ಐರ್ಲೆಂಡ್ ನಲ್ಲಿ ಮೈಸೂರಿನ ತಾಯಿ-ಮಕ್ಕಳ ಕೊಲೆ: ಪತಿಯಿಂದಲೇ ದುಷ್ಕೃತ್ಯದ ಶಂಕೆ ?
ಮೈಸೂರು, ನವೆಂಬರ್ 1: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಮೂಲದ ಮಹಿಳೆ ಮತ್ತು ಅವರ ಇಬ್ಬರು ಮಕ್ಕಳು ಐರ್ಲೆಂಡಿನಲ್ಲಿ ಮೃತರಾಗಿದ್ದು, ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಮಹಿಳೆಯ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಐರ್ಲೆಂಡ್ ನ ದಕ್ಷಿಣ ಡಬ್ಲಿನ್ನಲ್ಲಿ ನೆಲೆಸಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ನಲ್ಲಿರುವ ಬಾನು(37), ಮಗಳು ಅಫ್ರಿಯಾ(11) ಮಗ ಫಜಾನ್(6) ತಮ್ಮ್ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ವೈದ್ಯರ ಪತ್ನಿಗೆ ಕೊರೊನಾ; 7 ತಿಂಗಳಾದರೂ ತೆರೆಯಲೇ ಇಲ್ಲ ಆಸ್ಪತ್ರೆ
ಹಲಗನಹಳ್ಳಿಯ ಅಬ್ದುಲ್ ಗಫಾರ್ ಅವರ ಪುತ್ರಿ ಸೀಮಾ ಬಾನು ಅವರನ್ನು ಮೈಸೂರಿನ ಸಾಫ್ಟ್ವೇರ್ ಇಂಜಿನಿಯರ್ ಸಮೀರ್ ಅವರಿಗೆ ಕಳೆದ 13 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿದ್ದು, ಈತ ಉದ್ಯೋಗಕ್ಕಾಗಿ ದುಬೈಗೆ ಹೋಗಿದ್ದ. ನಂತರ ಕಳೆದ ಫೆಬ್ರವರಿ ತಿಂಗಳಲ್ಲಿ ಹೆಚ್ಚಿನ ಸಂಭಾವನೆ ಪಡೆಯುವ ಉದ್ದೇಶದಿಂದ ಕಂಪನಿ ಬದಲಾವಣೆ ಮಾಡಿ ಕುಟುಂಬ ಸಮೇತರಾಗಿ ಐರ್ಲೆಂಡಿನ ಡಬ್ಲಿನ್ಗೆ ಕರೆದೊಯ್ದಿದ್ದಾನೆ.
ಇದರ ನಡುವೆ ಈತ ಐರ್ಲೆಂಡಿನಲ್ಲಿ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 4 ದಿನಗಳಲ್ಲಿ ತೀರ್ಪು ಬರುವುದಿತ್ತು. ಇದಕ್ಕೂ ಮುನ್ನವೇ ಹತ್ಯೆಯಾಗಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಮಕ್ಕಳನ್ನು ಒಂದು ಕೊಠಡಿಯಲ್ಲಿ, ಹೆಂಡತಿಯನ್ನು ಮತ್ತೊಂದು ಕೊಠಡಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಬೇಕಿದೆ. ತನ್ನ ಸುತ್ತಮುತ್ತಲಿನ ನಿವಾಸಿಗಳ ಜೊತೆ ಉತ್ತಮ ಸಂಬಂಧದಲ್ಲಿದ್ದ ಸೀಮಾ ಬುಧವಾರದಿಂದ ಯಾರಿಗೂ ಕಾಣಿಸಿರಲಿಲ್ಲ. ಹೀಗಾಗಿ, ಅನುಮಾನ ಬಂದು ಸಮೀಪದ ನಿವಾಸಿಗಳು ಮನೆಗೆ ಬಂದು ವೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ಈಕೆಯ ಪತಿಯೇ ಹಲ್ಲೆ ನಡೆಸಿ ಕುಟುಂಬದವರಿಗೆ ಫೋನ್ ಕರೆ ಮಾಡದಂತೆ ಮೊಬೈಲ್ ಫೋನ್ ಕಿತ್ತುಕೊಂಡಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ʻಆಸ್ತಿಯ ವಿಚಾರಕ್ಕೆ ಪತಿಯೊಂದಿಗೆ ಉಂಟಾದ ಕಲಹದಿಂದ ಬೇಸರಗೊಂಡು ಭಾರತಕ್ಕೆ ವಾಪಸ್ ಬಂದಿದ್ದರು. ನಂತರ ಫೆಬ್ರವರಿಯಲ್ಲಿ ಮತ್ತೆ ಪತಿಯೊಂದಿಗೆ ಐರ್ಲೆಂಡಿಗೆ ತೆರಳಿದ್ದರು. ಮೇ ತಿಂಗಳಿನಲ್ಲಿ ಪತಿ ವಿರುದ್ಧ ಇವರು ಅಲ್ಲಿನ ಪೊಲೀಸರಿಗೆ ದೌರ್ಜನ್ಯ ಎಸಗಿದ ಕುರಿತು ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರನ್ನು ಪ್ರತ್ಯೇಕವಾಗಿರಿಸಿತ್ತು. ದೌರ್ಜನ್ಯ ಕುರಿತು ತೀರ್ಪು ಹೊರಬರುವುದಕ್ಕೆ ಕೆಲವೇ ದಿನಗಳು ಇರುವಂತೆ ಕೊಲೆಯಾಗಿದೆʼ ಎಂದು ಸೀಮಾಬಾನು ಸೋದರ ಮೊಹಮ್ಮದ್ ಘಸನ್ ಪುತ್ರ ಅಬು ತಿಳಿಸಿದರು.
ʻಸ್ವಲ್ಪ ದಿನಗಳ ಹಿಂದೆಯಷ್ಟೇ ಸೀಮಾಬಾನು ವಿಡಿಯೋ ಕಾಲ್ ಮಾಡಿ, ಪತಿ ತನ್ನನ್ನು ಉಳಿಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಅ.25 ರಿಂದ ಯಾವುದೇ ಕರೆ ಬಂದಿಲ್ಲ. ಅ.28 ರಂದು ಕೊಲೆಯಾಗಿರುವ ವಿಚಾರ ಗೊತ್ತಾಯಿತು. ಈಗ ಮೃತದೇಹಗಳನ್ನು ನಮಗೆ ಹಸ್ತಾಂತರಿಸಬೇಕು. ಕೊಲೆಗಾರರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕುʼ ಎಂದು ಸೀಮಾಬಾನು ಸೋದರ ಮೊಹಮ್ಮದ್ ಘಸನ್ ಮನವಿ ಮಾಡಿದರು.
ಮೈಸೂರು ಸಂಸದ ಪ್ರತಾಪ್ಸಿಂಹ, ಅವರು ಮೃತದೇಹಗಳನ್ನು ಭಾರತಕ್ಕೆ ತರಲು ಸಹಕರಿಸುವುದಾಗಿ ತಿಳಿಸಿದ್ದಾರೆ.