಿ ಪುಸ್ತಕ ಪ್ರಕಟಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಧ್ರುವನಾರಾಯಣ್ ಪ್ರತಿಕ್ರಿಯಿಸಿದ್ದಾರೆ.